ಲಿಂಬೆ ನಾಡಿನಲ್ಲಿ ರಾಮನಾಮ ಜಪ | ಶರವೇಗದಲ್ಲಿ ಸಾಗುತ್ತಿರುವ ಮಂತ್ರಾಕ್ಷತೆ ಕಾರ್ಯ
*– ಶಂಕರಲಿಂಗ ಜಮಾದಾರ*
ಇಂಡಿ: ಭಾರತದ ಸನಾತನ ಯಾತ್ರೆಯಲ್ಲಿ ಹಿಂದೂ ಧರ್ಮದ ಧಾರ್ಮಿಕ, ಸಾಂಸ್ಕೃತಿಕ ಚರಿತ್ರೆಯ ಇತಿಹಾಸದಲ್ಲಿ ದೇವತಾ ಪುರುಷರಾಗಿರುವ ಪ್ರಭು ಶ್ರೀರಾಮಚಂದ್ರರ ಪ್ರಾಣ ಪ್ರತಿಷ್ಠಾನ ಸಮಾರಂಭ ಅಯೋಧ್ಯೆಯಲ್ಲಿ ಜರಗುತ್ತಿರುವ ಪ್ರಯುಕ್ತ ಲಿಂಬೆ ನಾಡಿನಲ್ಲಿ ಮಂತ್ರಾಕ್ಷತೆ ಹಂಚುವ ಪವಿತ್ರ ಕಾರ್ಯ ಅತ್ಯಂತ ಸಡಗರ- ಸಂಭ್ರಮದಿಂದ ನಡೆಯುತ್ತಿದೆ.
ಭವಿಷ್ಯದ ಜಿಲ್ಲಾ ಕೇಂದ್ರ ಎಂದು ಬಿಂಬಿತಗೊಂಡು, ಸದ್ಯ ಪ್ರತ್ಯೇಕ ಜಿಲ್ಲಾ ಕೇಂದ್ರಕ್ಕಾಗಿ ಅತೀ ಹೆಚ್ಚು ಪ್ರತಿಭಟನೆ ನಡೆಸುತ್ತಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಅತ್ಯಂತ ವೈಶಿಷ್ಟ್ಯದಿಂದ ಮಂತ್ರಾಕ್ಷತೆ ಹಂಚುವ ಮತ್ತು ಸ್ವೀಕರಿಸುವ ಕಾರ್ಯ ಅದ್ದೂರಿಯಿಂದ ನಡೆಯುತ್ತಿದೆ.
*ಭೀಮಾತೀರದಲ್ಲಿ ರಾಮನಪೂಜೆ*
ರಾಜ್ಯದಲ್ಲಿಯೇ ಲಿಂಬೆನಾಡು ಭೀಮಾ ತೀರ ಎಂದೇ ಪ್ರಖ್ಯಾತಿ ಹೊಂದಿರುವ ಇಂಡಿಯ ಪ್ರತಿ ಮನೆ ಮನೆಯಲ್ಲೂ ಅತ್ಯಂತ ಸಡಗರ-ಸಂಭ್ರಮದೊಂದಿಗೆ ಶ್ರೀರಾಮನ ಭಾವಚಿತ್ರ, ಕರಪತ್ರ ಹಾಗೂ ಮಂತ್ರಾಕ್ಷತೆ ಕಾರ್ಯ ಸ್ವೀಕರಿಸುವಲ್ಲಿ, ಅದರಲ್ಲೂ ವಿಶೇಷವಾಗಿ ಗೃಹಣಿಯರು ಅರಿಶಿಣ, ಕುಂಕುಮ ಹಚ್ಚಿ ಮತ್ತು ಮಂಗಳರಾತಿ ಬೆಳಗಿ ಮಂತ್ರಾಕ್ಷತೆ ಸ್ವೀಕರಿಸುತ್ತಿರುವ ವಿಶೇಷ ಸ್ಮರಣಿಯ ಘಳಿಗೆಯಾಗಿ, ಹೃದಯಸ್ಪರ್ಶಿ ಮಂತ್ರಾಕ್ಷತೆ ವಿತರಿಸುವ, ಸ್ವೀಕರಿಸುವ ಕಾರ್ಯ ಸಡಗರದಿ ನಡೆಯುತ್ತಿದೆ.
*ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಸಮಯ*
ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಸಮಯ ಸನ್ನಿಹಿತವಾಗಿದೆ. ಕೋಟ್ಯಂತರ ಭಕ್ತರು ಈಗಾಗಲೇ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ನಾನಾ ರೀತಿಯ ಕೊಡುಗೆ ನೀಡಿದ್ದಾರೆ. ಈಗ ರಾಮಮಂದಿರ ನಿರ್ಮಾಣಕ್ಕೆ ಕಾಣಿಕೆ ನೀಡಿರುವವರ ಮನೆಬಾಗಿಲಿಗೆ ಪ್ರಸಾದ ತಲುಪಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಮನೆಗೂ ರಾಮದೇವರ ಪ್ರಸಾದವನ್ನು ತಲುಪಿಸುವ ಹಿತದೃಷ್ಟಿಯಿಂದ ಪ್ರತಿ ಊರು, ಗ್ರಾಮಗಳಿಗೂ ಮಂತ್ರಾಕ್ಷತೆ, ಭಾವಚಿತ್ರ ತಲುಪಿಸುವ ವ್ಯವಸ್ಥೆಯನ್ನು ಅತ್ಯಂತ ಭಕ್ತಿಪೂರ್ವಕ ಮಾಡಲಾಗಿದೆ ಎಂದು ರಾಮ ಭಕ್ತರು ನುಡಿಯುತ್ತಾರೆ.
