ವಿಜಯಪುರ: ರಾಮ ಮಂದಿರ ಉದ್ಘಾಟನೆಯ ಈ ಐತಿಹಾಸಿಕ ಕ್ಷಣವು, ನಮ್ಮೆಲ್ಲರ ಜೀವನದಲ್ಲಿ ಅದೃಷ್ಟವಶಾತ್ ಬಂದಿದೆ. ಈ ಅಮೂಲ್ಯ ಕ್ಷಣಕ್ಕೆ ನಾವೆಲ್ಲ ಸಾಕ್ಷಿಯಾಗಲು, ಪ್ರತಿಯೊಬ್ಬರ ಮನೆಯಲ್ಲಿ ದೀಪ ಬೆಳಗಿಸುವಂತೆ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಕರೆ ನೀಡಿದ್ದು, ನಗರದಲ್ಲಿ ಕನಿಷ್ಠ ಒಂದು ಲಕ್ಷ ದೀಪೋತ್ಸವ ಬೆಳಗಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 500 ವರ್ಷಗಳ ತಪಸ್ಸು, ಕೊಟ್ಯಂತರ ಹಿಂದೂ ಕಾರ್ಯಕರ್ತರು, ಸ್ವಾಮೀಜಿಗಳು, ಸಾಧು-ಸಂತರ ಕನಸು ನನಸಾಗುತ್ತಿದೆ. ಜ.22 ನಮ್ಮ ದೇಶದ ಭವಿಷ್ಯದ, ಭಾರತದ ಸ್ವಾಭಿಮಾನದ ಸಂಕೇತ, ಹಿಂದುತ್ವದ ಸ್ವಾಭಿಮಾನದ ಸಂಕೇತ, ಮೊಘಲರ ದಬ್ಬಾಳಿಕೆಯ ಗುಲಾಮಗಿರಿ ತೊಲಗಿಸಿದ ಸಂಕೇತದ ದಿನವಾಗಿದೆ. ಈ ದಿನ ಅವಿಸ್ಮರಣೀಯಗೊಳಿಸಲು, ಅಯೋಧ್ಯ ರಾಮ ಮಂದಿರ ಉದ್ಘಾಟನೆಯ ದಿನವಾದ ಜ.22 ರಂದು ನಗರದಲ್ಲಿ ಕನಿಷ್ಠ ಒಂದು ಲಕ್ಷ ದೀಪ ಬೆಳಗಬೇಕು. ಈ ನಿಟ್ಟಿನಲ್ಲಿ ಪ್ರತಿ ಹಿಂದುಗಳ ಮನೆಯ ಆವರಣದಲ್ಲಿ ಕನಿಷ್ಠ ಐದು ದೀಪಗಳನ್ನು ಬೆಳಗಿಸಬೇಕು.
ದೀಪಾವಳಿ ಸಂದರ್ಭದಲ್ಲಿ ನಗರದ 11 ಸಾವಿರ ಬಡ ಕುಟುಂಬಗಳಿಗೆ ಐದು ಪಣತೆ ಒಳಗೊಂಡಂತೆ, ರೂ.2 ಸಾವಿರ ಮೊತ್ತದ ಬಟ್ಟೆ ಮತ್ತು ದವಸ ಧಾನ್ಯ, ಪಣತೆ ಒಳಗೊಂಡ ಕಿಟ್ ನೀಡಲಾಗಿತ್ತು. ಅದನ್ನು ಸದ್ಬಳಕೆ ಮಾಡಿಕೊಂಡು, ದೀಪಾವಳಿ ದಿನ ನಗರದ ಪ್ರತಿಯೊಂದು ಹಿಂದೂಗಳ ಮನೆಯಲ್ಲಿ ದೀಪಗಳು ಪ್ರಜ್ವಲಿಸಿದಂತೆ, ಜ.22 ರ ರಾತ್ರಿ ರಾಮ ಮಂದಿರ ಉದ್ಘಾಟನೆ ದಿನವೂ ಕೂಡ ನಗರದ ಎಲ್ಲರ ಮನೆಯ ಆವರಣದಲ್ಲಿ ಕನಿಷ್ಠ 5 ದೀಪಗಳನ್ನು ಬೆಳಗಿಸಬೇಕು. ಅಲ್ಲದೆ, ನಗರದ ಎಲ್ಲ ದೇವಸ್ಥಾನಗಳಲ್ಲಿ ಹೋಮ, ಹವನ, ವಿಶೇಷ ಪೂಜೆ ಹಮ್ಮಿಕೊಳ್ಳುವ ಮೂಲಕ ಈ ಕಾರ್ಯಕ್ರಮ ಅವಿಸ್ಮರಣೀಯ ಗೊಳಿಸಬೇಕು ಎಂದು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

