ಲೇಖನ
– ಪ್ರಶಾಂತ ಕುಲಕರ್ಣಿ
ಉಪನ್ಯಾಸಕರು
ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ
ಸಿಂದಗಿ. ಜಿಲ್ಲಾ: ವಿಜಯಪುರ
Ph:9845442237
ಉದಯರಶ್ಮಿ ದಿನಪತ್ರಿಕೆ
ಮಕ್ಕಳ ಜೀವನವನ್ನು ಕಟ್ಟಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂಬುದು ನಾವು ಹಲವು ಬಾರಿ ಕೇಳಿರುವ ಸತ್ಯ. ಆದರೆ ಪೋಷಕರ ಪಾತ್ರವು ಕೇವಲ ಆಹಾರ, ಬಟ್ಟೆ, ಶಿಕ್ಷಣ ನೀಡುವುದಕ್ಕೆ ಸೀಮಿತವಲ್ಲ; ಅದು ಇನ್ನಷ್ಟು ಆಳವಾಗಿ, ಇನ್ನಷ್ಟು ಮೃದುವಾಗಿ, ಇನ್ನಷ್ಟು ಜವಾಬ್ದಾರಿಯಾಗಿ ಮಕ್ಕಳ ಮನಸ್ಸಿನಲ್ಲಿ ರೂಪುಗೊಳ್ಳುತ್ತದೆ ಮಗು ಜನಿಸಿದ ಕ್ಷಣದಿಂದಲೇ ಪೋಷಕರ ಕಣ್ಣಿನಲ್ಲಿ ಜಗತ್ತನ್ನು ನೋಡುವುದನ್ನು, ಅವರ ಹೃದಯದಲ್ಲಿ ಭಾವನೆಗಳನ್ನು ಅನುಭವಿಸುವುದನ್ನು, ಅವರ ನಡೆ–ನುಡಿಯಲ್ಲಿ ಜೀವನದ ಅರ್ಥವನ್ನು ಹುಡುಕುವುದನ್ನು ಆರಂಭಿಸುತ್ತದೆ.
ಮನೆಯೇ ಮಕ್ಕಳ ಮೊದಲ ಪಾಠ ಶಾಲೆ; ಪೋಷಕರು ಮೊದಲ ಮತ್ತು ಅತ್ಯಂತ ಪರಿಣಾಮಕಾರಿ ಗುರುಗಳು. ಮನೆಯೊಳಗಿನ ಒಡನಾಟ, ಪ್ರೀತಿ, ಶಾಂತಿ, ಮಾತಿನ ಮಧುರತೆ—ಇವು ಮಕ್ಕಳ ಮನಸ್ಸಿನಲ್ಲಿ ಮೌಲ್ಯಗಳ ಬೀಜ ಬೀಳಿಸುತ್ತವೆ. ಸಲಹೆಗಳು, ಗದರಿಕೆಗಳು, ಪಾಠಗಳಿಗಿಂತಲೂ ಹೆಚ್ಚು, ಪೋಷಕರು ಹೇಗೆ ಬದುಕುತ್ತಾರೆಂಬುದೇ ಮಕ್ಕಳಿಗೆ ಜೀವನದ ದೊಡ್ಡ ಪಾಠ. ಹೀಗಾಗಿ ಮೌಲ್ಯಗಳನ್ನು ಕೇವಲ ಕಲಿಸುವುದಲ್ಲ; ಜೀವನದಲ್ಲಿ ನಾವೇ ಪಾಲಿಸುವುದರಿಂದಲೇ ಮಕ್ಕಳು ಅವನ್ನು ಸಹಜವಾಗಿ ಅಳವಡಿಸಿಕೊಳ್ಳುತ್ತಾರೆ.
