ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರಿಗೆ ಧಮ್ಕಿ ಹಾಕಿರುವ ಅಕ್ಕಿ ಕಳ್ಳರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಾರ್ಯನಿರತ ಪತ್ರಕರ್ತರ ಸಂಘ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಧಮ್ಕಿ ಹಾಕಿರುವ ಅಕ್ಕಿ ಕಳ್ಳರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರಿಗೆ ಕಾನಿಪ ಜಿಲ್ಲಾ ಘಟಕ, ಆಮ್ ಆದ್ಮಿ ಪಕ್ಷ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಕಾನಿಪ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ ಮಾತನಾಡಿ, ಪತ್ರಕರ್ತರನ್ನು ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂದು ಕರೆಯಲಾಗುತ್ತಿದೆ ಆದರೆ ವಿಜಯಪುರದಲ್ಲಿ ಆ ಅಂಗವನ್ನು ಕುಸಿಯುವಂತಹ ವಾತಾವರಣ ನಿರ್ಮಾಣವಾಗಿದೆ. ಪತ್ರಕರ್ತರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರು ಅಕ್ಕಿ ಕಳ್ಳತನದ ಕುರಿತು ಬರೆದ ವರದಿ ತಪ್ಪಾಗಿದ್ದರೆ ಪ್ರಕರಣ ದಾಖಲಿಸಲಿ ನಾವು ಅದನ್ನು ಸ್ವೀಕರಿಸಿ ಕಾನೂನು ಹೋರಾಟ ಮಾಡುತ್ತೇವೆ. ಆದರೆ ಪತ್ರಕರ್ತರ ಮನೆಗೆ ತೆರಳಿ ದಮ್ಕಿ ಹಾಕುವುದು, ಕುಟುಂಬದವರಲ್ಲಿ ಆತಂಕ ಉಂಟಾಗುವ ರೀತಿಯಲ್ಲಿ ವರ್ತನೆ ತೋರುವುದು, ಅಲ್ಲದೇ ಪತ್ರಕರ್ತರಲ್ಲಿ ಭಯದ ವಾತಾವರಣ ಸೃಷ್ಠಿಸುತ್ತಿರುವದು ಅತ್ಯಂತ ಖಂಡನೀಯ ಎಂದರು.
ಜಿಲ್ಲಾಡಾಳಿತ, ಜಿಲ್ಲಾ ಪೊಲೀಸ್ ಅಧಿಕಾರಿಗಳು ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ಹೋಗಿರುವ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಅವರ ಮೇಲೆ ಸೂಕ್ತ ಕ್ರಮ ಆಗದಿದ್ದಲ್ಲಿ ರಾಜ್ಯಾಧ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಮಾತನಾಡಿ, ಪತ್ರಕರ್ತ ಪರಶುರಾಮ ಶಿವಶರಣ ಅವರ ಮೇಲೆ ಹಲ್ಲೆಗೆ ಯತ್ನಿಸುವ ಭಾಗವಾಗಿ ಅವರ ಮನೆಗೆ ತೆರಳಿ ಭಯಪಡಿಸಲು ಪ್ರಯತ್ನ ಮಾಡಿರುವವರನ್ನು ಸುಮ್ಮನೆ ಬಿಡಬಾರದು. ನಾವು ಸಮಾಜದ ಧ್ವನಿಯಾಗಿ, ಜನಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರು. ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮ ಚಟುವಟಿಕೆಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವ ನಮ್ಮ ಧ್ವನಿಯನ್ನು ಹತ್ತಿಕ್ಕಲು ದುಷ್ಟಶಕ್ತಿಗಳ ಪ್ರಯತ್ನ ಆಗಾಗ ನಡೆಯುತ್ತಲೇ ಇರುವುದು ಖಂಡನೀಯ. ಸರ್ಕಾರ ಪತ್ರಕರ್ತರ ರಕ್ಷಣೆಗೆ ಸೂಕ್ತ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಸ್ವಾಸ್ತ್ಯ ಸಮಾಜ ನಿರ್ಮಾಣ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅಕ್ಕಿ ಕಳ್ಳರ ಮೇಲೆ ಜಿಲ್ಲಾಡಳಿತ ಹಾಗೂ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಅವಾಚ್ಯ ಶಬ್ದಗಳನ್ನು ಬಳಸಿ ಕುಟುಂಬಕ್ಕೆ ಬೆದರಿಕೆ ಹಾಕಿರುವ ಅಕ್ಕಿ ಕಳ್ಳರನ್ನು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಕಾಣದ ಕೈಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಕಾರ್ಯಕಾರಣಿ ಮಂಡಳಿ ಸದಸ್ಯ ಶರಣು ಮಸಳಿ ಮಾತನಾಡಿ, ರಾಜ್ಯಾಧ್ಯಂತ ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಪತ್ರಕರ್ತರು ನಾಲ್ಕನೇ ಅಂಗ ಆದರೆ ಅವರ ರಕ್ಷಣೆಗೆ ಯಾರೂ ಇಲ್ಲದಂತಾಗಿದೆ. ಜೀವ ಪಣಕ್ಕಿಟ್ಟು ಸುದ್ದಿ ಮಾಡುವ ಪತ್ರಕರ್ತರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಶಿವಶರಣ ಅವರ ಮನೆಗೆ ಹೋಗಿ ಭಯ ಹುಟ್ಟಿಸಲು ಪ್ರಯತ್ನಿಸಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದರು.
