ಇಂದು (ಡಿಸೆಂಬರ ೨೩) “ರಾಷ್ಟ್ರೀಯ ರೈತ ದಿನ”ದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
“ನೇಗಿಲ ಕುಲದೊಳಗಡದಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ”
ಎಂಬ ರೈತ ಗೀತೆಯ ಸಾಲುಗಳು ನಮ್ಮ ಭಾರತದ ಆರ್ಥಿಕತೆಯ ಜೀವಾಳ, ಬೆನ್ನೆಲುಬು ಮತ್ತು ಗ್ರಾಮೀಣ ಸಮೃದ್ಧಿಗೆ ಗಮನಾರ್ಹ ಕೊಡುಗೆ ನೀಡುವವ ರೈತರ ಶ್ರಮವನ್ನು ಬಿಂಬಿಸುತ್ತದೆ. ಇಂದು ಎಲ್ಲ ರಂಗಗಳು ಅತ್ಯಂತ ಲಾಭದಾಯಕತ್ವವನ್ನು ಸಾಧಿಸುತ್ತಿದ್ದರೂ ಕೃಷಿ ಕ್ಷೇತ್ರದಲ್ಲಿ ರೈತರು ಬೆಳೆದ ಫಸಲಿಗೆ ಮಾರುಕಟ್ಟೆಯಲ್ಲಿ ಉತ್ತಮ ದರವಿಲ್ಲದೇ ಕಂಗಾಲಾಗಿದ್ದಾರೆ. ಆದರೆ ರಸಗೊಬ್ಬರ, ಕೀಟನಾಶಕಗಳ ಬೆಲೆ, ಕೆಲಸಗಾರ ಕೂಲಿ ಮತ್ತು ಇನ್ನಿತರ ಕೃಷಿ ಪರಕರಗಳು ದುಬಾರಿಯಾಗುತ್ತಿವೆ ಆದರೆ ಅವರ ಉತ್ಪನ್ನಕ್ಕೆ ಸೂಕ್ತ ಬೆಲೆ ದೊರಕದೇ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿರುವುದು ತೀರ ಕಳವಳಕಾರಿ ಸಂಗತಿಯಾಗಿದೆ. ಇಂದಿನ ದಿನಗಳಲ್ಲಿ ರೈತರೆಂದರೆ ಹೆಣ್ಣು ಕೊಡಲು ಮೂಗು ಮೂರಿಯುವ ಮತ್ತು ಅನ್ನದಾತನನ್ನು ತಿರಸ್ಕಾರ ಭಾವ ತಾಳುತ್ತಿರುವ ಅದೇಷ್ಟೋ ಜನರಿಗೆ ಈ ಜಗತ್ತು ಎಷ್ಟೇ ವಿಜ್ಞನ-ತಂತ್ರಜ್ಞಾನದಲ್ಲಿ ಮುಂದುವರೆದರೂ ಅಥವಾ ಅಭಿವೃದ್ಧಿ ಸಾಧಿಸಿದರೂ ಅನ್ನವನ್ನು ಆನಲೈನ್ ನಲ್ಲಿ ಬೆಳೆಯಲಾಗುವುದಿಲ್ಲ ಅದು ರೈತನ ಬೆವರಿನಿಂದ ಮಾತ್ರ ಸಾಧ್ಯ ಎಂಬ ಕಟು ಸತ್ಯವನ್ನು ಅರಿಯಬೇಕಾಗಿದೆ. ಹೀಗಾಗಿ ಜನ ನಮ್ಮ ಮೂಲ ಉದ್ಯೋಗವಾದ ಕೃಷಿಯನ್ನು ಬಿಟ್ಟು ನಗರಗಳತ್ತ ಮುಖಮಾಡುತ್ತಾ, ಉದ್ಯೋಗಕ್ಕಾಗಿ ವಲಸೆ ಹೋಗುತ್ತಿರುವದು ಕಂಡುಬರುತ್ತಿದೆ. ನಾವು ತಿನ್ನುವ ಆಹಾರವನ್ನು ಬೆಳೆಯುವ ರೈತರ ಸಂಕಷ್ಟಗಳಲ್ಲಿ ಭಾಗಿಯಾಗಿ ಅವರನ್ನು ಗೌರವಿಸುವದು ಮತ್ತು ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಮಹೋನ್ನತವಾದ ಉದ್ದೇಶದಿಂದ ಈ ಪ್ರತಿವರ್ಷ ಡಿಸೆಂಬರ ೨೩ ರಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಆಚರಣೆ ಹಿನ್ನೆಲೆ

