ಅರಕೇರಿಯಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಬಸನಗೌಡ ಎಂ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಆರಂಭಗೊಳ್ಳುತ್ತಿರುವ ಕೈಗಾರಿಕಾ ಕ್ರಾಂತಿಯ ಪರಿಣಾಮ ವಿಜಯಪುರವನ್ನು ಹುಡುಕಿಕೊಂಡು ನೌಕರಿಗಾಗಿ ಬೆಂಗಳೂರಿಗರು ಮುಂದಿನ ದಿನಗಳಲ್ಲಿ ಬರುತ್ತಾರೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಬಸನಗೌಡ ಎಂ.ಪಾಟೀಲ ಹೇಳಿದರು.
ಬಬಲೇಶ್ವರ-ತಿಕೋಟಾ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಆಯೋಜಿಸಿರುವ ‘ಎಂಬಿಪಿ ಉತ್ಸವ’ಕ್ಕೆ ಇಂದು ಅರಕೇರಿ ಗ್ರಾಮದಲ್ಲಿ ಹೆಣ್ಣುಮಕ್ಕಳ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬರಗಾಲದ ಸಂದರ್ಭದಲ್ಲಿ ಈ ಭಾಗದ ಜನರು ಉದ್ಯೋಗ ಅರಸಿ ಹೆಚ್ಚಿನ ಸಂಖ್ಯೆಯಲ್ಲಿ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಅಲ್ಲದೆ, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ಇತ್ತು. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ನಮ್ಮ ತಂದೆ ಎಂ.ಬಿ.ಪಾಟೀಲರು ನೀರಾವರಿ ಸಚಿವರಾದ ನಂತರ ಮೊದಲಿಗೆ ರೈತರಿಗೆ ನೀರಾವರಿ, ಕೈಗಾರಿಕಾ ಸಚಿವರಾದ ನಂತರ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಹೆಚ್ಚಿನ ಕಂಪನಿಗಳನ್ನು ವಿಜಯಪುರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿಗರು ವಿಜಯಪುರದತ್ತ ನೌಕರಿ ಅರಿಸಿಕೊಂಡು ಬರಲಿದ್ದಾರೆ ಎಂದರು.
ರಂಗೋಲಿ ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಅಶೋಕ ದಳವಾಯಿ, ಪಿರಪಟೇಲ ಪಾಟೀಲ, ಲಿಂಗು ಬೆಳ್ಳುಬ್ಬಿ, ಶಿವು ಇಂಚಗೇರಿ, ಸುರೇಶ ಭಂಡಾರಿ, ಪಾಂಡು ಲೋಣಾರಿ, ಗೋವಿಂದ ರಾಠೋಡ, ರಂಗಾ ಬರಕಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಭಜನಾಪದ ಸ್ಪರ್ಧೆಗಳಿಗೆ ಚಾಲನೆ
ನಂತರ ಕನಮಡಿ ಗ್ರಾಮದಲ್ಲಿ ಸಂಜೆ ಬಬಲೇಶ್ವರ ತಾಲೂಕಿನ ನಿಡೋಣಿಯಲ್ಲಿ ಜಾನಪದ ಹಾಗೂ ದೇವರಗೆಣ್ಣೂರಿನಲ್ಲಿ ಭಜನಾಪದ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಗ್ರಾಮ ಪಂಚಾಯತ ಹಂತದಲ್ಲಿ ವಿಜೇತ ತಂಡವು ಜಿಲ್ಲಾಪಂಚಾಯತ ಮತ್ತು ತಾಲೂಕಾ ಹಂತ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.
ದೇಸಿ ಆಟ ಕಬಡ್ಡಿ ಮತ್ತು ಕ್ರಿಕೆಟ್ ಆಟವನ್ನು ಉದ್ಘಾಟಿಸಲಾಯಿತು. ಕನಮಡಿ ಗ್ರಾಮದ ಮುಖಂಡರಾದ ಪ್ರಶಾಂತ ಪಾಟೀಲ, ಪ್ರಕಾಶ ಬಿರಾದಾರ, ಸಿದ್ದು ಗೌಡನವರ, ಗುರು ಮಾಳಿ, ಶಂಕರ ಹ್ಯಾಮಗೋಳ, ಸುರೇಶ ಬಾಬಾನಗರ, ವೀರೇಶ ಸಿಂಧೂರ, ಈಶ್ವರ ಯಳಜರಿ, ಚಂದು ಕೋಳಿ, ಚನ್ನಯ್ಯ ಮಠಪತಿ, ಬಾಲು ಬಸಗೊಂಡವರ, ಕುಮಾರ ಚಡಚಣ, ಕುಮಾರ ತಳವಾರ, ಸಂತೋಷ ಕೋಳಿ, ಸಚಿನ ಹೊಸಮನಿ, ಪವನ ಅಡಹಳ್ಳಿ ಉಪಸ್ಥಿತರಿದ್ದರು. ಸಂಜೆ ನಿಡೋಣಿಯಲ್ಲಿ ಭಜನಾ ಸ್ಪರ್ಧೆ ನಂತರ ದೇವರಗೆಣ್ಣೂರ ಗ್ರಾಮದಲ್ಲಿ ಜಾನಪದ ಹಾಡುಗಳ ಸ್ಪರ್ಧೆಯನ್ನು ಬಸನಗೌಡ ಪಾಟೀಲ ಉದ್ಘಾಟಿಸಿದರು.
ಎಂ.ಬಿ.ಪಾಟೀಲ ಅವರ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕೃತಜ್ಞತಾ ಭಾವ ವ್ಯಕ್ತಪಡಿಸುವ ಉದ್ದೇಶದಿಂದ ಅಭಿಮಾನಿಗಳು, ಕಾರ್ಯಕರ್ತರು ಅಕ್ಟೋಬರ 7 ರಂದು ಅವರ ಜನ್ಮದಿನ ಪೂರ್ವ ಒಂದು ತಿಂಗಳವರೆಗೆ ದೇಶಿ ಆಟ ಕಬಡ್ಡಿ, ಕ್ರಿಕೆಟ್, ಭಜನೆ, ಜಾನಪದ ಹಾಡುಗಳು ಮತ್ತು ರಂಗೋಲಿ ಸ್ಪರ್ಧೆಗಳನ್ನು ವಿಭಿನ್ನವಾಗಿ ಆಯೋಜಿಸಿದ್ದಾರೆ.