ಹಿರಿಯ ವರದಿಗಾರ ಬಸವರಾಜ ಸಂಪಳ್ಳಿ ಮಾತನಾಡಿ, ಅಕ್ಕಿ ಮಾಫಿಯಾಗಳು ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸುವ ಯತ್ನ ಮಾಡಿದ್ದಾರೆ. ಅಲ್ಲದೇ ಜಾತಿ ನಿಂದನೆಯನ್ನು ಸಹಿತ ಮಾಡಿರುವುದನ್ನು ಜಿಲ್ಲಾಡಳಿತ ಹಗುರವಾಗಿ ಪರಿಗಣಿಸದೆ ಸೂಕ್ತ ಕ್ರಮ ಜರುಗಿಸಬೇಕು. ಅಕ್ಕಿ ಮಾಫಿಯಾಗಳಿಗೆ ಅಧಿಕಾರಿಗಳೂ ಸಹಿತ ಸಾತ್ ನೀಡುತ್ತಿರುವ ಮಾಹಿತಿಯೂ ಇದೆ. ಜಿಲ್ಲಾಡಳಿತ ಅಕ್ಕಿ ಕಳ್ಳರನ್ನು ಈಗಾಗಲೇ ಬಂಧಿಸಿದೆ. ಎಲ್ಲ ಅಕ್ಕಿ ಕಳ್ಳರಿಗೂ ಜಿಲ್ಲಾಡಳಿತ ಒಂದು ಸಂದೇಶ ರವಾನೆ ಮಾಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಸಹಿತ ತನಿಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.
ಎಎಪಿ ಜಿಲ್ಲಾಧ್ಯಕ್ಷ ಭೋಗೇಶ ಸೊಲಾಪೂರ ಹಾಗೂ ಪತ್ರಕರ್ತ ಪರಶುರಾಮ ಶಿವಶರಣ ಮಾತನಾಡಿದರು.
ಈ ಸಂದರ್ಭದಲ್ಲಿ ಕಾನಿಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಸಮೀರ ಇನಾಮದಾರ, ಜಿಲ್ಲಾ ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ವಿನೋದ ಸಾರವಾಡ, ಪತ್ರಕರ್ತರಾದ ಗೋಪಾಲ ಕನಿಮನಿ, ಶಿವಾನಂದ ಶಿವಶರಣ, ಗುರುರಾಜ ಗದ್ದನಕೇರಿ, ಷಡಕ್ಷರಿ ಕಂಪಣ್ಣನವರ, ಬಾಬು ತಡಲಗಿ, ಸುನೀಲ ಭಾಸ್ಕರ್, ಮೋಹನ ಕುಲಕರ್ಣಿ, ಮಂಜು ಕಲಾಲ್, ಶರಣು ಮರನೂರ, ಕಲ್ಲು ಶಿವಶರಣ, ಸಂಜೀವ ಕುಲಕರ್ಣಿ, ವೆಂಕಟೇಶ ಭೈರಾಮಡಗಿ, ಫಯಾಜ ಕಲಾದಗಿ, ರಾಜೇಂದ್ರಸಿಂಗ್ ಹಜೇರಿ, ಚಂದ್ರಕಾಂತ ಮಾವುರ, ಸಂತೋಷ, ಸುರೇಶ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