ರೈತ ನಾಯಕರು, ರೈತರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜೀವನ ಸುಧಾರಿಸಲು ಅನೇಕ ಪ್ರಗತಿಪರ ಕೃಷಿ ನೀತಿಗಳನ್ನು ರೂಪಿಸಿದ ಭಾರತದ ೫ ನೇಯ ಪ್ರಧಾನ ಮಂತ್ರಿಯಾಗಿದ್ದ ಶ್ರೀ ಚೌಧರಿ ಚರಣಸಿಂಗ್ ಅವರು ತಮ್ಮ ಜನ್ಮ ದಿನವನ್ನು ರೈತರ ದಿನವನ್ನಾಗಿ ಆಚರಿಸಬೇಕೆಂದು ಕರೆ ಕೊಟ್ಟಿದ್ದರು. ಈ ರೈತರ ದಿನವನ್ನು ಹಿಂದಿ ಭಾಷೆಯಲ್ಲಿ ಕಿಸಾನ್ ದಿವಸ್ ಎಂತಲೂ ಕರೆಯುತ್ತಾರೆ. ಭಾರತ ಸರ್ಕಾರವು ಡಿಸೆಂಬರ ೨೩ ರಂದು ರೈತರ ಕಲ್ಯಾಣವನ್ನು ಸುಧಾರಿಸಲು, ರೈತಪರವಾದ ಕೆಲಸ-ಕಾರ್ಯಗಳನ್ನು ಮತ್ತು ದೇಶದ ಬೆನ್ನೆಲುಬು ಆಗಿದ್ದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಮನಗಂಡಿದ್ದ ಚೌಧರಿ ಚರಣಸಿಂಗ್ ಅವರ ಪ್ರಯತ್ನಗಳೆಲ್ಲವನ್ನು ಗುರುತಿಸಲು ಅವರ ಜನ್ಮ ದಿನವನ್ನು ರೈತ ದಿನವನ್ನಾಗಿ ಆಚರಿಸಬೇಕೆಂದು ನಿರ್ಧಾರಿಸಿತು. ಚೌಧರಿ ಚರಣಸಿಂಗ್ ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ಭೂ ಸುಧಾರಣೆಗಳು, ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆಗಳು ಮತ್ತು ನೀರಾವರಿ ಸೌಲಭ್ಯ ಒದಗಿಸುವುದು ಇಂತಹ ರೈತಪರ ನೀತಿಗಳನ್ನು ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದಕ್ಕಾಗಿ ರೈತ ಕಲ್ಯಾಣ, ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಬಿವೃದ್ಧಿಯನ್ನಿ ಸಾಧಿಸಲು ಮತ್ತು ಕೃಷಿ ಕ್ಷೇತ್ರವನ್ನು ಇನ್ನಷ್ಟು ಉತ್ತೇಜಿಸಲು ಈ ದಿನವನ್ನು ಸ್ಥಾಪಿಸಲಾಯಿತು. ನಮ್ಮ ಸಮಾಜ ಮತ್ತು ಆರ್ಥಿಕತೆಗೆ ರೈತರು ನೀಡುವ ಕೊಡುಗೆಗಳನ್ನು ಗುರುತಿಸಲು ಮತ್ತು ಇಡೀ ಲೋಕಕ್ಕೆ ಅನ್ನವನ್ನು ನೀಡುವ ಮತ್ತು ಹೆಸರನು ಬಯಸದೇ ಸದಾ ದೇಶ ಸೇವೆಯೇ ಗೈಯ್ಯುವ ನೇಗಿಲ ಯೋಗಿಗೆ ಗೌರವ ಸಲ್ಲಿಸಲು ಆಚರಿಸಲಾಗುತ್ತಿದೆ.

