–ಸುಮಂಗಲಾ ಹುದ್ದಾರ
ಬಸವನಬಾಗೇವಾಡಿ: ಮುಂಗಾರು-ಹಿಂಗಾರು ಮಳೆ ಸರಿಯಾಗಿ ಬಾರದೇ ಇರುವದರಿಂದ ಬರದ ಛಾಯೆಯಲ್ಲಿಯೇ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಜನರು ಭರದಿಂದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ ಕೆಲ ದಿನಗಳಿಂದ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಹೊಸ ಬಟ್ಟೆ, ಸೀರೆ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಟ್ಟೆ ಅಂಗಡಿಗಳಲ್ಲಿ ಕಂಡು ಬರುತ್ತಿದ್ದಾರೆ. ದೀಪಾವಳಿ ಹಬ್ಬ ಶನಿವಾರದಿಂದ ಆರಂಭವಾಗುತ್ತಿರುವುದರಿಂದಾಗಿ ಶುಕ್ರವಾರ ಬಟ್ಟೆ ಅಂಗಡಿ ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ವಿವಿಧೆಡೆಗಳಿಂದ ಹೆಚ್ಚು ಜನರು ಆಗಮಿಸಿದ್ದು ಕಂಡು ಬಂತು.
ದೀಪಾವಳಿ ಹಬ್ಬಕ್ಕೆ ಬೇಕಾದ ಪೂಜಾ ಸಾಮಗ್ರಿಗಳು, ಆಕಾಶ ಬುಟ್ಟಿ, ಹೊಸ ಬಟ್ಟೆ ಸೇರಿದಂತೆ ಇನ್ನೀತರ ವಸ್ತುಗಳನ್ನು ಖರೀದಿಸುವಲ್ಲಿ ಜನರು ತುಂಬಾ ಬ್ಯುಸಿಯಾಗಿದ್ದಾರೆ. ದೀಪಾವಳಿ ಹಬ್ಬವನ್ನು ಎಲ್ಲ ಜನರು ಆಚರಿಸಲು ಸಿದ್ದಗೊಳ್ಳುತ್ತಿದ್ದಾರೆ. ವರ್ಷಕ್ಕೊಮ್ಮೆ ಬರುವ ಈ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಕಳೆದ ಹಲವು ದಿನಗಳಿಂದಲೇ ಜನರು ತಮ್ಮ ಮನೆ, ಅಂಗಡಿ-ಮುಂಗಟ್ಟುಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಸಂಭ್ರಮದ ದೀಪಾವಳಿ ಹಬ್ಬಕ್ಕೆ ಕ್ಷಣ ಗಣನೆ ಆರಂಭವಾಗಿದೆ.
ವಾಹನ ಹೊಂದಿರುವ ಮಾಲೀಕರು ತಮ್ಮ ವಾಹನಗಳಿಗೆ ಬಣ್ಣ, ತಹರೇವಾರಿ ಹೂ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಗ್ಯಾರೇಜುಗಳಲ್ಲಿಯೂ ವಾಹನಗಳಿಗೆ ಹಬ್ಬಕ್ಕಾಗಿ ತಯಾರಿ ಮಾಡಿಸುವುದು ಕಂಡುಬಂದಿತ್ತು.
ಶನಿವಾರ ನೀರು ತುಂಬುವ ಹಬ್ಬದಿಂದ ಆರಂಭವಾಗುವ ದೀಪಾವಳಿ ಹಬ್ಬ ಐದು ದಿನಗಳ ಕಾಲ ನಡೆಯಲಿದೆ. ಭಾನುವಾರ ಬೆಳಗ್ಗೆ ನರಕ ಚತುದರ್ಶಿ ಮೂಹರ್ತ ಇರುವದರಿಂದಾಗಿ ಬೆಳಗ್ಗೆ ಬೇಗನೆ ಎದ್ದು ಮಕ್ಕಳು, ಪುರುಷರು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಹೆಣ್ಣುಮಕ್ಕಳಿಂದ ಆರತಿ ಮಾಡಿಸಿಕೊಳ್ಳುತ್ತಾರೆ. ಈ ಸಲ ದೀಪಾವಳಿ ಅಮವಾಸ್ಯೆ ಭಾನುವಾರ ಮಧ್ಯಾನ್ಹ ಆರಂಭವಾಗಿ ಸೋಮವಾರ ಮಧ್ಯಾನ್ಹವರೆಗೆ ಇರುವದರಿಂದಾಗಿ ಕೆಲವೆಡೆ ಭಾನುವಾರ, ಕೆಲವೆಡೆ ಸೋಮವಾರ ದೀಪಾವಳಿ ಅಮವಾಸ್ಯೆ ಮಾಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಮಂಗಳವಾರ ಬಲಿಪಾಡ್ಯಮಿ ಇದೆ. ದೀಪಾವಳಿ ಹಬ್ಬದಲ್ಲಿ ಬಗೆ ಬಗೆಯ ಸಿಹಿ ತಿನಿಸುಗಳನ್ನು ಜನರು ಸವಿಯುತ್ತಾರೆ.
ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆ ವಿಶೇಷವಾಗಿ ಚೆಂಡು ಹೂ ಸೇರಿದಂತೆ ವಿವಿಧ ತರಹದ ಹೂಗಳು ಮಾರುಕಟ್ಟೆ ಬರುತ್ತವೆ. ಚೆಂಡು ಹೂ ಈ ಸಲ ಸರಿಯಾಗಿ ಮಳೆ ಬಾರದೇ ಇರುವದರಿಂದಾಗಿ ಇದರ ಬೆಲೆ ದುಬಾರಿಯಾಗುವ ಸಾಧ್ಯತೆಯಿದೆ. ಉಳಿದ ಹೂಗಳು ತುಟ್ಟಿಯಾಗುವ ಸಾಧ್ಯತೆಯಿದೆ. ಹಣ್ಣು-ಹಂಪಲ ದರವೂ ಜಾಸ್ತಿಯಾಗಬಹುದು. ಅಂಗಡಿಗಳಲ್ಲಿ ತಹರೇವಾರಿ ಆಕಾಶಬುಟ್ಟಿಗಳು ಮಾರಾಟಕ್ಕೆ ಬಂದಿವೆ. ಆಕಾಶ ಬುಟ್ಟಿಗಳನ್ನು ಜನರು ಖರೀದಿ ಮಾಡುವದು ಕಂಡುಬಂದಿತ್ತು.
ನೀರು ತುಂಬುವ ಹಬ್ಬದ ದಿನದಿಂದಲೇ ತಮ್ಮ ತಮ್ಮ ಮನೆ, ಅಂಗಡಿಗಳ ಮುಂದೆ ಆಕಾಶ ಬುಟ್ಟಿ ಹಾಕುವ ಜೊತೆಗೆ ದೀಪಗಳನ್ನು ಇಟ್ಟು ದೀಪಾವಳಿ ಆಚರಿಸುತ್ತಾರೆ. ದೀಪಾವಳಿ ಹಬ್ಬವು ಎಲ್ಲರ ಜೀವನದಲ್ಲಿ ಅಂಧಕಾರವನ್ನು ತೊಳೆದು ಹಾಕಿ ಜೀವನದಲ್ಲಿ ಹೊಸ ಬೆಳಕು ಮೂಡಿಸಿಕೊಳ್ಳಬೇಕೆಂಬ ಸಂದೇಶ ನೀಡುತ್ತದೆ.
Related Posts
Add A Comment