ಜೆಎಸ್ಎಸ್ ಆಸ್ಪತ್ರೆಯಲ್ಲಿ ಆರೋಗ್ಯ ದೀಪೋತ್ಸವ | ರೋಗಿಗಳಿಗೆ ಹಬ್ಬದ ವಾತಾವರಣ | ಶೈಲಜಾ ಪಾಟೀಲ ಅಭಿಮತ
ವಿಜಯಪುರ: ಆಸ್ಪತ್ರೆ ಎಂದರೆ ಕೇವಲ ಆರೋಗ್ಯ ಸುಧಾರಣಾ ಕೇಂದ್ರಗಳಾಗುವುದಕ್ಕಿಂತ ಸ್ವಾಸ್ಯ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿ ಕೇಂದ್ರಗಳಾಗಬೇಕು. ಆರೋಗ್ಯದ ಜೊತೆಯಲ್ಲಿ ಸಂಸ್ಕಾರ, ಸಂಸ್ಕೃತಿಯನು ಉಳಿಸುವ ಕಾಯಕವನ್ನು ಮಾಡಬೇಕು ಎನ್ನುವುದಕ್ಕೆ ನಮ್ಮ ಜೆಎಸ್ಎಸ್ ಆಸ್ಪತ್ರೆ ಸಾಕ್ಷಿಯಾಗಿದೆ ಎಂದು ಶ್ರೀಮತಿ ಶೈಲಜಾ ಬಸನಗೌಡ ಪಾಟೀಲ್ ಯತ್ನಾಳ ಅವರು ಹೇಳಿದರು.
ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಜನ್ಮ ದಿನೋತ್ಸವ ಹಾಗೂ ದೀಪಾವಳಿ ಅಂಗವಾಗಿ ಆಯೋಜಿಸಲಾಗಿದ್ದ ‘ಆರೋಗ್ಯ ದೀಪೋತ್ಸವ’ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು; ಇಂದು ನಮ್ಮ ದೇಶದ ಸಂಸ್ಕಾರ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಬ್ಬ ಹರಿದಿನಗಳ ಬಗ್ಗೆ ಮಕ್ಕಳಲ್ಲಿ ಜ್ಞಾನ ಮೂಡಿಸಿ ನಮ್ಮ ದೇಶದ ಬಗ್ಗೆ ಅಭಿಮಾನ ಉಂಟು ಮಾಡಬೇಕಾದ ಗುರುತರ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಈ ಜವಾಬ್ದಾರಿಯನ್ನು ಅರಿತುಕೊಂಡು ಹೆಜ್ಜೆ ಹಾಕುತ್ತಿರುವ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಪೂಜ್ಯರ ಜನ್ಮದಿನೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ ರೋಗಿಗಳು ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಹಾಗೂ ಅವರ ಸಂಬಂಧಿಕರ ಆದಿಯಾಗಿ ಎಲ್ಲರನ್ನು ಒಳಗೊಂಡಂತೆ ಆರೋಗ್ಯ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ನಿಜಕ್ಕೂ ಮಾದರಿಯ ಕಾರ್ಯವಾಗಿದೆ ಎಂದರು.
ಪೂಜ್ಯರ ಜನ್ಮ ದಿನದ ನಿಮಿತ್ಯವಾಗಿ ಬೆಳಿಗ್ಗೆ ರೋಗಿಗಳಿಗೆ ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜ್ಞಾನಯೋಗಾಶ್ರಮದ ಪೂಜ್ಯ ಬಸವಲಿಂಗ ಸ್ವಾಮೀಗಳು ಮಾತನಾಡಿ; ಬುದ್ಧೀಜಿ ಅವರ ಹೆಸರಿನಲ್ಲಿ ಪ್ರಾರಂಭಗೊಂಡ ಈ ಆಸ್ಪತ್ರೆಯು ಕಡಿಮೆ ಅವಧಿಯಲ್ಲಿ ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿದೆ. ಸಾರ್ವಜನಿಕರಿಗೆ ನೆರವಾಗುವ ಮೂಲಕ ಉತ್ತಮ ಸಮಾಜಸೇವೆ ಮಾಡುತ್ತಲಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡುವ ಮೂಲಕ ಆಸ್ಪತ್ರೆಯನ್ನೇ ಸಾರ್ವಜನಿಕರ ಬಳಿ ತೆಗೆದುಕೊಂಡು ಹೋಗಿ ನೆರವಾಗುವುದರೊಂದಿಗೆ, ಸನಾತನ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗೂ ಸಜ್ಜನ, ಜೆಎಸ್ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್, ಸೀಮಾ ಕೋರೆ, ಶಿಕ್ಷಕಿ ಮಾಧುರಿ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಲೀಲಾವತಿ ಸೇರಿದಂತೆ ಸ್ಥಳೀಯರು ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.