ಆಚರಣೆಯ ಮಹತ್ವ
ಇಂದು ಕಠಿಣ ಸವಾಲು ಮತ್ತು ತೀವ್ರ ಸಂಕಷ್ಟ ಎದುರಿಸುತ್ತಿರುವ ರೈತ ಸಮುದಾಯವು ಆರ್ಥಿಕ ಸ್ಥಿತಿಯನ್ನು ಸುಧಾರಿಸುವದಕ್ಕಾಗಿ ಅವರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಪೋಷಿಸುವ ಮಹೋನ್ನತವಾದ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ಮಿಶ್ರ ಆರ್ಥಿಕತೆಯ ವ್ಯವಸ್ಥೆ ಹೊಂದಿದ ಭಾರತದಂತಹ ದೇಶದಲ್ಲಿ ಕೃಷಿಯು ಎಲ್ಲಾ ರಂಗಗಳಿಗೆ ಅಡಿಪಾಯವಾಗಿದೆ. ಅದಕ್ಕಾಗಿ ರೈತರಿಲ್ಲದೇ ಭವಿಷ್ಯವಿಲ್ಲ ಎಂಬುದನ್ನು ಅರಿತು ದಣಿವರಿಯದ ರೈತರ ಪ್ರಯತ್ನಗಳು, ಬೆವರು ಮತ್ತು ಸದಾ ಇತರರಿಗಾಗಿಯೇ ತಮ್ಮ ಜೀವನವನ್ನು ತ್ಯಾಗ ಮಾಡುವ ರೈತ ಸಮುದಾಯ ಶ್ರಮದ ಫಲವಾಗಿ ನಾವು ಇಂದು ಒಂದು ತುತ್ತು ಅನ್ನವನ್ನು ಸವಿಯುತ್ತೇವೆ. ರಾಷ್ಟçದ ಬೆನ್ನೆಲುಬು ಆಗಿರುವ ನೇಗಿಲ ಯೋಗಿಗೆ ನಾವೆಲ್ಲರೂ ಕನಿಷ್ಠ ಈ ದಿನವಾದರೂ ಗೌರವ ಸಮರ್ಪಣೆ ಮಾಡಲೇಬೇಕು.
ಆಹಾರ ಭದ್ರತೆ ಮತ್ತು ದೇಶದ ಆರ್ಥಿಕತೆಯನ್ನು ಸುಸ್ಥಿರಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ರೈತರನ್ನು ಗೌರವಿಸುದು ಮತ್ತು ಅತಿ ಸುಖ ಬಯಸದೇ, ಗೌರವಕ್ಕೆ ಆಶಿಸದೇ ಸದಾ ಇಡೀ ಜಗತ್ತಿನ ಎಲ್ಲ ಮಾನವ ಸಂಕುಲಕ್ಕೆ ನಿಸ್ವಾರ್ಥತೆಯಿಂದ ಅನ್ನವನ್ನು ನೀಡುವ ರೈತರನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ರೈತರ ಭಕ್ತಿ ಮತ್ತು ತ್ಯಾಗ ಜೀವನವನ್ನು ಗುರುತಿಸಿ, ಅವರ ಸಾಮಾಜಿಕ ಮತ್ತು ಆರ್ಥಿಕ ಯೋಗಕ್ಷೇಮಗಳ ಬಗ್ಗೆ ಬೆಳಕು ಚೆಲ್ಲಲು ಈ ದಿನದ ಆಚರಣೆಯ ಮೂಲಕ ಜನಜಾಗೃತಿ ಅರಿವು ಮೂಡಿಸಲಾಗುತ್ತಿದೆ. ರೈತರಿಗೆ ಆಧುನಿಕ ಬೇಸಾಯ ಕ್ರಮ, ಪದ್ಧತಿ, ಕೃಷಿ ತಂತ್ರಜ್ಞಾನ, ಕೃಷಿ ನೀತಿಗಳ ರೂಪಿಸಿ ಅವರು ಇನ್ನಷ್ಟು ಹೆಚ್ಚಿನ ಇಳುವರಿ ಪಡೆಯುವಂತೆ ಪ್ರೇರೇಪಿಸಲಾಗುತ್ತಿದೆ.
೨೦೨೫ ನೇ ವರ್ಷದ ಘೋಷವಾಕ್ಯ
“ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವುದು ಮತ್ತು ಭವಿಷ್ಯದ ರಾಷ್ಟçದ ಆರ್ಥಿಕ ಅಭಿವೃದ್ಧಿಗಾಗಿ ಮಹಿಳಾ ರೈತರನ್ನು ಸಬಲೀಕರಣಗೊಳಿಸುವುದು” ಈ ವರ್ಷದ ರೈತರ ದಿನಾಚರಣೆಯ ಪ್ರಮುಖ ಧ್ಯೇಯೋದ್ಧೇಶವಾಗಿದೆ. ಅಷ್ಟೇ ಅಲ್ಲದೇ ನಮ್ಮ ರೈತರು ಬರಗಾಲದಂತಹ ಸಂಕಷ್ಟಗಳಲ್ಲಿ ಉತ್ತಮ ಫಸಲಿನೊಂದಿಗೆ ಬೆಳೆ ಬೆಳೆಯುವುದು, ನೀರು ಸಂರಕ್ಷಣಾ ಮತ್ತು ಅಂತರ್ಜಲ ಮಟ್ಟ ಹೆಚಿಸುವ ಮಳೆ ನೀರು ಕೋಯ್ಲು, ಚೆಕ್ ಡ್ಯಾಮ್ನಂತಹ ನೀರಿನ ಪುರ್ನಬಳಕೆಯ ಕೃಷಿ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ಮಹಿಳೆಯು ಕೂಡಾ ಕೃಷಿ ಕ್ಷೇತ್ರದಲ್ಲಿ ತನ್ನ ಅಮೂಲ್ಯವಾದ ಕೊಡುಗೆ ನೀಡುವಂತೆ ಹೆಚ್ಚಿನ ಉತ್ತೇಜನ ನೀಡುವ ಉದಾತ್ತ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ.
