ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ :ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಿ, ಮುಂಬರುವ ಸ್ಥಳೀಯ ಚುನಾವಣೆ ಹಾಗೂ 2028 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ನೂತನ ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಟಿ ವೆಂಕಟೇಶ್ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಂಭೆಗೌಡರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಪಕ್ಷ ನನಗೆ ಅಧ್ಯಕ್ಷರ ಹುದ್ದೆ ನೀಡಿದೆ.ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನಾ ಕಾರ್ಯ ಮಾಡುತ್ತೇನೆ. ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ, ಗ್ರಾಮ ಮಟ್ಟದಿಂದಲೇ ಪಕ್ಷದ ಸಂಘಟನೆಯನ್ನು ಬಲಪಡಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು. ಹಿರಿಯ ಮುಖಂಡರ ಮಾರ್ಗದರ್ಶನದೊಂದಿಗೆ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಪ್ರಯತ್ನಿಸಲಾಗುವುದು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತಾಲ್ಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ವಿಧಾನಸೌಧಕ್ಕೆ ಕಳುಹಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪರೀಕ್ಷಿತರಾಜೇ ಅರಸ್ ಮಾತನಾಡಿ, ಬಿಜೆಪಿ ಪಕ್ಷವು ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ನಿರಂತರವಾಗಿ ತನ್ನ ಮತಬಲವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಇಂತಹ ಸಂದರ್ಭದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿತವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಟಿ. ವೆಂಕಟೇಶ್ ಅವರನ್ನು ಮಂಡಲ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಪಕ್ಷದ ಸಿದ್ಧಾಂತದಂತೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಗೌರವ ದೊರೆಯಬೇಕು. ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಿದಾಗ ಮಾತ್ರ ಆಡಳಿತದ ಗುರಿ ಸಾಧಿಸಲು ಸಾಧ್ಯವಾಗುತ್ತದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಶಾಸಕರನ್ನಾಗಿ ಕಳುಹಿಸುವ ಸಂಕಲ್ಪ ಹೊಂದಿದ್ದು, ಕಾರ್ಯಕರ್ತರ ಸಹಕಾರದಿಂದ ಅದು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಎಚ್ ಸಿ ಲಕ್ಷ್ಮಣ್, ಮನುಗನಹಳ್ಳಿ ಮಂಜುನಾಥ್, ಮೊತ್ತ ಬಸವರಾಜಪ್ಪ, ಸರಗೂರು ಅಧ್ಯಕ್ಷ ಸಿ ಕೆ ಗಿರೀಶ್,
ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ಬಿಡಗಲು ರಾಜು, ನಿಕಟ ಪೂರ್ವ ಅಧ್ಯಕ್ಷ ಶಂಭೇಗೌಡ,
ವೈ.ಟಿ ಮಹೇಶ್, ಪಿ.ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ಚಂದ್ರಮೌಳಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಮಂಜುನಾಥ್, ವಿವೇಕಾನಂದ, ಪರಮೇಶ್ವರ್, ಗೋಪಾಲಯ್ಯ,
ಕೆ.ಲೋಕೇಶ್, ಮೋರ್ಚಾ ಅಧ್ಯಕ್ಷರುಗಳಾದ ಪೃಥ್ವಿ ಕುಮಾರ್, ಪುಟ್ಟಸ್ವಾಮಿ, ಬಾಲರಾಜು, ಬಸವರಾಜಚಾರಿ, ಹೊಸಹಳ್ಳಿ, ಕುಮಾರ್, ಭೀಮನಹಳ್ಳಿ ಸೋಮೇಶ್, ವೃಷಭೇಂದ್ರ, ಚಂದ್ರು, ರಾಜೇಂದ್ರ, ಮಂಜುಳಾ, ರಾಮಚಂದ್ರಣ್ಣ, ಸಿದ್ದಯ್ಯ, ಸಿಂಗಯ್ಯ, ಮಗ್ಗೆ ಪ್ರಕಾಶ್, ಜವರಯ್ಯ, ಬಸವರಾಜು, ಸೋಮಚಾರಿ, ನಾಗರಾಜ್, ರಾಮು, ರಾಜಣ್ಣ, ಶ್ರೀರಾಮುಲು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

