ವಿಜಯಪುರದಲ್ಲಿ ನಡೆದ ಜಿಲ್ಲಾ ವೃತ್ತಿ ನಾಟಕೋತ್ಸವದಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯದಲ್ಲಿ ನಾಟಕಗಳ ಪ್ರದರ್ಶನ ಹಾಗೂ ಪರಂಪರೆ ಉಳಿಸಿ ಬೆಳೆಸಬೇಕಿದೆ. ರಂಗಭೂಮಿ ಕಲಾವಿದರು ಪ್ರದರ್ಶಿಸುವ ನಾಟಕಗಳ ಮೂಲಕ ಅವರನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನಾಟಕೋತ್ಸವಗಳನ್ನು ನಾಟಕ ಅಕಾಡೆಮಿ ಹಮ್ಮಿಕೊಳ್ಳುತ್ತಿದೆ ಎಂದು ಕನಾ೯ಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಅಭಿಪ್ರಾಯಪಟ್ಟರು.
ಗುರುವಾರ ಸಂಜೆ ನಾಟಕೋತ್ಸವದ ಮೊದಲನೆಯ ದಿನದ ಗ್ರಾಮ ಪಂಚಾಯತ ಗಂಗವ್ವ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳು ಸಮಾಜದ ವಾಸ್ತವಿಕ ವಿಷಯವನ್ನು ಪ್ರಸ್ತಾಪಿಸಿ ಸಮಾಜಕ್ಕೆ ಬಹುದೊಡ್ಡ ಸಂದೇಶ ನೀಡುತ್ತವೆ. ನಾಟಕ ಪ್ರದರ್ಶನ ಮಾಡುವ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ಹಾಗೂ ಅವಕಾಶ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ನಾಟಕ ಅಕಾಡೆಮಿ ಮಾಡುತ್ತಿರುವದು ಹೆಮ್ಮೆಯ ವಿಷಯ ಎಂದರು.
ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್. ಬಿ. ಶೇಖ ಮಾಸ್ತರ ಅಧ್ಯಕ್ಷತೆ ವಹಿಸಿ, ರಂಗಭೂಮಿ ಕಲಾವಿದರು ಉತ್ತಮ ತರಬೇತಿ ಹಾಗೂ ತಾಲೀಮು ನಡೆಸಿ ಗುಣಮಟ್ಟದ ನಾಟಕ ಪ್ರದರ್ಶನ ನೀಡಬೇಕು. ಪ್ರೇಕ್ಷಕರ ಮನ ಮುಟ್ಟುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮಾತನಾಡಿ, ನಾಟಕಗಳು ಸಮಾಜದ ಕನ್ನಡಿಯಿದ್ದಂತೆ. ಸಮಾಜ ಪರಿವತ೯ನೆಗೆ ನಾಟಕಗಳು ಅತ್ಯುತ್ತಮ ಸಾಧನವಾಗಿವೆ ಎಂದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಹಿರಿಯ ಕಲಾವಿದ ಶ್ರೀಧರ ಹೆಗಡೆ, ಕಸಾಪ ಗೌರವ ಅಧ್ಯಕ್ಷೆ ಜಯಶ್ರೀ ಹಿರೇಮಠ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಂಬುನಾಥ ಕಂಚ್ಯಾಣಿ ಉಪಸ್ಥಿತರಿದ್ದರು.
ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ರಿಯಾಜ್ ಪಿಂಜಾರ ಸ್ವಾಗತಿಸಿದರು. ಯಮನಪ್ಪ ಪವಾರ ನಿರೂಪಿಸಿದರು. ಮಹೆತಾಬ್ ಕಾಗವಾಡ ವಂದಿಸಿದರು.