ಕೊನೆಯ ನುಡಿ
“ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು, ರಾಟಿ ನಡೆಯುವುದು ಮೇಟಿಯಿಂದಲೇ. ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಈ ಜಗವೆಲ್ಲ” ಎಂಬ ಸಾಲುಗಳು ಸರ್ವಜ್ಞನ ವಚನಗಳಲ್ಲಿ ರೈತನ ಮಹತ್ವ ಉಲ್ಲೇಖಿತವಾಗಿದೆ. ನಾವು ತಿನ್ನುವ ಪ್ರತಿಯೊಂದು ತುತ್ತೂ ರೈತನ ಸಮರ್ಪಣೆಯ ಫಲ. ಈ ಭೂಮಿಯೇ ಮಾತೆ, ರೈತರೇ ದೇವರೆಂದು ಅರಿತು ಇಂದಾದರೂ ಜಗದ ಹಸಿವನ್ನು ನೀಗಿಸುವ ನೇಗಿಲ ಯೋಗಿಯ ತ್ಯಾಗವನ್ನು ಗೌರವಿಸಲು ಮತ್ತು ಕೃತಜ್ಞತೆಯನ್ನು ಸಲ್ಲಿಸೋಣ. ಈ ಭೂಮಿಯನ್ನು ಪೋಷಿಸುವ, ಇಡೀ ಜಗತ್ತಿಗೆ ಆಹಾರ ನೀಡುವ ಮತ್ತು ದೇಶದ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಮ್ಮ ರೈತ ಸಮುದಾಯ ಬೆಂಬಲಕ್ಕೆ ಇಂದು ನಾವೆಲ್ಲರೂ ನಿಲ್ಲಬೇಕಾಗಿದೆ. ಶ್ರಮಯೇವ ಜಯತೇ ಎನ್ನುವದು ನಮ್ಮ ಮೂಲಮಂತ್ರವಾಗಬೇಕಾದರೆ ನಿಸ್ವಾರ್ಥ ಸೇವೆ ಮತ್ತು ಸಮರ್ಪಣಾ ಭಾವದಿಂದ ದುಡಿಯುವ ರೈತರಿಗೆ ಕೃತಜ್ಞತೆ ಸಲ್ಲಿಸೋಣ. ಕೃಷಿ ಇಲಾಖೆಗಳು ಸಾರ್ವಜನಿಕವಾಗಿ ಶಾಲೆ-ಕಾಲೇಜು, ವಿಶ್ವವಿದ್ಯಾಲಯ ಮಟ್ಟದಲ್ಲಿ ರೈತರ ದಿನದ ಆಚರಣೆಯ ಮೂಲಕ ಕೃಷಿ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಫಲವನು ಬಯಸದೇ ಸದಾ ಕರ್ಮವೇ ಇಹಪರ ಸಾಧನವೆಂದು ಕಷ್ಟದೊಳನ್ನವ ದುಡಿಯುವ ತ್ಯಾಗಿ ರೈತರ ದಿನವನ್ನು ಕೇವಲ ಸಾಂಕೇತಿಕವಾಗಿ ಆಚರಿಸದೇ ಸಾಲದು. ರೈತರ ಯಶಸ್ಸಿನ ಮೇಲೆ ಅವಲಂಬಿತವಾಗಿರುವ ನಮ್ಮ ದೇಶದ ಆರ್ಥಿಕತೆಗೆ ಪೂರಕವಾಗುವಂತಹ ಹೊಸ ರೈತ ಸ್ನೇಹಿ ಕೃಷಿ ನೀತಿಗಳನ್ನು ರೂಪಿಸುವಂತಾಗಬೇಕು. ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿದ ರೈತರನ್ನು ಸಂಕಷ್ಟದಿಂದ ರಕ್ಷಿಸಬೇಕಾಗಿದೆ. ಅಂದಾಗ ಮಾತ್ರ ಕೃಷಿ ದೇಶದ ಬೆನ್ನೆಲುಬು; ಆರ್ಥಿಕತೆಯ ಜೀವಾಳವಾಗಲು ಸಾಧ್ಯ ಎಂಬುದು ನನ್ನ ಅಂಬೋಣ.


