ವಿಜಯಪುರದಲ್ಲಿ ೩ ದಿನಗಳ ರಂಗಭೂಮಿ ನಾಟಕೋತ್ಸವ | ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜ್ ಮೂರ್ತಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮೀಣ ರಂಗಭೂಮಿ, ವೃತ್ತಿ ರಂಗಭೂಮಿ ಮತ್ತು ಪೌರಾಣಿಕ ರಂಗಭೂಮಿಯ ನಾಟಕೋತ್ಸವಗಳನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಸೆ. ೧೦ರಿಂದ ಪ್ರಾರಂಭವಾದ ಕಲ್ಯಾಣ ಕರ್ನಾಟಕದ ವೃತ್ತಿ ರಂಗಭೂಮಿ ನಾಟಕೋತ್ಸವ ಈ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ವಿಜಯಪುರ ಜಿಲ್ಲೆಯ ವಿವಿಧ ವೃತ್ತಿ ರಂಗಭೂಮಿ ಕಲಾವಿದರಿಂದ ಮೂರು ದಿನಗಳ ನಾಟಕೋತ್ಸವವನ್ನು ಸೆ.೧೦ ರಿಂದ ೧೨ರವರೆಗೆ ಆಯೋಜಿಸಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜ್ ಮೂರ್ತಿ ಹೇಳಿದರು.
ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. ೧೦ ರಂದು ಗ್ರಾಮ ಪಂಚಾಯಿತಿ ಗಂಗವ್ವ ನಾಟಕ ಪ್ರದರ್ಶನಗೊಂಡಿದೆ. ಸೆ.೧೧ ರಂದು ಗಂಡನಿಗೆ ತಕ್ಕ ಹೆಂಡತಿ ಹಾಗೂ ಸೆ. ೧೨ ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯಾದ್ಯಂತ ಹತ್ತು ಹಲವು ವಿನೂತನ ಕಾರ್ಯಕ್ರಮಗಳ ಮೂಲಕ ರಂಗಭೂಮಿಯನ್ನು ಸದೃಢಗೊಳಿಸುವ ಕಾರ್ಯವನ್ನು ನಾಟಕ ಅಕಾಡೆಮಿ ಬಲು ಅಚ್ಚುಕಟ್ಟಾಗಿ ಮಾಡುತ್ತಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿಯು ಪುನರ್ ರಚನೆಗೊಂಡು ಎರಡೂವರೆ ವರ್ಷಗಳು ಭರ್ತಿಯಾಗಿದ್ದು, ಈ ಸಂದರ್ಭದಲ್ಲಿ ಅಕಾಡೆಮಿಯು ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ವಿಶೇಷವಾಗಿ, ರಂಗ ದಿಗ್ಗಜರ ಹೆಸರಿನಲ್ಲಿ ವಿಭಾಗೀಯ ನಾಟಕೋತ್ಸವಗಳು, ಜಿಲ್ಲಾ ನಾಟಕೋತ್ಸವಗಳು, ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ, ಕರ್ನಾಟಕದ ೩೧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ವಿಶ್ವ ರಂಗಭೂಮಿ ದಿನಾಚರಣೆ, ರಾಷ್ಟ್ರೀಯ ವಿಚಾರ ಸಂಕಿರಣಗಳು ಮತ್ತು ಹೊರನಾಡ ನಾಟಕೋತ್ಸವಗಳನ್ನು ಆಯೋಜಿಸಿದೆ ಎಂದರು.
ವರ್ಷಕ್ಕೆ ಕೇವಲ ೨೦ ಪ್ರಶಸ್ತಿಗಳು: ಕರ್ನಾಟಕ ರಂಗಭೂಮಿಗಾಗಿ ಸೇವೆ ಸಲ್ಲಿಸಿ ಪ್ರಶಸ್ತಿಗೆ ಭಾಜನರಾಗಲು ಅರ್ಹರಿರುವ ಸಾವಿರಾರು ಕಲಾವಿದರು ಕರ್ನಾಟಕದಲ್ಲಿದ್ದಾರೆ. ವಿಶೇಷವಾಗಿ, ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ಗ್ರಾಮೀಣ ರಂಗಭೂಮಿ ಹಾಗೂ ಬೀಡಿ ನಾಟಕ ಕ್ಷೇತ್ರ, ರಂಗ ಸಾಹಿತ್ಯ, ರಂಗ ನೃಪಥ್ಯ ಶಿಲ್ಪ, ಹೀಗೆ ರಂಗಭೂಮಿಯ ವಿವಿಧ ಪ್ರಾಕಾರಗಳಲ್ಲಿ ಕೆಲಸ ಮಾಡುತ್ತಿರುವ ಕಲಾವಿದರ ಸಂಖ್ಯೆ ಅಸಂಖ್ಯಾತವಾಗಿದೆ. ಆದಾಗ್ಯೂ ಅಕಾಡೆಮಿಯು ಅರ್ಹರನ್ನು ಗುರುತಿಸಿ ಕಳೆದ ಎರಡೂವರೆ ವರ್ಷಗಳಲ್ಲಿ ೧೬೦ಕ್ಕೂ ಹೆಚ್ಚು ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಆದರೆ ಒಂದು ವರ್ಷಕ್ಕೆ ೨೦ ಪ್ರಶಸ್ತಿಗಳು ಮಾತ್ರ ಇದ್ದು, ಎಲ್ಲಾ ಜಿಲ್ಲೆಗಳನ್ನು ಪ್ರತಿನಿಧಿಸಿ, ಪ್ರಶಸ್ತಿ ನೀಡುವುದು ಒಂದು ದೊಡ್ಡ ಸವಾಲಾಗಿದೆ. ಆದರೂ ಪ್ರಾಮಾಣಿಕವಾಗಿ ಈ ಕೆಲಸವನ್ನು ಅಕಾಡೆಮಿ ಮಾಡಿಕೊಂಡು ಬರುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಾಟಕ ಅಕಾಡೆಮಿ ಸದಸ್ಯೆ ಜ್ಯೋತಿ ಮಂಗಳೂರು, ಮಾಜಿ ಅಧ್ಯಕ್ಷ ಶೇಖ್ ಮಾಸ್ತರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮತ್ತಿತರರು ಉಪಸ್ಥಿತರಿದ್ದರು.

