ದಲಿತ ಮುಖಂಡರಿಂದ ಸುದ್ದಿಗೋಷ್ಟಿ | ಜಿತೇಂದ್ರ ಕಾಂಬಳೆ ರಿಂದ ಶಾಸಕರ ತೇಜೋವಧೆ ಸಲ್ಲದು ಎಂದ ಮುಖಂಡರು
ಉದಯರಶ್ಮಿ ದಿನಪತ್ರಿಕೆ
ಇಂಡಿ: ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಂದ ದಲಿತ ಸಮುದಾಯಕ್ಕೆ ಯಾವುದೇ ಅನ್ಯಾಯ, ಅವಮಾನ ಆಗಿರುವುದಿಲ್ಲ. ದಲಿತ ಸಮುದಾಯದ ವ್ಯಕ್ತಿಗೆ ಸಾಮಾನ್ಯ ಮೀಸಲಾತಿಯಲ್ಲಿ ಪುರಸಭೆ ಅಧ್ಯಕ್ಷರನ್ನಾಗಿ ಮಾಡಿದ್ದು, ಗ್ಯಾರಂಟಿ ಅನುಷ್ಟಾನ ಸಮಿತಿ ತಾಲ್ಲೂಕು ಅಧ್ಯಕ್ಷರನ್ನಾಗಿ ಮಾಡಿದ್ದು, ಸಮುದಾಯಕ್ಕೆ ಹೆಮ್ಮೆ ತರುವ ವಿಷಯ. ಜೀತೆಂದ್ರ ಕಾಂಬಳೆ ಅವರು ಶಾಸಕರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಛಲವಾದಿ ಸಮಾಜದ ಮುಖಂಡ ಭೀಮಾಶಂಕರ ಮೂರಮನ ಮತ್ತು ದಲಿತ ಮುಖಂಡ ಮುತ್ತಪ್ಪ ಪೊತೆ ಜಂಟಿಯಾಗಿ ಹೇಳಿದರು.
ಅವರು ನಗರದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಯಾವುದೇ ಸಮುದಾಯದವರು ಶಾಸಕರ ಭೇಟಿಗೆ ಹೋದರೆ ಎಲ್ಲರೊಂದಿಗೆ ಗೌರವಯುತವಾಗಿ ಮಾತನಾಡುತ್ತಾರೆ. ಅದರಲ್ಲಿಯೂ ದಲಿತ ಸಮುದಾಯದವರಿಗೆ ಕಾಳಜಿ ವಹಿಸಿ ಮಾತನಾಡುತ್ತಾರೆ. ದಲಿತ ಸಮುದಾಯದ ಕಾಲೋನಿಗಳಿಗೆ ಸಿಸಿ ರಸ್ತೆ, ಸಮುದಾಯ ಭವನ, ಗ್ರಂಥಾಲಯ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ. ದಲಿತ ಸಮುದಾಯದವರಿಗಾಗಿ ಇಂಡಿ ನಗರದಲ್ಲಿ ಮಂಗಲ ಭವನ ನಿರ್ಮಾಣಕ್ಕೆ ಜಾಗ ಒದಗಿಸಿ, ಒಂದು ಕೋಟಿ ಅನುದಾನ ನೀಡಿದ್ದಾರೆ ಎಂದರು. ದಲಿತ ಮುಖಂಡ ಜಿತೇಂದ್ರ ಕಾಂಬಳೆ ಎನ್ನುವವರು ಒಂದು ಮಗುವಿನ ವಿಷಯ ಮುಂದಿಟ್ಟುಕೊಂಡು ಸಮಾಜದ ಹೆಸರು ಬಳಸಿಕೊಂಡು ಶಾಸಕರ ತೆಜೋವಧೆ ಮಾಡುವುದು ಬಿಡಬೇಕು ಎಂದು ಹೇಳಿದರು.
ಇಂಡಿ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರವರ ಭವ್ಯ ಮೂರ್ತಿ, ಸರ್ಕಲ್ ಅಭಿವೃದ್ದಿಗೆ ಹೆಚ್ಚಿನ ಕಾಳಜಿವಹಿಸಿದ್ದಾರೆ. ಸಾಮಾಜಿಕ ನ್ಯಾಯದ ತತ್ವದ ಅಡಿಯಲ್ಲಿ ಜನ ಸೇವೆ ಮಾಡುತ್ತಿರುವ ಅಪರೂಪದ ಶಾಸಕರು. ಅವರು ಸರ್ವ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡಿದಕ್ಕಾಗಿ ಮೂರು ಬಾರಿ ಎಲ್ಲ ಸಮುದಾಯದ ಮತದಾರರು ಮತ ನೀಡಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿ, ಯಶವಂತರಾಯಗೌಡ ಪಾಟೀಲ ಅವರು ಶಾಸಕರಾದ ಮೇಲೆ ಮುಖ್ಯಮಂತ್ರಿ ಪರಿಹಾರ ನೀದಿಯಿಂದ ಜಿಲ್ಲೆಯಲ್ಲಿಯೇ ಇಂಡಿ ಮತಕ್ಷೇತ್ರದಲ್ಲಿಯ ರೈತರಿಗೆ ಹೆಚ್ಚು ಪರಿಹಾರ ಬಂದಿದ್ದು, ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ ರಿಕ್ಮೆಂಡ್ ದಿಂದ ದಲಿತ ಸಮುದಾಯದ ಬಾಲಕಿಯ ಚಿಕಿತ್ಸೆಗಾಗಿ ಶಾಸಕರ ಬಳಿ ಬಾಲಕಿ ತಂದೆ ಬಂದಾಗ ಅವಮಾನಿಸಿ ಮಾತನಾಡುವ ಕಠೋರ ಹೃದಯದವರು ಶಾಸಕರಲ್ಲ. ಯಾರ ಮನಸ್ಸು ನೋಯಿಸದಂತೆ ಮಾತನಾಡುವ ಹೃದಯವಂತ ಶಾಸಕ ಯಶವಂತರಾಯಗೌಡ ಪಾಟೀಲ ಅವರದ್ದು. ಸ್ವಹಿತಾಸಕ್ತಿಗಾಗಿ ಸಮುದಾಯ ಬಲಿಕೊಡುವ ಕೆಲಸ ದಲಿತ ಮುಖಂಡರು ಮಾಡಿದರೆ ಸಮುದಾಯ ಸಹಿಸುವುದಿಲ್ಲ. ಶಾಸಕರ ಬಗ್ಗೆ ಇನ್ನು ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾದರೆ ಜಿತೇಂದ್ರ ಕಾಂಬಳೆ ಬಗ್ಗೆ ಛಲವಾದಿ ಸಮುದಾಯ ಕಠಿಣ ನಿಲುವು ತಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗಣಪತಿ ಬಾಣಿಕೋಲ, ಪ್ರದೀಪ ಮೂರಮನ್, ಮಲ್ಲು ಮಡ್ಡೀಮನಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಛಲವಾದಿ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

