ವೃಕ್ಷಥಾನ್ ಹೆರಿಟೇಜ್ ರನ್ ಪ್ರಯುಕ್ತ ವಿಜಯಪುರದಲ್ಲಿ ಹೆಣ್ಣುಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರೋಮೋ ರನ್
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ರವಿವಾರದ ಮುಂಜಾನೆ ಎಲ್ಲೆಡೆ ಹೆಣ್ಣುಮಕ್ಕಳ ಕಲರವ. ವೃಕ್ಷಥಾನ್ ಹೆರಿಟೇಜ್ ರನ್ ಪ್ರಯುಕ್ತ ಹೆಣ್ಣುಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರೋಮೋ ರನ್ ಅದ್ಭುತ ಯಶಸ್ಸು ಕಂಡಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಯವರ ಪತ್ನಿ, ಪ್ರಾಧ್ಯಾಪಕಿ ರಂಜಿತಾ ಕೆ.ಆರ್. ಹಾಗೂ ಖ್ಯಾತ ದಂತ ವೈದ್ಯೆ ಡಾ.ಸವಿತಾ ಕಲ್ಲೂರ ಅವರು ಇಲ್ಲಿನ ಗಗನ್ ಮಹಲ್ ದಿಂದ ಮಹಿಳೆಯರ ಪ್ರೋಮೋ ರನ್ ಓಟಕ್ಕೆ ಬೆಳಗ್ಗೆ ಚಾಲನೆ ನೀಡಿದರು. ಗೋಲ್ ಗುಂಬಜ್ ವರೆಗೆ ಓಡಿ, ಅಲ್ಲಿಂದ ಮತ್ತೆ ಗಗನ್ ಮಹಲ್ ಗೆ ಮಹಿಳಾ ಓಟಗಾರರು ತಲುಪಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸವಿತಾ ಅವರು, ಇದೊಂದು ಅದ್ಭುತ ವಾತಾವರಣ. ಮಹಿಳೆಯರು ಇಷ್ಟೊಂದು ಜಾಸ್ತಿ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಕಂಡು ತುಂಬ ಸಂತೋಷವಾಗಿದೆ. ಎಲ್ಲರೂ ಡಿ13ರಂದು ನಡೆಯುವ ವೃಕ್ಷಥಾನ್ ಹೆರಿಟೇಜ್ ರನ್ ಮ್ಯಾರಥಾನ್ನಲ್ಲಿ ಭಾಗವಹಿಸಲು ಈಗಲೇ ನೋಂದಾಯಿಸಿಕೊಳ್ಳಿ. ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ತಾವು ಕೂಡ ಹಿಂದಿನ ವೃಕ್ಷಥಾನ್ಗಳಲ್ಲಿ ಭಾಗವಹಿಸಿದ್ದು, ಬರುವ ಹೆರಿಟೇಜ್ ರನ್ನಲ್ಲೂ ಭಾಗವಹಿಸುವುದಾಗಿ ತಿಳಿಸಿದರು.
ಪ್ರೋಮೋ ರನ್ ಚಾಲನೆಗೂ ಮುನ್ನ ಯೋಗ ಪಟು, ಪ್ರಸಿದ್ಧ ಓಟಗಾರ ರೇಣುಕಾ ಪ್ರಸಾದ್ ಅವರು ಮಹಿಳೆಯರು ಮತ್ತು ಯುವತಿಯರಿಗೆ ಓಟಕ್ಕಾಗಿ ತರಬೇತಿ ನೀಡಿದರು.
