ಲೇಖನ
– ಡಾ.ಸಂತೋಷ ನವಲಗುಂದ (ಮಳ್ಳಿ) ಪತ್ರಕರ್ತ-ಸಾಹಿತಿ
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಅದೊಂದು ದಿನ. ಸಾಯಂಕಾಲದ ಹೊತ್ತು. ತೋಟದಲ್ಲಿ ಫಲ ತುಂಬಿಕೊಂಡ ಮಾವಿನ ಮರಕ್ಕೆ ಎಲ್ಲೋ ದೂರದಿಂದ ಬಾಲಕನೊಬ್ಬ ಎಸೆದ ಕಲ್ಲು ಗುರಿತಪ್ಪಿ ಅಲ್ಲೇ ತೋಟದ ಬದುವಿನಲ್ಲಿ ವಾಯುವಿಹಾರದಲ್ಲಿದ್ದ ತೋಟದ ಮಾಲೀಕನ ಹಣೆಗೆ ಬಡೆದ ಕಲ್ಲು ಗಾಯ ಮಾಡಿತು. ಕಲ್ಲು ಎಸೆದ ಬಾಲಕನಿಗೆ ಎಲ್ಲಿಲ್ಲದ ಭಯ ಕಾಡತೊಡಗಿತು. ಮಾಲೀಕ ಅತ್ಯಂತ ವಿನಯದಿಂದಲೇ ಆ ಬಾಲಕನನ್ನು ತಮ್ಮತ್ತ ಕರೆದು ಹಣ್ಣು ತಿನ್ನುವ ಆಸೆಯಿಂದ ಮರಕ್ಕೆ ಎಸೆದ ಕಲ್ಲು ನನ್ನನ್ನು ತಾಗಿತು. ನೀನೇನು ಬೇಕು ಅಂತ ಹೊಡೆದಿಲ್ಲ ಎನ್ನುವುದು ನನಗೆ ಗೊತ್ತು ಎಂದು ಬಾಲಕನಿಗೆ ತಿಳಿ ಹೇಳಿ, ನಿನ್ನ ತಂದೆಯನ್ನು ಕರೆದುಕೊಂಡು ಬಾ ಎಂದು ಹೇಳಿದರು. ಓಡೋಡಿ ಹೋದ ಬಾಲಕ ತನ್ನ ತಂದೆಯೊಂದಿಗೆ ತೋಟದ ಮಾಲೀಕನಲ್ಲೆ ಮರಳಿ ಬಂದ. ಆಗ ತಂದೆ, ಮಗ ಮಾಡಿದ ತಪ್ಪನ್ನು ತಿಳಿದು, ಭಯದಿಂದಲೇ ‘ಒಡೆಯ! ಮಗು ಮರದಲ್ಲಿನ ಮಾವಿನ ಹಣ್ಣಿಗೆ ಹೊಡೆದ ಕಲ್ಲು ತಮಗೆ ಬಡೆದಿದೆ. ಅದಕ್ಕೆ ನಾನು ಕ್ಷಮೆಯಾಚಿಸುವೆ. ಏನೂ ತಿಳಿಯದ ಮಗು ಹಣ್ಣು ತಿನ್ನುವ ಆಸೆಯಿಂದ ಹೀಗೆ ಮಾಡಿದ್ದಾನಷ್ಟೆ ಎಂದು ಅಂಗಲಾಚಿದ. ಮಾಲೀಕ ಸ್ವಲ್ಪವೂ ಗಂಭೀರವಾಗದೇ ಮುಗುಳ್ನಗುತ್ತಾ, ನಿನ್ನದೇ ಸ್ವಂತ ಭೂಮಿ ಇದ್ದು ಅಲ್ಲಿ ಮಾವು ಇದ್ದರೆ ಬಾಲಕನೇಕೆ ಇಲ್ಲಿ ಬರುತ್ತಿದ್ದ. ಬೇರೊಬ್ಬರ ತೋಟದಲ್ಲಿ ಕಲ್ಲೆಸೆಯುವ ಪ್ರಸಂಗವೂ ಬರುತ್ತಿರಲಿಲ್ಲ ಅಲ್ಲವೇ!. ಇಗೋ ನಿನಗೆ ೨ ಎಕರೆ ಜಮೀನು ಬರೆದು ಕೊಡುತ್ತೇನೆ. ಚೆನ್ನಾಗಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸು ಎಂದು ಹೇಳಿದ ಮಾಲೀಕ ಜಮೀನು ದಾನವಾಗಿ ನೀಡಿಯೇ ಬಿಟ್ಟ.

