ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕವು ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರಗಳಲ್ಲಿ ಆಗುತ್ತಿರುವ ಗಣನೀಯ ಹೆಚ್ಚಳವನ್ನು ತೀವ್ರವಾಗಿ ಖಂಡಿಸಿದೆ.
ಈ ಕುರಿತು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಮಾಧ್ಯಮದವರೊಂದಿಗೆ ಮಾತನಾಡುತ್ತ “ಈ ಅನಪೇಕ್ಷಿತ ಬೆಲೆ ಏರಿಕೆಯು ಸಾಮಾನ್ಯ ಜನರ ಜೀವನದ ಮೇಲೆ ಭಾರಿ ಹೊರೆಯನ್ನು ಹೇರಿದೆ ಎಂದು ಆಮ್ ಆದ್ಮಿ ಪಾರ್ಟಿ ಅಭಿಪ್ರಾಯಪಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸುವ ಮೂಲಕ ಪಾರ್ಟಿ ಈ ವಿಷಯವನ್ನು ಗಂಭೀರವಾಗಿ ಎತ್ತಿ ಹಿಡಿದಿದೆ” ಎಂದು ಅವರು ಹೇಳಿದರು.
“ಈ ಬೆಲೆ ಏರಿಕೆಯ ಪರಿಣಾಮಗಳು ತುಂಬಾ ಅಪಾಯಕಾರಿವಾಗಿದ್ದು ಜನರನ್ನ ಮೇಲೆ ಬರೆ ಏಳದಂತಾಗಿದೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ರಸ್ತೆ ಸಾರಿಗೆ ವೆಚ್ಚ ಹೆಚ್ಚಾಗುತ್ತೆ, ಅದರ ಜೊತೆಗೆ ಎಲ್ಲಾ ನಿತ್ಯಾವಶ್ಯಕ ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತೆ. ಕೃಷಿ, ಸಾರಿಗೆ ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತೆ. ಮಧ್ಯಮ ವರ್ಗ ಮತ್ತು ಬಡವರ ಕುಟುಂಬಗಳ ಆರ್ಥಿಕ ಸ್ಥಿತಿ ಅಂತೂ ತೀವ್ರವಾಗಿ ಹದಗೆಡುತ್ತಿದೆ. ದೇಶದ ಆರ್ಥಿಕತೆಗೆ ದೀರ್ಘಕಾಲೀನ ನಷ್ಟವೂ ಕೂಡ ಆಗುತ್ತಿದೆ” ಎಂದು ಭೋಗೇಶ್ ಸೋಲಾಪುರ್ ತಮ್ಮ ಅಸಮಾಧಾನವನ್ನ ಹೊರಹಾಕಿದರು.
“ಕೇಂದ್ರ ಸರ್ಕಾರವು ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಬೆಲೆ ಏರಿಕೆಯನ್ನು ತಕ್ಷಣ ತಡೆಯಬೇಕು. ಇಲ್ಲವಾದರೆ ಜನರು ಈ ಅನ್ಯಾಯವನ್ನು ಸಹಿಸುವುದಿಲ್ಲ” ಆಮ್ ಆದ್ಮಿ ಪಾರ್ಟಿ ಈ ವಿಷಯದಲ್ಲಿ ಜನರೊಂದಿಗೆ ನಿಂತು ಸತತ ಹೋರಾಟ ನಡೆಸುವುದಾಗಿ ಭೋಗೇಶ್ ಸೋಲಾಪುರ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿಗಳಾದ ಸಂಜು ಶೆಟಗಾರ, ಯುವ ಮುಖಂಡ ಪ್ರಕಾಶ್ ಸಬರದ, ಮಹಿಳಾ ಮುಖಂಡರಾದ ಸುಶೀಲಾ ಮಿಣಜಗಿ, ನೀಲಾಂಬಿಕಾ ಬಿರಾದಾರ ಅವರು ಉಪಸ್ಥಿತರಿದ್ದರು.