ಮಕ್ಕಳು ತಪ್ಪು ಮಾಡುವುದು ಸಹಜ

ಇದು ಅವರ ಅಜ್ಞಾನ; ದಂಡಿಸಬೇಕಾದ ಪಾಪವಲ್ಲ. ತಪ್ಪು ಮಾಡಿದಾಗ ಕೋಪದಿಂದ ಗದರಿಸಿದರೆ ಮಗು ಭಯಪಡುವುದನ್ನು ಕಲಿಯುತ್ತದೆ, ಆದರೆ ತಪ್ಪನ್ನು ತಿದ್ದಿಕೊಳ್ಳುವುದನ್ನು ಕಲಿಯುವುದಿಲ್ಲ. ಆದರೆ ಮೃದುಸ್ವರದಲ್ಲಿ, ತಾಳ್ಮೆಯಿಂದ, “ಇದು ಹೀಗೆ ಮಾಡಿದರೆ ಏಕೆ ಉತ್ತಮ?” ಎಂದು ವಿವರಿಸಿದಾಗ ಮಕ್ಕಳು ತಪ್ಪಿನ ಅರ್ಥವನ್ನು ಹಿಡಿಯುತ್ತಾರೆ ಮತ್ತು ಮರುಕಳಿಸುವುದಿಲ್ಲ. ಮನೆಯೊಳಗಿನ ಶಾಂತಿ ಮಕ್ಕಳ ಮನಸ್ಸಿನ ಸಮತೋಲನವಾಗುತ್ತದೆ. ಪೋಷಕರು ಪರಸ್ಪರ ಗೌರವದಿಂದ ಮಾತನಾಡಿದಾಗ, ಮಕ್ಕಳು ಪ್ರೀತಿಯ ಭಾಷೆ, ಸಂವೇದನೆಯ ಭಾಷೆ, ಮನುಷ್ಯತ್ವದ ಭಾಷೆ ಕಲಿಯುತ್ತಾರೆ. ಮಕ್ಕಳ ಸ್ವಭಾವಕ್ಕೆ ಮನೆಯ ಶೈಲಿ ಒಂದು ಮೌನ ಗುರುವಾಗುತ್ತದೆ
ಗೌರವ
ಮಕ್ಕಳು ಕಲಿಯಬೇಕಾದ ಮೊದಲ ಮೌಲ್ಯ. ಇದು ಕೇವಲ ಹಿರಿಯರಿಗೆ ವಂದನೆ ಮಾಡುವ ಮಟ್ಟದಲ್ಲಿಲ್ಲ. ಕಿರಿಯರು, ಗೆಳೆಯರು, ಶಿಕ್ಷಕರು, ಅತಿಥಿಗಳು, ಕೆಲಸಗಾರರು ಎಲ್ಲರೂ ಗೌರವಕ್ಕೆ ಪಾತ್ರರು ಎಂಬ ಅರಿವು ಮಕ್ಕಳಲ್ಲಿ ಬೆಳೆಸಬೇಕು. ಮನೆಯಲ್ಲಿರುವ ಪ್ರತಿಯೊಬ್ಬರೂ ತಮ್ಮದೇ ಆದ ಗಡಿ, ಭಾವನೆ, ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಬೇರೆಯವರ ಕೊಠಡಿಗೆ ಪ್ರವೇಶಿಸುವ ಮುನ್ನ ಬಾಗಿಲು ತಟ್ಟಿ ಅನುಮತಿ ಕೇಳೋದು, ಅವರ ವಸ್ತು ಬಳಸುವ ಮುನ್ನ ಅನುಮತಿ ಕೇಳುವುದು, ಇಷ್ಟವಿಲ್ಲದ ಕೆಲಸವನ್ನು ಬಲವಂತಪಡಿಸದಿರಲು ಕಲಿಸುವುದು—ಇವೆಲ್ಲವು ಮನುಷ್ಯತ್ವದ ಮೂಲಗೌರವವನ್ನು ಕಲಿಸುವ ಸರಳ ಜೀವನಪಾಠಗಳು.