ಇದು ಯಾವುದೋ ಹೊರದೇಶದಲ್ಲಿ ನಡೆದ ಘಟನೆ ಅಲ್ಲ. ತಮ್ಮ ಇಡೀ ಆಸ್ತಿಯನ್ನೇ ನಾಡಿನ ಮಕ್ಕಳಿಗಾಗಿ ದಾನ ನೀಡಿ ದಾನಶೂರನೆಂದೇ ಖ್ಯಾತಿ ಹೊಂದಿದ ಪೂಜ್ಯ ಲಿಂ. ಲಿಂಗರಾಜ ಸರ್ ದೇಸಾಯಿಯವರ ಜೀವನದಲ್ಲಿ ನಡೆದ ಸತ್ಯ ಘಟನೆ. ಹೌದು!
ನವಲಗುಂದ-ಸಿರಸಂಗಿ ಸಂಸ್ಥಾನದ ಅರಸರಾಗಿದ್ದ ಪೂಜ್ಯ ಲಿಂ. ಲಿಂಗರಾಜ ಸರ್ ದೇಸಾಯಿಯವರ ಜನ್ಮದಿನ ೧೮೬೧ ರ ಇಸ್ವಿ ಜನೇವರಿ ೧೦. ಇವರು ಕರ್ನಾಟಕದ ಗದಗ ಜಿಲ್ಲೆಯ ಶಿಗ್ಲಿ ಗ್ರಾಮದಲ್ಲಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ರಾಮಪ್ಪ. ತಂದೆ ಗೂಳಪ್ಪ ಮತ್ತು ತಾಯಿ ಯಲ್ಲವ್ವರ ನಾಲ್ಕನೆಯ ಪುತ್ರ. ನಂತರ ಅವರು ಸಿರಸಂಗಿ ದೇಶಗತಿ ಸಂಸ್ಥಾನದ ದೇಸಾಯಿ ಜಾಯಪ್ಪನವರಿಂದ ದತ್ತಕ ಸ್ವೀಕರಿಸಲ್ಪಟ್ಟು ಅವರ ಹೆಸರು ಸಿರಸಂಗಿ ಲಿಂಗರಾಜ ಸರ್ ದೇಸಾಯಿ ಎಂದು ಬದಲಾಯಿತು. ಅವರು ಸಿರಸಂಗಿ ಪ್ರದೇಶದ ಕೊನೆಯ ದೇಸಾಯಿ (ಸ್ಥಾನಿಕ ಆಡಳಿತಗಾರ) ಆಗಿದ್ದರು. ಆಡಳಿತಗಾರನಾಗಿದ್ದರೂ, ವೈಯಕ್ತಿಕ ಐಶ್ವರ್ಯಕ್ಕಿಂತ ಸಮಾಜದ ಅಭಿವೃದ್ಧಿಯೇ ಅವರ ಜೀವನದ ಗುರಿಯಾಗಿತ್ತು. ಅಷ್ಟೇ ಅಲ್ಲದೇ ಉಸಿರೂ ಆಗಿತ್ತು. ತಮ್ಮ ವೈಯಕ್ತಿಕ ಬದುಕಿಗಿಂತಲೂ ಸಮಾಜದ ಶ್ರೇಯೋಭಿವೃದ್ಧಿಯ ಕನಸನ್ನೇ ಹೊತ್ತು ಗಂಧದ ಕೊರಡಿನಂತೆ ಬದುಕಿ ಸಮಾಜಕ್ಕೆ ಪರಿಮಳ ಬೀರಿದವರು. ಶಿಕ್ಷಣದ ಮೇಲಿನ ಅಪಾರ ಆಸಕ್ತಿ ಹೊಂದಿದ ಸಿರಸಂಗಿ ಲಿಂಗರಾಜ ದೇಸಾಯಿ ಅವರು ಶಿಕ್ಷಣವನ್ನು ಸಮಾಜೋದ್ಧಾರದ ಪ್ರಮುಖ ಸಾಧನವೆಂದು ನಂಬಿದ್ದರು. ೧೯೦೬ರಲ್ಲಿ ತಮ್ಮ ಸಂಪೂರ್ಣ ಆಸ್ತಿಯನ್ನು ಬಳಸಿಕೊಂಡು ನವಲಗುಂದ–ಸಿರಸಂಗಿ ಟ್ರಸ್ಟ್ ಅನ್ನು ಸ್ಥಾಪಿಸಿದರು. ಈ ಟ್ರಸ್ಟ್ ಮೂಲಕ ವಿಶೇಷವಾಗಿ ವೀರಶೈವ–ಲಿಂಗಾಯತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ ನೀಡಲಾಯಿತು. ಸಾವಿರಾರು ವಿದ್ಯಾರ್ಥಿಗಳು ಶಾಲೆ, ಕಾಲೇಜು ಹಾಗೂ ಉನ್ನತ ಶಿಕ್ಷಣ ಪಡೆಯಲು ಈ ಟ್ರಸ್ಟ್ ಸಹಾಯವಾಯಿತು. ಇದರ ಫಲಶೃತಿಯಾಗಿ ನಾಡಿನೆಲ್ಲೆಡೆ ಲಿಂಗಾಯತ ಸಮಾಜದ ಅನೇಕರು ಮಹಾನ್ ನಾಯಕರಾಗಿ ಬೆಳೆದದ್ದು ದಾಖಲಾರ್ಹವಾಗಿದೆ. ಸಂಸ್ಥಾನದ ಒಡೆತನದ ರಾಜ್ಯಭಾರದಲ್ಲಿ ಸಿಹಿಗಿಂತ ಕಹಿಯದ್ದೇ ಒಂದು ಪಾಲು ಹೆಚ್ಚು ಅನುಭವಿಸಿ ನಾಡಿನ ಲಿಂಗಾಯತ ಸಮಾಜಕ್ಕೆ ಅಮೃತವನ್ನೇ ಧಾರೆ ಎರೆದರು. ಸಂಸ್ಥಾನದ ಒಬ್ಬ ಅಧಿಪತಿಯಾಗಿರದೇ ಸಮಾಜೋಧಾರ್ಮಿಕ ಕಟ್ಟಾಳಾಗಿ, ಆರ್ಥಿಕ, ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಕೃಷಿಕರ ಪಾಲಿನ ಪ್ರಗತಿಯ ಮಾರ್ಗಕಾರರೂ ಆಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ಅನಿಷ್ಟ ಮೂಢಾಚಾರ, ಕಂದಾಚಾರಗಳ ವಿರುದ್ಧ ಜನತೆಯಲ್ಲಿ ಜಾಗೃತಿ ಉಂಟುಮಾಡಿದವರು. ಸಾಮಾಜಿಕ ಸುಧಾರಣೆ ಅವರು ತಮ್ಮ ಕಾಲಕ್ಕಿಂತ ಮುಂಚಿತವಾದ ಚಿಂತನೆಯವರಾಗಿದ್ದರು. ಬಾಲ್ಯವಿವಾಹ ವಿರೋಧಿಸಿದರು. ವಿಧವಾ ವಿವಾಹಕ್ಕೆ ಬೆಂಬಲ ನೀಡಿದರು. ಶಿಕ್ಷಣವೇ ಸಮಾಜದ ಉನ್ನತಿಗೆ ಮೂಲ ಎಂಬ ದೃಢ ನಂಬಿಕೆ ಹೊಂದಿದ್ದರು. ತಮ್ಮ ಸಂಪೂರ್ಣ ಆಸ್ತಿಯನ್ನು ಶಿಕ್ಷಣಕ್ಕಾಗಿ ಅರ್ಪಿಸಿದರು. ನವಲಗುಂದ–ಸಿರಸಂಗಿ ಟ್ರಸ್ಟ್ (೧೯೦೬) ಸ್ಥಾಪಿಸಿ ಸಾವಿರಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾದರು. ರೈತರು ಮತ್ತು ಗ್ರಾಮಾಭಿವೃದ್ಧಿಗೆ ಸಹಾಯದ ಹಸ್ತ ನೀಡಿ ರೈತರಿಗೆ ಸಾಲ ನೀಡಿದರು. ನೀರಾವರಿ, ಕೆರೆ, ಅಣೆಕಟ್ಟುಗಳ ನಿರ್ಮಾಣಕ್ಕೆ ನೆರವಾದರು. ಗ್ರಾಮೀಣ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡಿದರು. ಒಬ್ಬ ದೂರದೃಷ್ಟಿಯ ಪ್ರಜಾಹಿತ ಚಿಂತಕರಾಗಿ ಒಂದು ಸಮೃದ್ಧ ನಾಡ ಕಟ್ಟುವ ಪ್ರಭುಗಳಾಗಿದ್ದರು ಎನ್ನುವುದು ಸರ್ಯಸತ್ಯ. ತತ್ಪರಿಣಾಮವಾಗಿ ತಮ್ಮ ಪುತ್ರ ಸಂತಾನದ ಕೊರತೆಯನ್ನೇ ಸವಾಲಾಗಿ ಸ್ವೀಕರಿಸಿ “ನಾಡಿನ ಮಕ್ಕಳೇ ನನ್ನ ಮಕ್ಕಳು” ಎನ್ನುವ ಉದಾತ್ತ ಸತ್ ಚಿಂತನೆಯ ಫಲವಾಗಿ ಕೆ.ಎಲ್.ಇ. ಎಂಬ ಈ ಕಾಲದ ದೈತ್ಯ ವಿದ್ಯಾಸಂಸ್ಥೆ ಹುಟ್ಟಿ ಬೆಳವಣಿಗೆಯೂ ಕಂಡಿದೆ. ಕರ್ನಾಟಕದ ಪ್ರಸಿದ್ಧ ಕೆ.ಎಲ್.ಇ. ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಲಿಂಗರಾಜ ದೇಸಾಯಿಯವರ ದಾನ ಅತ್ಯಂತ ಮಹತ್ವದ್ದಾಗಿತ್ತು ಎನ್ನುವುದು ಗಮನಾರ್ಹವಾಗಿದೆ.
