ಕರಡಿ ಸೆರೆ: ನಿಟ್ಟುಸಿರು ಬಿಟ್ಟ ಚಾಕಹಳ್ಳಿ, ಚಕ್ಕೋಡನಹಳ್ಳಿ ಗ್ರಾಮಸ್ಥರು
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ವೀರನಹೊಸಹಳ್ಳಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕರಡಿಯೊಂದು ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಗುರುವಾರ ನಡೆದಿದೆ. ಗಾಯಾಳುಗಳನ್ನು ಚಾಕಹಳ್ಳಿ ಗ್ರಾಮದ ನಿವಾಸಿ ನಾರಾಯಣ್ ನಾಯಕ್ (60) ಹಾಗೂ ಚಕ್ಕೋಡನಹಳ್ಳಿ ಗ್ರಾಮದ ಮರಿಗೌಡ (ಶಿವಪ್ಪ) ಎಂದು ಗುರುತಿಸಲಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಚಾಕಹಳ್ಳಿ ಗ್ರಾಮದ ಹುಚ್ಚನಾಯಕ ಪುತ್ರ ನಾರಾಯಣ ನಾಯಕ್ ಎಂಬುವವರು, ತಮ್ಮ ಮೊಮ್ಮಗನ ಜೊತೆ ಗುರುವಾರ ಮುಂಜಾನೆ 6.30ರ ಸುಮಾರಿಗೆ ಬಹಿರ್ದೆಸೆಗೆ ತೆರಳುತ್ತಿದ್ದಾಗ, ಮೇಟಿಕುಪ್ಪೆ ಅರಣ್ಯ ವಲಯದಿಂದ ಬಂದ ಕರಡಿ ದಾಳಿ ಮಾಡಿದೆ. ಕೈಗೆ ಕಚ್ಚಿ ಗಾಯಗೊಳಿಸಿದೆ. ತಕ್ಷಣವೇ ಅರಣ್ಯ ಅಧಿಕಾರಿಗಳು ನಾರಾಯಣ ನಾಯಕ್ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮೊಮ್ಮಗ ಕರಡಿ ದಾಳಿಯಿಂದ ಬಚಾವ್ ಆಗಿದ್ದಾನೆ. ಬಳಿಕ ಹೆಚ್ ಡಿ ಕೋಟೆ ವಲಯ ಅರಣ್ಯಾಧಿಕಾರಿ ರಾಮಾಂಜುನೇಯಲು ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಮೇಟಿಕುಪ್ಪೆ ಅರಣ್ಯ ವಲಯದಿಂದ ಬೋನ್ ತಂದಿಟ್ಟು , ಕೂಬಿಂಗ್ ಶುರು ಮಾಡಿದ್ದಾರೆ.
ಅಲ್ಲಿಂದ ತಪ್ಪಿಸಿಕೊಂಡು ಬಂದ ಕರಡಿ, ಮಧ್ಯಾಹ್ನ ಚಕ್ಕೋಡನಹಳ್ಳಿಯಲ್ಲಿ ದಾಳಿ ನಡೆಸಿದೆ. ಗ್ರಾಮದ ತಿಮ್ಮೇಗೌಡ ಪುತ್ರ ಮರಿಗೌಡ( ಶಿವಪ್ಪ) ಎಂಬುವವರು ವೀರನಹೊಸಹಳ್ಳಿ ವ್ಯಾಪ್ತಿಯ ವಲಯದ ಪೊದೆಯೊಂದರಲ್ಲಿ ಮೇಕೆಗಳಿಗೆ ಸೊಪ್ಪು ಕೀಳುತ್ತಿದ್ದಾಗ ಕರಡಿ ಏಕಾಏಕಿ ದಾಳಿ ಮಾಡಿದೆ. ಕುತ್ತಿಗೆ, ಹೊಟ್ಟೆ ಪಕ್ಕೆಲುಗೆ ಕಚ್ಚಿ,ಪರಚಿ ಗಂಭೀರ ಗಾಯಗೊಳಿಸಿದೆ. ಅರಣ್ಯ ಸಿಬ್ಬಂದಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯನ್ನು ಸೆರೆಹಿಡಿದು, ಅರಣ್ಯಗೆ ಬಿಟ್ಟಿದ್ದಾರೆ.
ಕೂಬಿಂಗ್ ವೇಳೆ ಅರಣ್ಯ ಅಧಿಕಾರಿಗಳಾದ ರಾಮಾಂಜುನೇಯಲು, ವಿನೋದ್ ಗೌಡ, ರಶ್ಮಿ ಸೇರಿಡ್ನಾತೆ ಅರಣ್ಯ ಸಿಬ್ಬಂದಿ ಇದ್ದರು.