ತಾವು ಎಲ್ಲ ಕಡೆಯ ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದು, ಆದರೆ ಇಲ್ಲಿನ ವೃಕ್ಷಥಾನ್ನಂತಹ ಗುಣಮಟ್ಟ ಮತ್ತು ಶಿಸ್ತನ್ನು ಎಲ್ಲಿಯೂ ಕಂಡಿಲ್ಲ. ತಾವು ಕಳೆದ ಬಾರಿ ಇಡೀ ಕುಟುಂಬದೊಂದಿಗೆ ವೃಕ್ಷೋಥಾನನಲ್ಲಿ ಭಾಗವಹಿಸಿರುವುದಾಗಿ ತಿಳಿಸಿದರು. ಡಿ.13ರ ವೃಕ್ಷಥಾನ್ ಹೆರಿಟೇಜ್ ರನ್ ಪ್ರಾರಂಭವಾಗಲು ಇನ್ನೂ ಮೂರು ತಿಂಗಳು ಬಾಕಿ ಇದ್ದು, ಈ ಅವಧಿಯಲ್ಲಿ ರನ್ ನಲ್ಲಿ ಪಾಲ್ಗೊಳ್ಳುವವರಿಗೆ ಹೆಚ್ಚು ಕಿ.ಮೀ ಓಡಲು ಸಾಧ್ಯವಾಗುವ ಯೋಜನೆಗಳ ಕುರಿತು ತರಬೇತಿ ನೀಡುತ್ತೇನೆ. ನೀವು ಆತ್ಮವಿಶ್ವಾಸದಿಂದ ಓಡಿ ಎಂದು ಹುರಿದುಂಬಿಸಿದರು.
ಸಾವಿತ್ರಿ ಡವಳೇಶ್ವರ ಅವರು ಬೆಳಗಿನ ಜಾವವೇ ಜುಂಬಾ ನೃತ್ಯದ ಮೂಲಕ ರಂಜಿಸಿ ರನ್ ಮಾಡುವುದಕ್ಕೂ ಪೂರ್ವಸಿದ್ಧತೆ ವಿಶೇಷವಾಗಿತ್ತು.
ಡಿ.13ರ ಹೆರಿಟೇಜ್ ರನ್ಗಾಗಿ ನೋಂದಣಿ ಮಾಡಿಸಿಕೊಳ್ಳಲು ಮಳಿಗೆಗಳನ್ನು ಹಾಕಿ, ಇವತ್ತು ಹೆಸರು ನೋಂದಾಯಿಸಿಕೊಂಡವರಿಗೆ ಶೇ.10ರಷ್ಟು ರಿಯಾಯಿತಿ ನೀಡಲಾಗಿತ್ತು. ನೂರಾರು ಜನ ತಮ್ಮ ಹೆಸರು ನೋಂದಾಯಿಸಿಕೊಂಡ ದೃಶ್ಯ ಕಂಡು ಬಂತು. ಅಲ್ಲಲ್ಲಿ ಇಡಲಾಗಿದ್ದ ಸೆಲ್ಫೀ ಸ್ಟ್ಯಾಂಡ್ಗಳಲ್ಲಿ ಮಹಿಳೆಯರು ಮುಗುಳ್ನಗುತ್ತ ತಮ್ಮ ಭಾವಚಿತ್ರ ತೆಗೆದುಕೊಂಡು ವೃಕ್ಷಥಾನ್ ಸಾಮಾಜಿಕ ತಾಣಗಳಿಗೆ ಹಾಕುತ್ತಿದ್ದರು. ವೃಕ್ಷಥಾನ್ ಅಂಗವಾಗಿ ನಡೆವ ಮನೆ, ತೋಟದ ಸ್ಪರ್ಧೆಯಲ್ಲಿ ಭಾಗವಹಿಸಲು ಹೇಳಲಾಯಿತು.
