ಬಸವನಬಾಗೇವಾಡಿ: ಮಠಗಳು ಸಮಾಜಕ್ಕೆ ಸಂಸ್ಕಾರ ನೀಡುವಲ್ಲಿ ಬಹು ಪ್ರಮುಖ ಪಾತ್ರವಹಿಸುತ್ತವೆ. ಮಠಗಳಿಂದ ಆಧ್ಯಾತ್ಮಿಕ ಕಾರ್ಯ ನಿತ್ಯ ನಿರಂತರವಾಗಿ ನಡೆಯುವಂತಿರಬೇಕು. ಇಂದಿನ ಯುವಜನಾಂಗಕ್ಕೆ ಒಳ್ಳೆಯ ಸಂಸ್ಕಾರ ನೀಡುವದು ತುಂಬಾ ಮುಖ್ಯವಾಗಿದೆ ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಸಿದ್ರಾಮೇಶ್ವರ ಮಹಾರಾಜ ಮಠದ ಸಪ್ತಾಹದಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಠಗಳು ಸ್ವಾರ್ಥಕ್ಕಾಗಿ ದುಡಿಯುವಂತಾಗಬಾರದು. ಅವು ಸಮಾಜದ ಅಭಿವೃದ್ಧಿಗೆ ಸಂಸ್ಕಾರಯುತ ಶಿಕ್ಷಣ ಕೊಡುವಂತಾಗಬೇಕು. ಮಕ್ಕಳಿಗೆ ಮಠಗಳು ಸಂಸ್ಕಾರ ನೀಡಬೇಕು. ಮಠಗಳಿಂದ ಸಂಸ್ಕಾರ ಸಿಗದೇ ಹೋದರೆ ಮಠಗಳಿಗೂ, ಮನೆಗಳಿಗೂ ಇರುವ ಅಂತರ ಏನು ಎಂದರು.
ಮಾನವ ಜನ್ಮದಲ್ಲಿ ಭಗವಂತನ ಸ್ಮರಣೆ ಮಾಡುವದು ತುಂಬಾ ಮುಖ್ಯ. ಮನುಷ್ಯನಲ್ಲಿ ಭಕ್ತಿ ಇರಬೇಕು. ಭಕ್ತಿಯನ್ನು ಹೃದಯದಲ್ಲಿ ಬಿತ್ತಬೇಕು. ಭಕ್ತಿಯು ನಿತ್ಯ ಜೀವನದಲ್ಲಿ ಉಪಾಸನೆ ಆಗಬೇಕು. ಭಕ್ತಿಯನ್ನು ಎಂದಿಗೂ ಕುಗ್ಗಿಸಬಾರದು. ಅದನ್ನು ಹಿಗ್ಗಿಸುವಂತಾಗಬೇಕು. ಜೀವನದಲ್ಲಿ ನಡೆಯುವ ಘಟನೆಗಳು ನಡದೇ ನಡೆಯುತ್ತವೆ. ಅವು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಮನಸ್ಸನ್ನು ಹದ ಮಾಡಬೇಕು. ಮನಸ್ಸಿಗೆ ಬುದ್ಧಿ ಬರುವಂತೆ ಮಾಡಬೇಕು. ಮನಸ್ಸನ್ನು ತಿದ್ದಿಕೊಳ್ಳಬೇಕು. ಮನಸ್ಸಿಗೆ ಸಂಸ್ಕಾರ ಕೊಡಲು ಆಧ್ಯಾತ್ಮ ಅಗತ್ಯವಿದೆ ಎಂದರು.
ಇಲ್ಲಿನ ಸಿದ್ರಾಮೇಶ್ವರ ಮಹಾರಾಜರ ಮಠದ ಜೀರ್ಣೋದ್ಧಾರ ಕಾರ್ಯ ಆರಂಭವಾಗಿದೆ. ಭಕ್ತರ ಸಹಕಾರದಿಂದ ಮಹಾರಾಜರ ಮಠವನ್ನು ಭವ್ಯವಾಗಿ ನಿರ್ಮಾಣ ಮಾಡಲು ಮುಂದಾಗಿದ್ದು. ಶ್ರೀಮಠದಿಂದ ಸಮಾಜಕ್ಕೆ ಒಳ್ಳೆಯ ಸಂಸ್ಕಾರ ನೀಡುವ ನಿಟ್ಟಿನಲ್ಲಿ ನಿತ್ಯ ನಿರಂತರವಾಗಿ ಕಾರ್ಯ ನಡೆಯುವಂತೆ ಕಾರ್ಯಯೋಜನೆ ಹಾಕಿಕೊಳ್ಳಲಾಗುತ್ತದೆ ಎಂದರು.
ಶಿರೋಳದ ಶಂಕರಾರೂಢ ಸ್ವಾಮೀಜಿ ಮಾತನಾಡಿದರು.
ಅಭಿಯಾನಂದ ಸ್ವಾ ಮೀಜಿ, ಗಿರೀಶಾನಂದ ಸ್ವಾಮೀಜಿ, ತಾರಾನಾಥ ಸ್ವಾಮೀಜಿ, ಡಾ.ಶ್ರೀಧಾನಂದ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು ಸತ್ಸಂಗದಲ್ಲಿ ಭಾಗವಹಿಸಿದ್ದರು.
ಸಚಿವ ಶಿವಾನಂದ ಪಾಟೀಲರ ಸುಪುತ್ರ ಸತ್ಯಜೀತ ಪಾಟೀಲ ಮಾತನಾಡಿದರು. ಸತ್ಸಂಗ ಕಾರ್ಯಕ್ರಮದಲ್ಲಿ ಮುಖಂಡರಾದ ಐ.ಸಿ.ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಅಶೋಕ ಹಾರಿವಾಳ, ಸಂಗಯ್ಯ ಕಾಳಹಸ್ತೇಶ್ವರಮಠ, ಬಸವರಾಜ ನಾಯ್ಕೋಡಿ, ಬಸವರಾಜ ಗಚ್ಚಿನವರ, ಶಿವಾನಂದ ತೋಳನೂರ, ರವಿ ಚಿಕ್ಕೊಂಡ, ವಿನುತ ಕಲ್ಲೂರ, ಬಸವರಾಜ ಚಿಂಚೋಳಿ, ಬಸವರಾಜ ಶೆಂಡೆ, ಶಿವಾನಂದ ಮಂಟಾನವರ ಸೇರಿದಂತೆ ಇತರರು ಭಾಗವಹಿಸಿದ್ದರು. ಈ ಸತ್ಸಂಗ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಜನರು ಆಗಮಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