ಇಂಡಿ ಪಟ್ಟಣದಲ್ಲಿ ೨೩ ವಾರ್ಡಗಳ ಸಹಿತ ಒಟ್ಟು ೨೮ ಮಂಡಲ, ೭ ಹೋಬಳಿ, ೧೪೩ ಗ್ರಾಮ ಒಟ್ಟು ವಸತಿ ೪೩೦ ಪ್ರದೇಶದಲ್ಲಿ ಬೇಟಿ ನೀಡುವ ಪ್ರಕ್ರಿಯೆ ನಡೆದಿದ್ದು, ಈಗಾಗಲೇ ಸುಮಾರು ೪೬ ಸಾವಿರ ಕರಪತ್ರ ಮತ್ತು ಶ್ರೀರಾಮಚಂದ್ರನ ಭಾವಚಿತ್ರ ಹಂಚಿಕೆ ಮಾಡಲಾಗಿದೆ. ಸುಮಾರು ೫೫ ಸಾವಿರಕ್ಕಿಂತಲೂ ಹೆಚ್ಚಿನ ಜನರಿಗೆ ಮಂತ್ರಾಕ್ಷತೆ ವಿತರಿಸಲಾಗಿದೆ. ಇನ್ನು ತಾಲ್ಲೂಕಿನಲ್ಲಿ ಲಕ್ಷಕ್ಕಿಂತಲೂ ಹೆಚ್ಚಿನ ಜನರು ಮಂತ್ರಾಕ್ಷತೆ ನಿರೀಕ್ಷೆಯಲ್ಲಿದ್ದಾರೆ.
ಒಟ್ಟಾರೆಯಾಗಿ ಮಂತ್ರಾಕ್ಷತೆ ರೂಪದಲ್ಲಿ ದೇವರೇ ಮನೆಗೆ ಬರಲಿದ್ದಾರೆ. ಅದನ್ನು ಪ್ರಜ್ಞಾಪೂರ್ವಕವಾಗಿ ಪೂಜೆ ಮಾಡುವ ಪ್ರತಿಜ್ಞೆ ಮಾಡಬೇಕು. ಜ.೨೨ರಂದು ಪ್ರತೀ ಗ್ರಾಮದಲ್ಲಿ ರಾಮ ಸೀಯಾರಾಮ ಭಜನೆ ಹಾಡುಗಳನ್ನು ಹಾಡಬೇಕು. ಸಂಜೆ ೫ ಗಂಟೆಗೆ ಜ್ಯೋತಿ ಬೆಳಗಿ ಉತ್ತರ ದಿಕ್ಕಿಗೆ ಆರತಿ ಬೆಳಗುವ ಮೂಲಕ ಇದನ್ನು ಅವಿಸ್ಮರಣೀಯ ದಿನವನ್ನಾಗಿಸಬೇಕು ಎಂದು ಕಾರ್ಯಕರ್ತರು ತಿಳಿಸುತ್ತಿದ್ದಾರೆ.
ರಾಜ್ಯಾಂಗ, ನ್ಯಾಯಾಂಗ ಕಾರ್ಯಾಂಗದ ಮೂಲಕ ದೇಶದ ಕೋಟ್ಯಾಂತರ ಭಕ್ತರ ಆಶಯದೊಂದಿಗೆ ಇದೆ ಜ.೨೨ ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಯೋಧ್ಯೆ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನವಾಗುತ್ತಿರುವ ಸಮಯದಲ್ಲಿ ಜನರಲ್ಲಿ ಭಯ-ಭಕ್ತಿ ಮೂಡುತ್ತಿದೆ. ದೇಶಾದ್ಯಂತ ನಡೆಯುತ್ತಿರುವ ಈ ಮಂತ್ರಾಕ್ಷತೆ ಕಾರ್ಯಕ್ರಮಕ್ಕೆ ಇಂಡಿಯ ಜನರು ಸಂಪೂರ್ಣವಾಗಿ ಭಕ್ತಿಪೂರ್ವಕ ಪೂಜ್ಯ ಭಾವನೆಯಿಂದ ಸ್ಪಂದನೆಯಾಗುತ್ತಿದ್ದು, ಅದು ಈ ಯುಗದ ಹೊಸ ಧಾರ್ಮಿಕ ಚಿಂತನೆಗೆ ನಾಂದಿ ಹಾಡಿದೆ. ಸಾವಿರಾರು ಕರಸೇವಕರ ತ್ಯಾಗ ಬಲಿದಾನಗಳಿಂದ ಹಾಗೂ ಕೋಟ್ಯಾಂತರ ಜನರ ಸಂಕಲ್ಪದೊಂದಿಗೆ ಈ ಸಮಾರಂಭ ನೇರವೇರುತ್ತಿರುವುದು ಈ ಭಾಗದ ಜನರಿಗೆ ಎಲ್ಲಿಲ್ಲದ ಖುಷಿ ತಂದಿದೆ.