ಆಹಾರದ ಸಂಸ್ಕೃತಿ
ಆಹಾರದ ಸಂಸ್ಕೃತಿಯೂ ಜೀವನ ಮೌಲ್ಯಗಳಲ್ಲೇ ಒಂದು ಭಾಗ. ಮೊಬೈಲ್ ಹಿಡಿದು ಊಟ ಮಾಡುವ ಅಭ್ಯಾಸ ಮಕ್ಕಳು ಏಕಾಗ್ರತೆ, ತಾಳ್ಮೆ, ಜೀರ್ಣಕ್ರಿಯೆ, ಹಾಗೆಯೇ ಕುಟುಂಬ ಬಾಂಧವ್ಯಕ್ಕೂ ಹಾನಿ ಮಾಡುತ್ತದೆ. ಊಟ ಮಾಡುವಾಗ ಕುಟುಂಬ ಒಟ್ಟುಗೂಡಿ ಕುಳಿತು ಮಾತನಾಡುವುದು, ದಿನದ ಘಟನೆಗಳನ್ನು ಹಂಚಿಕೊಳ್ಳುವುದು, ತಿನ್ನುವ ಆಹಾರಕ್ಕೆ ಕೃತಜ್ಞತೆ ವ್ಯಕ್ತಪಡಿಸುವುದು ಇವೆರಡೂ ಮಕ್ಕಳಲ್ಲಿ ಸರಳತೆ, ಕೃತಜ್ಞತೆ ಮತ್ತು ಮನಸ್ಸಿನ ಸಮತೋಲನವನ್ನು ಬೆಳೆಸುತ್ತವೆ. ಪೋಷಕರು ಊಟದ ಸಮಯದಲ್ಲಿ ಮೊಬೈಲ್ ನೋಡದೇ ಮಕ್ಕಳೊಂದಿಗೆ ಕಳೆಯುವ ಕ್ಷಣಗಳು ಅವರ ಆತ್ಮವಿಶ್ವಾಸಕ್ಕೆ ಆಹಾರವಾಗುತ್ತವೆ.
ಮನೆಯ ಸ್ವಚ್ಛತೆ ಮತ್ತು ಜವಾಬ್ದಾರಿ
ಮನೆಯ ಸ್ವಚ್ಛ ತೆಯಲ್ಲಿ ಮಕ್ಕಳು ಕೂಡ ಭಾಗಿಗಳಾಗಬೇಕು. ಆಟಿಕೆಗಳನ್ನು, ಪಾತ್ರೆಗಳನ್ನು ಜೋಡಿಸುವುದು, ತಾವು ಚೆಲ್ಲಿದ ಕಸವನ್ನೇ ಸ್ವತಃ ಕ್ಲೀನ್ ಮಾಡುವುದು, ತಮ್ಮ ಬಟ್ಟೆ–ಪುಸ್ತಕಗಳನ್ನು ವ್ಯವಸ್ಥೆ ಮಾಡುವುದು, ತಮ್ಮ ಹಾಸಿಗೆ ಗಳನ್ನು ತಾವೇ ಮಡಿಚಿ ಇಡುವುದು ಇವು ಚಿಕ್ಕ ಅಭ್ಯಾಸಗಳಾದರೂ ಮಗುವಿನಲ್ಲಿ ಜವಾಬ್ದಾರಿ, ಶಿಸ್ತು, ಸ್ವತಂತ್ರತೆ ಹಾಗೂ ಸಮಾಜದಲ್ಲಿ ಭಾಗಿಯಾಗುವ ಮನೋಭಾವವನ್ನು ಬೆಳೆಸುತ್ತವೆ. ಮನೆಯಲ್ಲಿ ಒಬ್ಬರೇ ಕೆಲಸ ಮಾಡುತ್ತಾರೆ ಎಂಬ ಭಾವ ಬಾರದಂತೆ, “ಈ ಮನೆ ನನಗೂ ಸೇರಿದೆ” ಎಂಬ ಅರಿವು ಮಕ್ಕಳ ವ್ಯಕ್ತಿತ್ವದ ದಿಕ್ಕನ್ನು ಬದಲಿಸುತ್ತದೆ.
ಮಕ್ಕಳಿಗೆ ಓದು, ಆಟ, ವಿಶ್ರಾಂತಿ ಎಲ್ಲವೂ ಮುಖ್ಯ. ಆದರೆ ಯಾವುದು ಯಾವಾಗ ಎಂಬ ಅರಿವು ಇನ್ನೂ ಮುಖ್ಯ. ‘ಆಟಕ್ಕಿಂತ ಮುಂಚೆ ಪಾಠ’ ಎನ್ನುವ ಸರಳ ನಿಯಮವೇ ನಂತರ ದೊಡ್ಡ ಜೀವನ ಶಿಸ್ತುಗಳಂತೆ ರೂಪುಗೊಳ್ಳುತ್ತದೆ ‘ಮೊದಲು ಕರ್ತವ್ಯ—ನಂತರ ಮನರಂಜನೆ’ ಎಂಬ ಮನೋಭಾವ ಮಕ್ಕಳನ್ನು ಜವಾಬ್ದಾರಿಯುತ, ಆದ್ಯತೆ ನಿಗದಿಪಡಿಸುವ, ಜೀವನದ ಸವಾಲುಗಳನ್ನು ಸಮತೋಲನದಿಂದ ಎದುರಿಸುವ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ.
ಪೋಷಕರ ಮಾತಿನ ಸ್ವರ

ಮಕ್ಕಳ ಮನಸ್ಸಿನ ಭವಿಷ್ಯ. ಕಠಿಣ ಮಾತು ಮನಸ್ಸನ್ನು ಮುರಿಯುತ್ತದೆ; ಮೃದುಮಾತು ಮನಸ್ಸನ್ನು ಅರಳಿಸುತ್ತದೆ. ಗದರಿಕೆ, ಬೈಗುಳ, ಹೋಲಿಕೆ—ಇವು ಮಕ್ಕಳ ಆತ್ಮವಿಶ್ವಾಸಕ್ಕೆ ಮಾರಕ.ಆದರೆ ಪ್ರೋತ್ಸಾಹ, ನಗು, ಮೃದುಭಾವ—ಇವು ಮಕ್ಕಳನ್ನು ಒಳಗಿನಿಂದ ಬೆಳಗಿಸುತ್ತದೆ. ಮಕ್ಕಳು ಮನುಷ್ಯತ್ವವನ್ನು ಪುಸ್ತಕಗಳಿಂದಲ್ಲ, ಪೋಷಕರ ನಡವಳಿಕೆಯಿಂದ ಕಲಿಯುತ್ತಾರೆ.
ಟಿವಿ, ಮೊಬೈಲ್, ಗ್ಯಾಜೆಟ್ಗಳ ಮಿತಿಮೀರಿದ ಬಳಕೆ
ಇಂದಿನ ದೊಡ್ಡ ಸವಾಲು ಎಂದರೆ ಮೊಬೈಲ್ ಬಳಕೆ ಆದರೆ ಮಕ್ಕಳನ್ನು ಮೊಬೈಲ್ ನಿಂದ ದೂರವಿಡಲು ಮೊದಲ ಹೆಜ್ಜೆ ಪೋಷಕರದ್ದೇ. ತಾವು ನಿಯಮ ಪಾಲಿಸಿದಾಗ ಮಾತ್ರ ಮಕ್ಕಳು ಅನುಸರಿಸುತ್ತಾರೆ. ಹೊರಗಿನ ಆಟ, ಪ್ರಕೃತಿಯ ಮಣ್ಣು, ಗಾಳಿ, ಸೂರ್ಯ, ಪುಸ್ತಕದ ಪುಟ, ಬಣ್ಣಗಳ ಲೋಕ—ಮಕ್ಕಳಿಗೆ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಅತ್ಯಗತ್ಯ.