ಎಸ್ಪಿ ನಿಂಬರಗಿಯವರ ತಂದೆ ಬಸವರಾಜ ನಿಂಬರಗಿ ಹಾಗೂ ತಾಯಿ ಗುರುಬಾಯಿ ಅವರು ಕೂಡ ಪಾಲ್ಗೊಂಡಿದ್ದರು. ವೃಕ್ಷೋಥಾನ ಕೋರ್ ಕಮಿಟಿ ಸದಸ್ಯರಾದ ಗುರುಶಾಂತ ಕಾಪಸೆ, ಚಂದ್ರಕಾಂತ ಶೆಟ್ಟಿ, ಅಶ್ಪಾಕ್ ಮನಗೂಳಿ, ಶಿವನಗೌಡ ಪಾಟೀಲ, ಸಂತೋಷ ಔರಸಂಗ, ವೀರೇಂದ್ರ ಗುಚ್ಚಟ್ಟಿ, ರಾಜು ಯಲಗೊಂಡ, ಡಾ.ಪ್ರವೀಣ, ಪ್ರೋಮೋ ರನ್ ಉಸ್ತುವಾರಿಗಳಾದ ಶಿವು ಕುಂಬಾರ, ಅಮಿತ್ ಬಿರಾದಾರ, ರಮೇಶ್ ಬಿರಾದಾರ ಹಾಗೂ ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ ಇದ್ದರು.
‘ಅವಳು ಓಡಿದರೆ ದಾರಿ ದೊಡ್ಡದು’, ‘ಅವಳು ಇಡುವ ಹೆಜ್ಜೆ ಸಮಾಜಕ್ಕೆ ನೀಡುವ ಪರಿಸರದೆಡೆಗಿನ ಸಂದೇಶ’ ಎನ್ನುವ ಘೋಷಣೆಗಳು ಮೊಳಗಿದವು. ನಗರ ಮತ್ತು ಸುತ್ತಮುತ್ತಲಿನ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿನಿಯರು, ಎಲ್ಲ ವರ್ಗದ ಮಹಿಳೆಯರು, ಮಹಿಳಾ ಉದ್ಯೋಗಿಗಳು ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದರು. ಅಲ್ಲಲ್ಲಿ ಶಕ್ತಿವರ್ಧಕ ಪಾನೀಯ, ಸಿಹಿಗಳನ್ನು ಸ್ವಯಂ ಸೇವಕರು ನೀಡಿದರು. ಗೋಲ್ ಗುಂಬಜ್ ಪರಿಸರದಲ್ಲಿ ವಾದ್ಯಮೇಳಗಳವರ ಜೋರು ಶಬ್ದ ಓಡುಗರ ಓಟಕ್ಕೆ ವೇಗ ನೀಡುತ್ತಿತ್ತು. ಯುವತಿಯರು, ಮಹಿಳೆಯರು ಸಾಂಪ್ರದಾಯಿಕ ಹಾಗೂ ವಿವಿಧ ತರಹದ ಬಟ್ಟೆಗಳಲ್ಲಿ ಮಿಂಚುತ್ತ, ನೃತ್ತ ಮಾಡುತ್ತ ಸಾಗುತ್ತಿದ್ದರು. ರಸ್ತೆ ಪಕ್ಕದ ಜನಗಳು ಕೂಡ ಚಪ್ಪಾಳೆ ಮೂಲಕ ಸಾಥ್ ನೀಡುತ್ತಿದ್ದರು.
ಇದೇ ಸಂದರ್ಭದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ. ಸರೋಜಾ ಅಕ್ಕ ವ್ಯಸನ ಮುಕ್ತಿಗಾಗಿ ಪ್ರತಿಜ್ಞೆ ಭೋದಿಸಿ, ಧ್ಯಾನ ಮಾಡಿಸಿದರು. ಅನೇಕ ಬ್ರಹ್ಮಕುಮಾರಿಯವರು ಮತ್ತು ವಯಸ್ಸಾದ ಮಹಿಳೆಯರು ಕೂಡ ಓಡಿ ಗಮನ ಸೆಳೆದರು.
ಸಂಗೀತಾ ಮಠಪತಿ ಹಾಗೂ ಸುಭಾಶ್ಚಂದ್ರ ಕನ್ನೂರ ನಿರೂಪಿಸಿದರು.