ಬೆಳಗಾವಿಯ ಲಿಂಗರಾಜ ಕಾಲೇಜು (೧೯೧೬) ಅವರ ಹೆಸರಿನಲ್ಲಿ ಸ್ಥಾಪಿಸಲಾಯಿತು. ಇದು ಅವರ ಶಿಕ್ಷಣ ಸೇವೆಗೆ ದೊರೆತ ಗೌರವವಾಗಿದೆ. ವೀರಶೈವ–ಲಿಂಗಾಯತ ಸಮುದಾಯದ ನಾಯಕತ್ವ, ೧೯೦೪ರಲ್ಲಿ ಧಾರವಾಡದಲ್ಲಿ ನಡೆದ ಮೊದಲ ಅಖಿಲ ಭಾರತ ವೀರಶೈವ ಮಹಾಸಭೆಗೆ ಅಧ್ಯಕ್ಷತೆ ವಹಿಸಿದರು. ೧೯೦೫ ನೇ ಇಸ್ವಿ ಜುಲೈ ೧೩, ೧೪, ೧೫ರಂದು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಮಹಾಸಭೆಯು ಪೂಜ್ಯ ಲಿಂಗರಾಜರ ಸರ್ವಾಧ್ಯಕ್ಷತೆಯಲ್ಲಿಯೇ ಜರುಗಿದ್ದು ವಿಶೇಷವಾಗಿದೆ. ಅವರು ಸಮ್ಮೇಳನಗಳಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ ಇವತ್ತು ವೀರಶೈವ ಲಿಂಗಾಯತ ಸಮಾಜದ ಮನೆಗಳಲ್ಲಿ ಮುಂಜಾನೆಯ ಸುಪ್ರಭಾತದಂತೆ ಕೇಳಿ ಆ ವಿಚಾರಗಳನ್ನು ಜೀವನದಲ್ಲಿ ಅನುಸರಿಸದ್ದೇ ಆದರೆ ನಿಜಕ್ಕೂ ಪ್ರಸ್ತುತ ಅಭಿವೃದ್ಧಿಯಲ್ಲಿ ಹೆಣಗುತ್ತಿರುವ ಲಿಂಗಾಯತ ಸಮಾಜಕ್ಕೆ ದಿಕ್ಸೂಚಿಯಾಗಬಲ್ಲದು. ಸಮುದಾಯದಲ್ಲಿ ಶಿಕ್ಷಣ ಮತ್ತು ಸಂಘಟನೆಯ ಕಿಚ್ಚು ಹಚ್ಚಿ ಪ್ರೇರಣೆ ನೀಡಿದರು ಲಿಂಗರಾಜ ಸರ್ ದೇಸಾಯಿಯವರು. ವೈಯಕ್ತಿಕ ತ್ಯಾಗ ಮತ್ತು ಪರೋಪಕಾರ, ತಮ್ಮ ಕೋಟೆ, ಮನೆ, ಭೂಮಿ ಸೇರಿ ಸಂಪತ್ತನ್ನೆಲ್ಲಾ ದಾನ ಮಾಡಿದರು. ಜಗತಿನಲ್ಲಿಯೇ ಇದೊಂದು ಅಪರೂಪದ ದಾನವೆಂದರೂ ಅತಿಶಯೋಕ್ತಿಯೇನಲ್ಲ. ವೈಭವದ ಜೀವನ ತ್ಯಜಿಸಿ ಸಮಾಜಸೇವೆಗೆ ಜೀವನವನ್ನೇ ಅರ್ಪಿಸಿದವರು. ಪೂಜ್ಯ ಹಾನಗಲ್ಲ ಗುರುಕುಮಾರ ಶಿವಯೋಗಿಗಳ ಪವಿತ್ರ ನುಡಿಗಳನ್ನು ಶಿರಸಾವಹಿಸಿ ಪಾಲಿಸಿದ ಪೂಜ್ಯ ಲಿಂಗರಾಜ ದೇಸಾಯಿಯವರು ಗುರುವಿನ ಮೆಚ್ಚುಗೆಗೆ ಪಾತ್ರರಾದವರು.

ಅವರ ಜೀವನ ಸಾಧನೆಗಳು ಇಂದು ಕೂಡ ಯುವಜನತೆಗೆ ಸೇವಾ ಮನೋಭಾವ, ತ್ಯಾಗ ಮತ್ತು ವಿದ್ಯಾಭಿಮಾನ ಕಲಿಸುತ್ತವೆ. ಈ ಕಾರಣಕ್ಕಾಗಿ ಆದರೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗಿನ ಅಧ್ಯಯನದಲ್ಲಿ ಲಿಂ.ಲಿಂಗರಾಜ ಸರ್ ದೇಸಾಯಿಯವರ ಜೀವನಾದರ್ಶದ ಮೌಲ್ಯ ಶಾಲಾ ಪಠ್ಯವಾಗುವುದು ತುರ್ತು ಎನಿಸದೇ ಇರದು. ಜತೆಗೆ ಇಂದು ವೀರಶೈವ ಲಿಂಗಾಯತ ಮಹಾಸಭೆಯಾಗಲಿ, ಸಮುದಾಯದ ಇನ್ನಿತರ ಪರಿಷತ್ತುಗಳಾಗಲಿ ಪೂಜ್ಯ ಲಿಂ. ಲಿಂಗರಾಜ ದೇಸಾಯಿಯವರನ್ನು ಎಷ್ಟರ ಮಟ್ಟಿಗೆ ಸ್ಮರಿಸಿ, ಗೌರವಿಸುತ್ತಿದೆ ಎಂಬುದು ಮಹಾಸಭೆಗೆ ಆತ್ಮಾವಲೋಕನದ ಕಾಲವಿದು. ಎಲ್ಲಿ, ಲಿಂಗರಾಜ ಸರ್ ದೇಸಾಯಿಯವರನ್ನಾಗಲಿ, ಲಿಂ.ಪೂಜ್ಯ ಹಾನಗಲ್ಲ ಶಿವಯೋಗಿಗಳನ್ನಾಗಲಿ, ಲಿಂ. ವಾರದ ಮಲ್ಲಪ್ಪನವರಿಗಾಗಲಿ ಹಾಗೂ ಲಿಂ. ಅರಟಾಳ ರುದ್ರಗೌಡರನ್ನಾಗಲಿ ಮತ್ತೆ ಮತ್ತೆ ಸ್ವರಣೆಗೆ ತಂದುಕೊಳ್ಳದಿದ್ದರೆ ಅಥವಾ ಅವರು ಹಾಕಿಕೊಟ್ಟ ದಾರಿಯಲ್ಲಿ ಮಹಾಸಭೆ ನಡೆಯದಿದ್ದರೆ ಖಂಡಿತ ವೀರಶೈವ ಲಿಂಗಾಯತರಿಗೆ ರಾಷ್ಟçದಲ್ಲಿ ಭವಿಷ್ಯವಿಲ್ಲ ಎನ್ನುವುದು ತಿಳಿದವರ ಮಾತು. ‘ತ್ಯಾಗವೀರ’, ‘ದಾನಶೂರ’ ಇತ್ಯಾದಿ ಬಿರುದಾಂಕಿತದಿಂದ ಬೆಳಗಿ ಲೋಕಕ್ಕೆ ಬೆಳಕಾದವರು ಸರ್ ದೇಸಾಯಿಯವರು. ನವಲಗುಂದ-ಸಿರಸಂಗಿ ಸಂಸ್ಥಾನದ ಲಿಂ. ಲಿಂಗರಾಜ ಸರ್ ದೇಸಾಯಿ ಅವರ ಜೀವನಾದರ್ಶಗಳು ಇವತ್ತು ಅಜ್ಞಾನ, ಸ್ವ-ಪ್ರತಿಷ್ಠೆ, ಅಂಧಕಾರ, ಅಸಮಾನತೆ ತುಂಬಿದ ಸಮಾಜಕ್ಕೆ ಸರ್ವಕಾಲಕ್ಕೂ ನಂದಾದೀವಿಗೆಯಂತೆ ಬೆಳಕನ್ನೀಯಬಲ್ಲವು ಎಂಬುದು ನಿರ್ವಿವಾದದ ಸಂಗತಿ. ಅವರು ಇವತ್ತು ಭೌತಿಕವಾಗಿ ನಮ್ಮೊಂದಿಗಿಲ್ಲವಾದರೂ ಅವರು ಹಾಕಿಕೊಟ್ಟ ಹಾದಿ ಅದು ಭವ್ಯ ದಾರಿ. ಅವರ ೧೬೫ ನೇ ಜಯಂತಿಯಲ್ಲಿ ಅವರನ್ನು ಸ್ಮರಣೆಗೆ ತಂದುಕೊಂಡು ಅವರ ವಿಚಾರಗಳಲ್ಲಿ ನಡೆಯುವುದು ಸಮಾಜದವರ ಆದ್ಯ ಕೆಲಸವಾಗಬೇಕಲ್ಲವೇ!.


