ದೇವರಹಿಪ್ಪರಗಿ: ಬೆಳಕಿನ ಹಬ್ಬ ದೀಪಾವಳಿಯ ಅಮವಾಸ್ಯೆ ಪೂಜೆಯ ಅಂಗವಾಗಿ ಹೂ, ಹಣ್ಣು, ಕುಂಬಳಕಾಯಿ ಸೇರಿದಂತೆ ಹಣತೆ, ಅಲಂಕಾರಿಕ ವಸ್ತುಗಳ ಮಾರಾಟ ಭರದಿಂದ ಜರುಗಿತು.
ಪಟ್ಟಣದಲ್ಲಿ ದೀಪಾವಳಿ ಅಮವಾಸ್ಯೆಯನ್ನು ಭಾನುವಾರ ಹಾಗೂ ಸೋಮವಾರ ಎರಡು ದಿನಗಳಂದು ಆಚರಿಸಲಾಗುತ್ತಿದೆ. ವ್ಯಾಪಾರಸ್ಥರು ತಮ್ಮ ಅಂಗಡಿ, ಮಾರಾಟ ಮಳಿಗೆಗೆಳ ಲಕ್ಷ್ಮೀ-ಕುಬೇರರ ಪೂಜೆಗಾಗಿ ಬಾಳೇಗಿಡ, ಕಬ್ಬು, ತೆಂಗಿನ ಪರಕೆ, ಶೃಂಗಾರ ವಸ್ತಗಳ ಸಹಿತ ಖಾತೆಪುಸ್ತಕ, ಹೂಹಣ್ಣುಗಳನ್ನು ಬೆಳಿಗ್ಗೆಯೇ ಖರೀದಿಸಿದರು. ಪೂಜೆಗಾಗಿ ರಾತ್ರಿ ಅಂಗಡಿ ಮಳಿಗೆಗಳನ್ನು ಹೂ-ಹಾರ, ವಿದ್ಯುತ್ ದೀಪಗಳೊಂದಿಗೆ ಸಿಂಗರಿಸಿದರು. ಹೊಸ ಬಟ್ಟೆಗಳನ್ನು ಧರಿಸಿ ಮನೆ ಮಂದಿಯೆಲ್ಲಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಹಿಳೆಯರು ವಿಶೇಷವಾಗಿ ಮುತೈದಿಯರ ಪೂಜೆಯಲ್ಲಿ ನಿರತರಾಗಿದ್ದರೆ, ಸರ್ಕಾರದ ಈ ಬಾರಿ ಪಟಾಕಿ ನಿಷೇದಿಸಿದ ಕಾರಣ ಮಕ್ಕಳಲ್ಲಿ ನಿರುತ್ಸಾಹ ಕಂಡು ಬಂತು. ಭಾನುವಾರ ಸಂಜೆ ಆರಂಭಗೊಂಡ ಪೂಜಾ ವಿಧಿವಿಧಾನಗಳು ತಡ ಮಧ್ಯರಾತ್ರಿಯವರೆಗೆ ಜರುಗಿದವು.
ಸೋಮವಾರ ಬೆಳಿಗ್ಗೆ ಬಹುತೇಕ ಮನೆಗಳಲ್ಲಿ ಅಮವಾಸ್ಯೆ ಆಚರಿಸುತ್ತಿರುವುದರಿಂದ ಲಕ್ಷಿö್ಮ ಪೂಜೆಯ ಅಂಗವಾಗಿ ಕುಂಬಳಕಾಯಿ ಸೇರಿದಂತೆ ಪೂಜಾ ಕಾರ್ಯಕ್ರಮಗಳನ್ನು ಖರೀದಿಸಲು ಜನ ಬೆಳಿಗ್ಗೆ ಹಾಗೂ ಸಾಯಂಕಾಲ ಆಗಮಿಸಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಜಾತ್ರೆಯಂತೆ ಜನಸಂದಣಿ ಕಂಡು ಬಂತು. ಇದರಿಂದ ರಾಷ್ಟ್ರೀಯ ಹೆದ್ದಾರಿ ಜನಸಂದಣಿಯಿಂದ ತುಂಬಿ ವಾಹನಗಳು ಸಾಲಾಗಿ ನಿಂತಿರುವುದು ಕಂಡು ಬಂತು.
ಅಮವಾಸ್ಯೆಯ ಪೂಜಾ ಸಾಮಾಗ್ರಿಗಳಾದ ಚೆಂಡು ಹೂವು, ಶಾವಂತಿಗೆ ಹೂಗಳ ಬೆಲೆ ಕಿಲೋ ಒಂದಕ್ಕೆ ೧೦೦ರಿಂದ ೨೦೦ ರೂ, ಬಾಳೆದಿಂಡು ಜೋಡಿ ಒಂದಕ್ಕೆ ೪೦-೧೦೦ ರೂ, ಐದು ತರದ ಹಣ್ಣುಗಳಿಗೆ ೪೦-೨೫೦ ರೂ, ಕುಂಬಳಕಾಯಿ ೫೦-೧೦೦ ರೂ, ಹೂವಿನ ಹಾರ ೪೦-೧೦೦ರೂ, ಗಳವರೆಗೆ ಮಾರಲ್ಪಟ್ಟವು.
ಭಾನುವಾರದ ಅಮವಾಸ್ಯೆ ದಿನ ಮಹಿಳೆಯರು ಸೇರಿದಂತೆ ಮನೆಯವರೆಲ್ಲರೂ ಮನೆ, ಅಂಗಡಿ, ವಾಹನಗಳನ್ನು ಹೂಗಳಿಂದ ತಳಿರುತೋರಣಗಳನ್ನು ಸಿದ್ಧಪಡಿಸಿ ಸಿಂಗರಿಸಿದರು. ನಂತರ ಶಾಸ್ತ್ರೋಕ್ತವಾಗಿ ಲಕ್ಷ್ಮಿ ಪೂಜೆ ಕೈಗೊಂಡು ನಂತರ ಮುತೈದೆಯರಿಗೆ ಹಾಗೂ ಬಾಲ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮಗಳನ್ನು ನೆರವೇರಿಸಿದರು. ಚಿಕ್ಕಮಕ್ಕಳು ಹೊಸ ಬಟ್ಟೆಗಳೊಂದಿಗೆ ಸಂಭ್ರಮಿಸಿದರು.
![IMG 20231113 WA0012 2](https://udayarashminews.com/wp-content/uploads/2023/11/IMG-20231113-WA0012-2-1024x584.jpg)