ಲೇಖನ
– ಕಬೂಲ್ ಆರ್. ಕೊಕಟನೂರ.
ಶಿಕ್ಷಕರು
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಶಿಕ್ಷಕ ಈ ರಾಷ್ಟ್ರ ರಕ್ಷಕ, ಸಮಾಜ ಸುಧಾರಕನಾಗಿದ್ದು, ಇಡೀ ಸಮಾಜ ಅವನ ಆಶಯದಲ್ಲಿಯೇ ಬೆಳೆಯುತ್ತದೆ. ಹುಮಾಯೂನ್ ಕಬೀರದಾಸ ಹೇಳುವಂತೆ ಅಕ್ಷರಶಃ ಶಿಕ್ಷಕ ರಾಷ್ಟ್ರದ ಅದೃಷ್ಠದ ನಿರ್ಣಾಯಕ. ಒಂದು ದೇಶದ ಅಳಿವು-ಉಳಿವು ಪರೋಕ್ಷವಾಗಿ ಅಲ್ಲಿಯ ಶಿಕ್ಷಕರನ್ನು ಅವಲಂಬಿಸಿದೆ. ವೇದ ಕಾಲದಿಂದಲೂ ಗುರುವಿಗೆ ಉನ್ನತ ಸ್ಥಾನವಿದೆ. ಆದ್ದರಿಂದಲೆ ಆಚಾರ್ಯ ದೇವೋಭವ’ ಎಂಬ ಉಕ್ತಿ ನಮ್ಮ ಮುಂದಿದೆ. ಇಂದು ನಾವೆಲ್ಲ ಜನ್ಮದಿನ ಆಚರಿಸುತ್ತಿರುವ ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಹೇಳುವಂತೆ ಶಿಕ್ಷಕರೆಂದರೆ ಜೀವನವನ್ನು ಪ್ರಕಾಶಿಸುವ ಪ್ರೇರಕ ಶಕ್ತಿ. ಗುರುವಿನ ಕೃಪೆ ಕರುಣೆ, ಪ್ರೇರಣೆ ಇಲ್ಲದೆ ಯಾವುದನ್ನು ಸಾಧಿಸಲಾಗದು.
‘ಹರ ಮುನಿದರೆ ಗುರು ಕಾಯುವನು’
ಶಿಕ್ಷಕನಿಗೆ ಗುರು, ಅಧ್ಯಾಪಕ, ಆಚಾರ್ಯ ಎಂಬ ನಾಮಗಳುಂಟು. ಶಿಕ್ಷಕನಾದವನು ಸದಾ ಸಹನಾ ಮೂರ್ತಿಯಾಗಿದ್ದು, ಮಗುವಿನ ಅಂತರಂಗವನ್ನರಿತು ಬೋಧನೆಗೈದಾಗ ಮಾತ್ರ ನಿಜವಾದ ಮುಖ ನೋಡಲು ಸಾಧ್ಯ. ಭವಿಷ್ಯತ್ತಿನ ನಿರ್ಮಾಣವಾಗುವುದು ನಾಲ್ಕು ಗೋಡೆಗಳ ಮಧ್ಯೆ ಎಂಬುದು ಕೋಠಾರಿ ಆಯೋಗದ ಮಾತು ಅಕ್ಷರಶಃ ಸತ್ಯ. ಮಕ್ಕಳೆಂದರೆ ಭವಿಷ್ಯದ ಆಶಾಕಿರಣಗಳು, ಅವುಗಳನ್ನು ವ್ಯವಸ್ಥಿತವಾಗಿ ಎರಕಹೊಯ್ದು ನಾಡಿನ ಖಣಿಗಳಾಗಿ ಮಾಡುವ ಹೊಣೆ ಗುರುಕುಲದ ಮೇಲಿದೆ. ಇಂತಹ ಜವಾಬ್ದಾರಿ ಹೊತ್ತ ಶಿಕ್ಷಕನ ಸ್ಥಾನಮಾನ ವರ್ಣಾತೀತ, ಅಂತೆಯೇ ಒಬ್ಬ ಸಾಮಾನ್ಯ ಶಿಕ್ಷಕರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದರು. ಟೀಚರ್ ಇಸ್ ಫೆಸಿಲಿಟೇಟರ್ ಎನ್ನುವಂತೆ ಶಿಕ್ಷಕ ಸದಾ ರಕ್ಷಕನೇ ಹೊರತು ಭಕ್ಷಕನಲ್ಲ. ಆ ಕಾರಣಕ್ಕಾಗಿಯೇ ‘ಹರ ಮುನಿದರೆ ಗುರು ಕಾಯುವನು’ ಎನ್ನುವರು.
