ಉದಯರಶ್ಮಿ ದಿನಪತ್ರಿಕೆ
ಚಡಚಣ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಚಡಚಣ ತಾಲೂಕು ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ತಾಲೂಕಿನ ಶಿಕ್ಷಕರ ಸೊಸೈಟಿ ಸಭಾಂಗಣದಲ್ಲಿ ನೆರವೇರಿತು.
ಸತತ ನಾಲ್ಕನೇ ಬಾರಿ ಅವಿರೋಧವಾಗಿ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಎ.ಎಸ್. ಸೊನ್ನಗಿ ಅವರು ಅಧಿಕಾರ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳೂ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಂಡರು.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಸಿ. ಉಮರಾಣಿ, ಗೌರವಾಧ್ಯಕ್ಷೆಯಾಗಿ ಆರ್.ಜೆ. ಬಿರಾದಾರ, ಉಪಾಧ್ಯಕ್ಷರಾಗಿ ಎಲ್.ಎಸ್. ಬಿರಾದಾರ, ಮಹಿಳಾ ಉಪಾಧ್ಯಕ್ಷೆಯಾಗಿ ಆರ್.ವ್ಹಿ. ಝಳಕಿ, ಖಜಾಂಚಿಯಾಗಿ ವ್ಹಿ.ಬಿ. ಭೈರಗೊಂಡ, ಸಹಕಾರ್ಯದರ್ಶಿಯಾಗಿ ಎಸ್.ಎಂ. ಬಗಲಿ, ಮಹಿಳಾ ಸಹಕಾರ್ಯದರ್ಶಿಯಾಗಿ ಎಸ್.ಪಿ. ಹಿರೇಮಠ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎಸ್. ಅವಟಿ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಎಸ್.ಎಸ್. ಸೂರಗೊಂಡ, ಕ್ರೀಡಾ ಕಾರ್ಯದರ್ಶಿಯಾಗಿ ರಿಯಾಜ್ ಅಹ್ಮದ್ ಮುಲ್ಲಾ, ಮಾಧ್ಯಮ ಸಂಚಾಲಕರಾಗಿ ಗೋಪಾಲ ಜಾಧವ ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಎಸ್.ಎಸ್. ಯಳಮೇಲಿ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಗಳ ನೂರಾರು ಶಿಕ್ಷಕರು, ಶಿಕ್ಷಣಾಭಿಮಾನಿಗಳು ಹಾಗೂ ಗಣ್ಯರು ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು. ಶಿಕ್ಷಕರ ಹಕ್ಕುಗಳ ರಕ್ಷಣೆ, ಶಿಕ್ಷಣದ ಗುಣಮಟ್ಟ ವೃದ್ಧಿ ಹಾಗೂ ಸಂಘದ ಬಲವರ್ಧನೆಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಂಘದ ನೂತನ ಅಧ್ಯಕ್ಷ ಎ.ಎಸ್. ಸೊನ್ನಗಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳ ಪರಿಹಾರ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಂಘದ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಸತೀಶ ಬಗಲಿ ಸ್ವಾಗತಿಸಿದರು. ಡಿ.ಎಸ್. ಬಗಲಿ ಕಾರ್ಯಕ್ರಮ ನಿರೂಪಿಸಿದರು.

