ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕೆ.ಎಂ.ಕೃಷ್ಣನಾಯಕ ಅವರಿಗೆ ಟಿಕೆಟ್ ಸಿಕ್ಕಿದ್ದರೆ ನಿಮ್ಮ ಆಶೀರ್ವಾದದಿಂದ ಈವಾಗ ಶಾಸಕರಾಗಿರುತ್ತಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷ ತೆಗೆದುಕೊಂಡ ಕೆಲ ತೀರ್ಮಾನದಿಂದ ಆ ಅವಕಾಶ ಕೈತಪ್ಪಿತ್ತು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಹಳೆ ಸಂತೆಮಾಳದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಸಮಾವೇಶ ಮತ್ತು ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೆ.ಎಂ. ಕೃಷ್ಣನಾಯಕ ಅವರು ಹೆಚ್ ಡಿ ಕೋಟೆಗೆ ಬಂದು 10 ವರ್ಷ ಕಳೆದಿರಬಹುದು. ಆದರೆ ಅಧಿಕಾರ ಇಲ್ಲದಿದ್ದರೂ ಇವತ್ತು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಟೊಂಕಕಟ್ಟಿ ನಿಂತಿದ್ದಾರೆ. ಇತಿಹಾಸ ಪುಟ ತಿರುವಿದಾಗ ಬಹಳಷ್ಟು ಜನ ಮೊದಲ ಚುನಾವಣೆಯಲ್ಲಿ ಎಡವಿರುವುದನ್ನು ನೋಡಿದ್ದೇವೆ. ಆದರೆ ಕ್ಷೇತ್ರದ ಜನ ದೂಡುವ ಪರೀಕ್ಷೆಗಳನ್ನು ಎದುರಿಸಿದಾಗ ಕಲ್ಲು ಕೂಡ ಶಿಲೆಯಾಗುತ್ತೆ ಎಂಬ ಗಾದೆ ಮಾತಿನಂತೆ ಎನ್ ಡಿಎ ಮೈತ್ರಿಕೂಟದ ಸರ್ಕಾರದಲ್ಲಿ , ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕೆ.ಎಂ. ಕೃಷ್ಣನಾಯಕ 2028ರ ವಿಧಾನಸಭೆ ಪ್ರವೇಶಿಸಲು ಜನ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಮಾತನಾಡಿ, ಮತ್ತೆ ಜೆಡಿಎಸ್ ಪಕ್ಷಕ್ಕೆ ಮರಳಿದ್ದನ್ನ ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ಮಾಜಿ ಸಚಿವ ಸಾರಾ ಮಹೇಶ್, ಹುಣಸೂರು ಶಾಸಕ ಜಿಡಿ ಹರೀಶ್ ಗೌಡ, ಮಾಜಿ ಶಾಸಕ ಕೆ. ಮಹದೇವ, ಎಂಎಲ್ಸಿ ಮಂಜೇಗೌಡ, ಮಹಾಪೌರರಾದ ರವಿಕುಮಾರ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ, ತಾಲೂಕು ಅಧ್ಯಕ್ಷರಾದ ರಾಜೇಂದ್ರ, ಗೋಪಾಲಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶ್ಯಾಮ್ ಸುಂದರ್, ಒಕ್ಕಲಿಗ ಸಂಘದ ಅಧ್ಯಕ್ಷ ಹರೀಶ್ ಗೌಡ, ನರಸಿಂಹೇಗೌಡ, ಮಳಲಿ ಶಾಂತಕುಮಾರ್, ಚಾ. ಸೋಮಣ್ಣ, ಕಾಳೆಹುಂಡಿ ಸಿದ್ದೇಗೌಡ, ಗುಂಡತ್ತೂರು ಪ್ರಕಾಶ್, ಮಹೇಶ್, ಶಿವು, ವಕೀಲ ರವಿ, ಉದಯಕುಮಾರ್, ಮಂಚಯ್ಯ, ಬರಗಾಲಪುರ ವೆಂಕಟೇಶ್, ಹೆಬ್ಬಾಳ ಮಹೇಶ್, ಸಿದ್ದಪ್ಪಾಜಿ, ಕರವೇ ನಟರಾಜ್, ಎಚ್ ಹನು, ಕೃಷ್ಣಾಪುರ ಶಿವಯ್ಯ, ಡಿ. ನಾಗರಾಜು, ಕಾಳಪ್ಪಾಜಿ ಸಿ, ವಡ್ಡರಗುಡಿ ರಘು, ಕೆಟಿಎಸ್ ವಿನೋದ್, ಕೃಷ್ಣಾಪುರ ಶಿವಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕೋಟೆಗೂ-ಗೌಡರಿಗೂ ಅವಿನಾಭಾವ ಸಂಬಂಧ
ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರಕ್ಕೂ ದೇವೇಗೌಡ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. 1989ರಲ್ಲಿ ಜೆಡಿಎಸ್ ರಾಜ್ಯದಲ್ಲಿ ಕೇವಲ ಎರಡು ಕ್ಷೇತ್ರದಲ್ಲಿ ಮಾತ್ರ ಗೆದ್ದಿತ್ತು. ಒಂದು ವೇಮಗಲ್ ಮತ್ತೊಂದು ಹೆಚ್ ಡಿ ಕೋಟೆ ಕೋಟೆ ವಿಧಾನಸಭಾ ಕ್ಷೇತ್ರ. ಅಂದು ಇಲ್ಲಿನ ಜನ ಜೆಡಿಎಸ್ ಗೆ ಆಶೀರ್ವಾದ ಮಾಡಿದ್ದನ್ನು ದೇವೇಗೌಡರು ಎಂದಿಗೂ ಮರೆಯುವುದಿಲ್ಲ. ಪಕ್ಷದಲ್ಲಿ ಯಾರೇ ಬಂದರೂ, ಯಾರೇ ಹೋದರೂ ಪಕ್ಷವನ್ನು ಪ್ರೀತಿಸುವ ವರ್ಗ, ದೇವೇಗೌಡರನ್ನು ಆರಾಧಿಸುವ ವರ್ಗ, ಕುಮಾರಸ್ವಾಮಿ ನಾಯಕತ್ವ ಮೆಚ್ಚುವ ವರ್ಗ ಯಾವುದಾದರು ಇದ್ದರೇ ಅದು ಹೆಚ್ ಡಿ ಕೋಟೆ ಕ್ಷೇತ್ರದ ಜನ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮತ್ತೆ ಅಪ್ಪಾಜಿ ಕ್ಯಾಂಟೀನ್ ಓಪನ್
ಹಸಿವು ಮುಕ್ತ ಕಾರ್ಯಕ್ರಮ ನೀಡುವ ನಿಟ್ಟಿನಲ್ಲಿ 2022ರಲ್ಲಿ ಅಪ್ಪಾಜಿ ಕ್ಯಾಂಟೀನ್ ತೆರೆದಿದ್ದೆ. ಕೇವಲ 10 ರೂಪಾಯಿ ತೆಗೆದುಕೊಂಡು ತಿಂಡಿ, ಊಟ ಕೊಡುತ್ತಿದ್ದೀವಿ. ಮಾರ್ಚ್ ತಿಂಗಳಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಹೆಚ್ ಡಿ ಕೋಟೆಗೆ ಬರಬೇಕಾಗಿತ್ತು. ಕಾರಣಾಂತರಗಳಿಂದ ಬರಲು ಆಗಲಿಲ್ಲ.ಹೀಗಾಗಿ ಮೇ ಅಥವಾ ಜೂನ್ ತಿಂಗಳಲ್ಲಿ ಹೆಚ್ ಡಿ ಕೋಟೆಗೆ ಕುಮಾರಸ್ವಾಮಿ ಬರುತ್ತಾರೆ. ಅಂದು ಮತ್ತೆ ಅಪ್ಪಾಜಿ ಕ್ಯಾಂಟೀನ್ ಓಪನ್ ಮಾಡುತ್ತೇನೆ ಎಂದು ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಹೇಳಿದರು.

