ವಿಜಯಪುರ: ಪರಿಸರ ಜಾಗೃತಿ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗಾಗಿ ಡಿಸೆಂಬರ್ 24 ರಂದು ನಗರದಲ್ಲಿ ಆಯೋಜಿಸಲಾಗಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023ರಲ್ಲಿ ಎಲ್ಲರೂ ಸಕ್ರೀಯವಾಗಿ ಪಾಲ್ಗೊಂಡು ಇದನ್ನು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಕರೆ ನೀಡಿದ್ದಾರೆ.
ವೃಕ್ಷೋತ್ಥಾನ್ ಹೆರಿಟೆಜ್ ರನ್- 2023 ಅಂಗವಾಗಿ ನೋಂದಣಿ ಸಮಿತಿಯ ವತಿಯಿಂದ ಇಂದು ಶುಕ್ರವಾರ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ಸರಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಪ್ರಾಚಾರ್ಯರ ಸಭೆಯಲ್ಲಿ ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕೇವಲ ಶೇ. 0.17ರಷ್ಟಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಪ್ರಾರಂಭಿಸಿದ ಕೋಟಿ ವೃಕ್ಷ ಅಭಿಯಾನದ ಪರಿಣಾಮ ಈಗ ಅರಣ್ಯ ಪ್ರದೇಶ ಹೆಚ್ಚಾಗಿದೆ. ಈ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಸರಕಾರಿ ಜಮೀನು, ಖಾಸಗಿ ಜಮೀನಿನನಲ್ಲಿ ಈವರೆಗೆ 1.30 ಕೋ. ಸಸಿ ನೆಡಲಾಗಿದೆ. ಈಗ ಅರಣ್ಯ ಪ್ರದೇಶ ಹೆಚ್ಚಳ ಮತ್ತು ಪ್ರಾಚೀನ ಸ್ಮಾರಕಗಳ ಬಗ್ಗೆ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವೃಕ್ಷೋತ್ಥಾನ ಹೆರಿಟೇಜ್ ರನ್- 2023 ಆಯೋಜಿಸಲಾಗಿದೆ. ಎಲ್ಲ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಉಪನ್ಯಾಸಕರು ಸಕ್ರೀಯರಾಗಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳಿಂದಲೂ ನೋಂದಣಿ ಮಾಡಿಸಬೇಕು. ಈ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಮಾಡಲು ಜಿಲ್ಲಾಡಳಿತದ ವತಿಯಿಂದ ಮನವಿ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ವೃಕ್ಷೋತ್ಥಾನ್ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಮಾತನಾಡಿ, 2017ರಲ್ಲಿ ಪ್ರಾರಂಭವಾದ ಕೋಟಿ ವೃಕ್ಷ ಅಭಿಯಾನದ ಮುಂದುವರೆದ ಭಾಗವಾಗಿ ಈಗ ವೃಕ್ಷೋತ್ಥಾನ್ ಆಯೋಜಿಸಲಾಗುತ್ತಿದೆ. ಕಳೆದ ಬಾರಿ ನಡೆದ ಅಭಿಯಾನದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ, ಸಾಮಾಜಿಕ ಅರಣ್ಯ ವಿಭಾಗ ಹಾಗೂ ಕೆಬಿಜೆಎನ್ಎಲ್ ಅರಣ್ಯ ವಿಭಾಗದವರು ಪ್ರತಿವರ್ಷ ತಲಾ 25 ಲಕ್ಷದಂತೆ ಸಸಿಗಳ್ನು ನೀಡಿದ್ದರು. ಆವುಗಳಲ್ಲಿ ಈಗ ಶೇ. 80ರಷ್ಟು ಸಸಿಗಳು ಸುಸ್ಥಿತಿಯಲ್ಲಿ ಬೆಳೆಯುತ್ತಿವೆ. ವಿಜಯಪುರ ಜಿಲ್ಲೆಯ ಪರಿಸರಕ್ಕೆ ಪೂರಕವಾದ ಗಿಡಗಳ್ನನು ಬೆಳೆಯಲಾಗುತ್ತಿದೆ. ಅಲ್ಲದೇ, ಅಂದು ಪುಣೆಯ ಉದ್ಯಮಿ ಅಣ್ಣಾರಾಯ ಬಿರಾದಾರ ಅವರ ಸಲಹೆಯಂತೆ ಮೊದಲ ಮ್ಯಾರಾಥಾನ್ ಪ್ರಾರಂಭಿಸಲಾಯಿತು. ಅಲ್ಲದೇ, ಅದಕ್ಕೆ ಚಿತ್ರನಟ ಯಶ್ ರಾಯಭಾರಿಯಾಗಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮ್ಯಾರಾಥಾನ್ ಆಯೋಜಿಸಲಾಗಿತ್ತು. ಅಲ್ಲದೇ, ಭೂತನಾಳ ಕೆರೆಯ ಹಿಂದೆ 540 ಎಕರೆಯಲ್ಲಿ 60 ಸಾವಿರ ಸಸಿಗಳನ್ನು ನೆಟ್ಟು ಬೆಳೆದು ಮಾನವ ನಿರ್ಮಿತ ಅರಣ್ಯ ಬೆಳೆಸಲಾಗಿದೆ. ಇದು ದೇಶದಲ್ಲಿಯೇ ಪ್ರಥಮ ಮಾನವ ನಿರ್ಮಿತ ಅರಣ್ಯ ಪ್ರದೇಶ ಎಂದು ಖ್ಯಾತಿ ಪಡೆದಿದೆ. ಜೊತೆಗೆ ಮಮದಾಪುರ ಬಳಿಯೂ 628 ಹೆಕ್ಟೆರ್ ಪ್ರದೇಶದಲ್ಲಿ 57 ಸಾವಿರ ಗಿಡಗಳನ್ನು ನೆಡಲಾಗಿದೆ. ಗ್ರಾಮ ಪಂಚಾಯಿತಿಗೆ ಆದಾಯ ತರುವ ಗಿಡಗಳಿಗೆ ಅಲ್ಲಿ ಪ್ರಾಶಸ್ತ್ಯ ನೀಡಲಾಗಿದೆ. ಈ ಬಾರಿ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ನೆನಪಿನಲ್ಲಿ ವೃಕ್ಷೋತ್ಥಾನ್ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಒಂದು ಹಂತಕ್ಕೆ ಬರಬೇಕಾದರೆ ಇನ್ನೂ ಸುಮಾರು 20 ವರ್ಷಗಳ ಕಾಲ ಸಸಿ ನೆಡುವ ಕೆಲಸವಾಗಬೇಕಿದೆ. ಇದರಿಂದ ಇಲ್ಲಿನ ಜನರಿಗೆ ಉತ್ತಮ ಆಮ್ಲಜನಕ, ಪೂರಕ ಪರಿಸರ, ಉತ್ತಮ ಆರೋಗ್ಯ ಸಾಧ್ಯವಾಗಲಿದೆ. ಈ ಬಾರಿ ಐದು ವಿಭಾಗಗಳಲ್ಲಿ ಮಹಿಳೆಯರು ಮತ್ತು ಪುರುಷರಿಕಾಗಿ ಪ್ರತ್ಯೇಕ ಮ್ಯಾರಾಥಾನ್ ಆಯೋಜಿಸಲಾಗಿದೆ. ವೃತ್ತಿಪರರಿಗಾಗಿ 21 ಕಿ. ಮೀ, 10 ಕಿ. ಮೀ, ನಡೆಯಲಿದ್ದು, ವಿಜಯಪುರ ನಗರದ ಎಲ್ಲ ಪ್ರಾಚೀನ ಸ್ಮಾರಕಗಳ ಎದುರು ಈ ಮ್ಯಾರಾಥಾನ್ ನಡೆಯಲಿದೆ. ಅಲ್ಲದೇ, ಪದವಿ ವಿದ್ಯಾರ್ಥಿಗಳಿಗಾಗಿ 5 ಕಿ. ಮೀ ಓಟ, ಪಿಯು ವಿದ್ಯಾರ್ಥಿಗಳಿಗಾಗಿ 3.5 ಕಿ. ಮೀ., ಹಿರಿಯ ನಾಗರಿಕರಿಗಾಗಿ ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ಓಟ ಆಯೋಜಿಸಲಾಗಿದೆ. ಅಲ್ಲದೇ, ನಾನಾ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತಿಯ ಸ್ಥಾನ ಪಡೆಯುವ ಓಟಗಾರರಿಗೆ ಒಟ್ಟು ರೂ. 8.12 ಲಕ್ಷದ ಬಹುಮಾನ ನೀಡಲಾಗುತ್ತಿದೆ. ಈ ವೃಕ್ಷೋತ್ಥಾನ್ ನಲ್ಲಿ ನೋಂದಣಿ ಮಾಡಿದವರಿಗೆ ಟಿ- ಶರ್ಟ್, ಪ್ರಶಸ್ತಿ, ಭಾಗಿಯಾದವರಿಗೆ ಮೆಡಲ್, ಟಿ- ಶರ್ಟ್ ಕೊಡಲಾಗುತ್ತಿದೆ. ಉತ್ತಮ ಗುಣಮಟ್ಟದ ಟಿ-ಶರ್ಟ್ ನ ಒಂದು ಕಡೆ ವೃಕ್ಷೋತ್ಥಾನ್ ಲೋಗೋ ಇದ್ದರೆ, ಮತ್ತೋಂದು ಭಾಗದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಭಾವಚಿತ್ರ ಇರುತ್ತದೆ. ಡಿಸೆಂಬರ್ 24 ರಂದು ರವಿವಾರ ಬೆಳಿಗ್ಗೆ 5 ರಿಂದ ಮಧ್ಯಾಹ್ನ 12ರ ವರೆಗೆ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023 ಕಾರ್ಯಕ್ರಮ ನಡೆಯಲಿದೆ. ಹೊರಗಡೆಯಿಂದಲೂ ವೃತ್ತಿಪರ ಓಟಗಾರರು ಬರುತ್ತಿದ್ದಾರೆ. ನಸುಕಿನ ಜಾವ ವಿಜಯಪುರ ನಗರದ ನಾನಾ ಭಾಗಗಳಿಂದ ಆಗಮಿಸುವ ಓಟಗಾರರಿಗೆ ಸರಕಾರಿ ಬಸ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಅಶ್ಟೇ ಅಲ್ಲ, ಅಂದು ಹೊರ ಜಿಲ್ಲೆಗಳಿಂದ ಸುಮಾರು 2000 ದಿಂದ 3000 ಜನ ಪ್ರವಾಸಿಗರೂ ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಕೆ. ಹೊಸಮನಿ, ವೃಕ್ಷೋತ್ಥಾನ ಕೋರ್ ಕಮಿಟಿ ಸದಸ್ಯರಾದ ಉದ್ಯಮಿ ವೀರೇಂದ್ರ ಗುಚ್ಚೆಟ್ಟಿ, ಮಲ್ಲಿಕಾರ್ಜುನ ಯಲಗೊಡ, ಹಣಮಂತರಾಯ ಭೈರಗೊಂಡ, ನವೀದ ನಾಗಠಾಣ, ಸರಕಾರಿ ಬಾಲಕಿಯರ ಮತ್ತು ಬಾಲಕರ ಪಿಯು ಕಾಲೇಜುಗಳ ಪ್ರಾಚಾರ್ಯರಾದ ಸಿ. ಬಿ. ನಾಟಿಕಾರ ಮತ್ತು ಬಿ. ಪಿ. ಗಂಗನಳ್ಳಿ, ಎಂ. ಡಿ. ಹೆಬ್ಬಿ, ಎಸ್. ಬಿ. ಸಾವಳಸಂಗ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ವೃಕ್ಷೋತ್ಥಾನ್ ಹೆರಿಟೇಜ್ ರನ್ ನಲ್ಲಿ ಸರ್ವರೂ ಪಾಲ್ಗೊಳ್ಳಿ :ಎಡಿಸಿ ಮುರಗಿ
Related Posts
Add A Comment