ವಿನಯ
ಮಕ್ಕಳಿಗೆ ಕಲಿಸಬೇಕಾದ ಅತಿ ಸುಂದರ ಗುಣ. ‘ದಯವಿಟ್ಟು’, ‘ಧನ್ಯವಾದ’, ‘ಕ್ಷಮಿಸಿ’—ಈ ಮೂರು ಪದಗಳು ಮಗು ಕಲಿತರೆ, ಅದು ವ್ಯಕ್ತಿತ್ವದ ಅರ್ಧವನ್ನು ಗೆದ್ದ ಹಾಗೆಯೇ. ಸದಾಚಾರ, ಕೃತಜ್ಞತೆ, ಸಂವೇದನೆ ಇವುಗಳ ಆರಂಭ ಈ ಮೂರು ಪದಗಳಲ್ಲಿದೆ. ಪೋಷಕರು ತಮ್ಮ ಜೀವನದಲ್ಲೇ ಬಳಸಿದಾಗ ಮಕ್ಕಳು ಸ್ವಯಂ ಅದನ್ನು ಅಳವಡಿಸಿಕೊಳ್ಳುತ್ತಾರೆ.
ಜೀವನದಲ್ಲಿ ಎಲ್ಲವೂ ನಮ್ಮ ಬಯಕೆಯಂತೆ ನಡೆಯುವುದಿಲ್ಲ ಎಂಬ ಅರಿವು ಮಕ್ಕಳಿಗೆ ಅವಶ್ಯ. ಸೋಲಿನ ಅರ್ಥ ತಿಳಿದುಕೊಳ್ಳುವ ಮಗು, ಗೆಲುವನ್ನೂ ಮಿತಿಯಲ್ಲಿ ಆನಂದಿಸುವ ಶಿಸ್ತು ಕಲಿಯುತ್ತದೆ. ಕಷ್ಟದಲ್ಲೂ ಧೈರ್ಯ, ಸುಖದಲ್ಲೂ ವಿನಯ ಇವು ಜೀವನದ ನಿಜವಾದ ಮೌಲ್ಯಗಳು.
ಒಟ್ಟಿನಲ್ಲಿ, ಮಕ್ಕಳಿಗೆ ಕಲಿಸಬೇಕಾದ ಮೌಲ್ಯಗಳು ಉಪನ್ಯಾಸಗಳಲ್ಲಿ ಇಲ್ಲ; ಅವು ಪೋಷಕರ ದಿನನಿತ್ಯದ ಬದುಕಿನಲ್ಲಿವೆ. ಮಕ್ಕಳು ಕೇಳಿದನ್ನು ಕೆಲವೇ ನಿಮಿಷ ನೆನಪಿಡುತ್ತಾರೆ, ಆದರೆ ನೋಡಿದನ್ನು ಬದುಕಿನವರೆಗೂ ಸಂಗ್ರಹಿಸುತ್ತಾರೆ. ಹಾಗಾಗಿ ಮೌಲ್ಯಗಳನ್ನು ಮಾತಿನಿಂದಲ್ಲ ವ್ಯವಹಾರದಿಂದ, ಪ್ರೀತಿಯಿಂದ, ತಾಳ್ಮೆಯಿಂದ, ಉದಾಹರಣೆಯಿಂದ ಕಲಿಸಬೇಕಾಗಿದೆ.
ಪೋಷಕರ ಪ್ರೀತಿ ಮಕ್ಕಳಿಗೆ ಬಲ; ಪೋಷಕರ ಮೌಲ್ಯ ಮಕ್ಕಳಿಗೆ ದಾರಿ;
ಪೋಷಕರ ನಡವಳಿಕೆ ಮಕ್ಕಳಿಗೆ ಜೀವನಪೂರ್ತಿ ಗುರಿ.
ಇಂದು ಬೀಜವಾಗುವ ಮೌಲ್ಯಗಳು ನಾಳೆಯ ಸಮಾಜದ ಗುಣಮಟ್ಟವನ್ನೇ ನಿರ್ಧರಿಸುತ್ತವೆ.
ಮೌಲ್ಯವಂತ ಮಕ್ಕಳು ಮೌಲ್ಯಮಯ ಸಮಾಜ ನಿರ್ಮಾಣವಾಗುತ್ತದೆ. ಇಂದಿನ ಮಕ್ಕಳೇ ನಾಳಿನ ಭವಿಷ್ಯದ ಮೌಲ್ಯಯುತ ಪ್ರಜೆಗಳು.


