ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ 85%ಕ್ಕಿಂತ ಅಧಿಕ ಅಂಕ ಪಡೆದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಹಲ್ಯಾಳದ ರೈತ ಸಭಾ ಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ಗ್ರಾಮೀಣ ಭಾಗದ ಮಕ್ಕಳು ಪ್ರತಿಭೆಯಲ್ಲಿ ಯಾರಿಗೂ ಕಡಿಮೆ ಇಲ್ಲ ಸರಿಯಾದ ಪ್ರೋತ್ಸಾಹ ಸಿಕ್ಕರೆ ಸಾಕು ನಮ್ಮ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ 85%ಕ್ಕಿಂತ ಹೆಚ್ಚು ಅಂಕ ಪಡೆದ ಈ 2000 ಮಕ್ಕಳು ನಮ್ಮ ತಾಲೂಕಿನ ಹೆಮ್ಮೆ ಇವರ ಅಂಕ ಮಾತ್ರ ಮುಖ್ಯವಲ್ಲ ಮುಂದೆ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ಬೆಳೆಯಬೇಕು ನಿಮ್ಮ ಮುಂದಿನ ಶಿಕ್ಷಣಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಥಣಿ ಕ್ಷೇತ್ರದಲ್ಲಿ ಯಾವೊಬ್ಬ ರೈತನ ಮಗನು ಶಿಕ್ಷಣದಿಂದ ವಂಚಿತನಾಗಬಾರದು ಎಂದರು.
ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಜನಾಂಗದವರು ಇನ್ನೂ ಹೆಚ್ಚಾಗಿ ಶಿಕ್ಷಣದತ್ತ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ನಿಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಎಂದು ಶಾಸಕರು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ ಹಾಗೂ ಎಸ್ ಬಿ ವಿಜಡಂ ಕರಿಯರ್ ಅಕಾಡೆಮಿಯ ಶರಣಯ್ಯ ಭಂಡಾರಿಮಠ ಮಾತನಾಡಿದರು.
ಈ ವೇಳೆ ಶಿವಬಸವ ಮಹಾಸ್ವಾಮಿಜಿ ಗಚ್ಚಿನಮಠ ಅಥಣಿ ಹಾಗೂ ಮಹಾಂತಪ್ರಭು ಸ್ವಾಮಿಗಳು ವಿರಕ್ತಮಠ ಶೇಗುಣಸಿ ಆಶೀರ್ವಚನ ನೀಡಿ, ತಾಲೂಕಿನ ಎಲ್ಲ ಮಕ್ಕಳಿಗೂ ಶಿಕ್ಷಣದ ಬೆಳಕು ದೊರೆಯಲಿ ಎಂದರು.
ಸಮಾರಂಭದಲ್ಲಿ ಸುಮಾರು 2000 ವಿದ್ಯಾರ್ಥಿಗಳು ಭಾಗವಹಿಸಿ ಸತ್ಕಾರವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಶೈಲ ನಾರಗೊಂಡ, ಶಿದರಾಯ ಯಲಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಆರ್ ಮುಂಜೆ, ಸಂತೋಷ ಹಳ್ಳೂರ, ವಿರಣ್ಣ ವಾಲಿ, ಗುತ್ತಿಗೆದಾರ ಶಿವರುದ್ರ ಗೂಳಪ್ಪನ್ನವರ, ಶಿವು ನಾಯಿಕ,ರಾಮನಗೌಡ ಪಾಟೀಲ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಸಂತೋಷ ಸಾವಡಕರ, ಸುಮಿತ ಸವದಿ, ಶಿವಕುಮಾರ ಸವದಿ,ಸಿದ್ದಾರೂಡ ಸವದಿ ಸೇರಿದಂತೆ ಇನ್ನಿತಿತರು ಉಪಸ್ಥಿತರಿದ್ದರು