ಶಿಕ್ಷಕ ಸಾಮಾಜಿಕ ಬದಲಾವಣೆ ಹರಿಕಾರ
ನಿಜವಾದ ಗುರುವಿನ ಸಾಧನೆಗೆ ಮಿಗಿಲಾದುದು ಯಾವುದು ಇಲ್ಲ. ಮಾನವ ಜನಾಂಗವನ್ನು ರೂಪಿಸುವ ಅವಕಾಶವಿರುವುದು ಶಿಕ್ಷಕ ಸಮುದಾಯಕ್ಕೆ ಎಂಬ ಮಾತು ಉತ್ತೇಕ್ಷೆಯಾಗಲಾರದು. ಶಾಂತಿನಿಕೇತನದ ಸಂಸ್ಥಾಪಕ ರವೀಂದ್ರನಾಥ ಟ್ಯಾಗೋರ ಹೇಳುವಂತೆ ”ಶಿಕ್ಷಕರು ಆಧ್ಯಾತ್ಮದ ದೀಪವಿದ್ದಂತೆ. ಶಿಕ್ಷಕ ಸದಾ ಕಲಿಯುತ್ತಲೇ ಇರಬೇಕು. ದೀಪವು ತಾನು ನಿರಂತರ ಉರಿಯುತ್ತಿದ್ದಾಗಲೆ ಇನ್ನೊಂದನ್ನು ಹೊತ್ತಿಸಲು ಸಾಧ್ಯ. ಶಿಕ್ಷಕ ವೃತ್ತಿ ಪವಿತ್ರವಾದುದು. ಸತ್ಯಕ್ಕೆ ತಲೆಬಾಗುವ ಸಹೃದಯತೆ, ಅನ್ಯಾಯವನ್ನು ಎದುರಿಸುವ ಎದೆಗಾರಿಕೆ ಇರಬೇಕು. ಶಿಕ್ಷಕ ಸಾರ್ವಜನಿಕ ಸೇವಕರಲ್ಲಿ ಅಗ್ರಗಣ್ಯ. ಇಡೀ ಶಿಕ್ಷಣ ಪದ್ಧತಿ ಚಲಿಸುತ್ತದೆಯೋ ಅವರ ಕೇಂದ್ರ ಬಿಂದು ಶಿಕ್ಷಕನಾಗಿದ್ದಾನೆ. ಯಥಾ ಗುರು ತಥಾ ಶಿಷ್ಯನೆಂಬಂತೆ ಶ್ರೇಷ್ಠ ಶಿಕ್ಷಕ ಸ್ಪೂರ್ತಿಯ ಸೆಲೆಯಾಗಿ ಮಾರ್ಗದರ್ಶಕನಾಗಿ, ಸದಾ ಸ್ನೇಹಮಯಿಯಾಗಿ ಸಂಪನ್ನಶೀಲನಾಗಿ, ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಸರ್ವವ್ಯಾಪಿಯಾಗಿದ್ದಾನೆ.

ಎ ಐ ಯುಗದಲ್ಲೂ ಗುರುವಿಗೆ ಗೌರವ
ಆಧುನಿಕತೆ ತಂತ್ರಜ್ಞಾನ ಬೆಳೆದಂತೆ ಶಿಕ್ಷಕರ ಕಾರ್ಯವೈಖರಿ, ಕಲಿಸುವ ಪದ್ದತಿ, ಇರುವಿಕೆ ಬದಲಾಗಿರಬಹುದು. ಗುರುವಿಗಿರುವ ಗೌರವ ಕಡಿಮೆಯಾಗಿಲ್ಲ. ಸಮಾಜದಲ್ಲಿ ಅದೆಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಮಾಜಿಯಾಗಬೇಕು. ಆದರೆ ಶಿಕ್ಷಕ ಮಾತ್ರ ಯಾವತ್ತು ಮಾಜಿಯಾಗಲ್ಲ. ಶಿಷ್ಯ ಬಳಗಕ್ಕೆ ಸದಾ ಗುರುವಾಗಿಯೇ ಹೃನ್ಮನದಲ್ಲಿರುತ್ತಾನೆ. ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆಯಾಗಿ ಸಮಾಜ ಮುಂದುವರೆಸುವ ಅದಮ್ಯ ಚೇತನ ಗುರುವಾಗಿದ್ದಾನೆ. ಅದಕ್ಕಾಗಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ನುಡಿ ಎಷ್ಟು ಸೂಕ್ತವಲ್ಲವೇ?
ಆದರೆ, ಶಿಕ್ಷಕರ ದಿನಾಚರಣೆ ಶಿಕ್ಷಕರೇ ಆಚರಿಸಿಕೊಳ್ಳುವುದು ವಿಷಾದನೀಯ, ಅದಕ್ಕಾಗಿ ಬನ್ನಿ ನಾವೆಲ್ಲ ಶಿಕ್ಷಕರ ದಿನವನ್ನು ಆಚರಿಸೋಣ, ಚಿರಋಣಿಯಾಗೋಣ. ಈ ಮೂಲಕ ಗುರುಕಾಣಿಕೆ ಸಲ್ಲಿಸೋಣ.


