ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಸ್ವಾತಂತ್ರ್ಯವನ್ನು ಪಡೆಯಲು ನಮ್ಮ ಹಿರಿಯರು ತಮ್ಮ ತನುಮನ ಧನಗಳನ್ನು ಅರ್ಪಿಸಿದ್ದು,, ಅವರೆಲ್ಲರ ಶ್ರಮದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತು 78 ವರ್ಷಗಳಾಗಿವೆ. ಇದೀಗ ಮತ್ತೊಂದು ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಲು ಇಡೀ ದೇಶವೇ ಸಡಗರ ಮತ್ತು ಉತ್ಸಾಹಗಳಿಂದ ಸಜ್ಜಾಗಿದೆ. ಪ್ರತಿ ಶಾಲೆ ಕಾಲೇಜುಗಳು, ಸಂಘ ಸಂಸ್ಥೆಗಳು ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಧ್ವಜಾರೋಹಣದ ಜೊತೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.. ಎಲ್ಲೆಡೆ ತ್ರಿವರ್ಣ ಧ್ವಜದ ಮೆರುಗನ್ನು ಹೆಚ್ಚಿಸಿದ ಈ ದಿನದ ಸಂಭ್ರಮಕ್ಕಾಗಿ ಕಾತರದಿಂದ ಕ್ಷಣಗಣನೆ ನಡೆದಿದೆ.

ನಮ್ಮದೇಶವು ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ವೈದ್ಯಕೀಯವಾಗಿ ಮತ್ತು ತಾಂತ್ರಿಕವಾಗಿ ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿ ಹೊಂದುತ್ತಿದೆ ಎಂಬುದನ್ನು ನಾವು ಪತ್ರಿಕೆಗಳಲ್ಲಿ, ರಾಜಕೀಯ ಭಾಷಣಗಳಲ್ಲಿ, ತಜ್ಞರ ಸಮ್ಮೇಳನಗಳಲ್ಲಿ ಕಂಡುಕೊಳ್ಳುತ್ತಿದ್ದೇವೆ. ಆದರೆ ದೀಪದ ಅಡಿಯಲ್ಲಿ ಕತ್ತಲು ಎಂಬಂತೆ ಇನ್ನೂ ಹಲವಾರು ಸಮಸ್ಯೆಗಳು ಅಗೋಚರ ಗೋಚರವಾಗಿ ನಮ್ಮ ಕಣ್ಣು ಮುಂದೆ ನರ್ತನಗೈಯುತ್ತಿವೆ ಎಂದರೆ ತಪ್ಪಿಲ್ಲ.
ಎಲ್ಲವೂ ಸರಿಯೇ ಆದರೆ ಸುಲಿದ ಬಾಳೆಯ ಹಣ್ಣನು ಸುಲಭಸಾಧ್ಯವಾಗಿ ತಿನ್ನುವಂತೆ ಸ್ವಾತಂತ್ರ್ಯವನ್ನು ಸ್ವೀಕರಿಸಿರುವ ನಾವುಗಳು ನಮಗೆ ದೊರೆತಿರುವ ಸ್ವಾತಂತ್ರ್ಯಕ್ಕೆ, ಅದರ ಘನತೆಗೆ ತಕ್ಕನಾಗಿ ವರ್ತಿಸಿದ್ದೇವೆಯೇ ಎಂದು ಕೇಳಿದಾಗ ಇಲ್ಲ ಎಂದೇ ಹೇಳಬಹುದಾದಂತಹ ಪರಿಸ್ಥಿತಿ ನಮ್ಮದಾಗಿದೆ. ಆಧುನಿಕತೆಯ ಬೆರಗಿನಲ್ಲಿ ಮೌಲ್ಯಗಳು ಮರೆಮಾಚಲ್ಪಟ್ಟಿವೆ. ವೈಯುಕ್ತಿಕ ಹಿತಾಸಕ್ತಿಯು ಸಾರ್ವತ್ರಿಕ ಹಿತಾಸಕ್ತಿಯನ್ನು, ಸಾರ್ವಜನಿಕ ಪ್ರಜ್ಞೆಯನ್ನು ಹಿಂದಿಕ್ಕಿಸಿದೆ. ವ್ಯಕ್ತಿ ಮೊದಲೋ? ಸಮಾಜವೋ? ಎಂಬ ಜಿಜ್ಞಾಸೆಯಲ್ಲಿ ಮನುಷ್ಯ ತನ್ನ ಸುಖ-ಭೋಗಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾನೆ.
ಈ ನಿಟ್ಟಿನಲ್ಲಿ ಸುಲಭ ಸಾಧ್ಯವಾಗಿ ದೊರೆತಿರುವ ನಮ್ಮ ಸ್ವಾತಂತ್ರ್ಯವನ್ನು, ಸಂವಿಧಾನಬದ್ಧವಾಗಿ ನಮಗೆ ಕೊಡ ಮಾಡಿರುವ ಹಕ್ಕುಗಳನ್ನು ಚಲಾಯಿಸಲು ಸದಾ ಸನ್ನದ್ಧರಾಗಿರುವ ನಮ್ಮ ಯುವ ಜನತೆ ಅಷ್ಟೇ ಪ್ರಮಾಣದಲ್ಲಿ ತಮಗೆ ವಹಿಸಲ್ಪಟ್ಟಿರುವ ಕರ್ತವ್ಯಗಳನ್ನು ನಿರ್ವಹಿಸುತ್ತಾರೆಯೇ? ಎಂದು ಕೇಳಿದಾಗ ಮನದಲ್ಲಿ ವಿಷಾದದ ಭಾವವೊಂದು ಮೂಡಿ ಮರೆಯಾಗುತ್ತದೆ.
ಆಧುನಿಕ ಜಗತ್ತಿನ ಸುಖ ಲೋಲುಪತೆ ಮತ್ತು ವೈಭವೀಕೃತವಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿರುವ ಈ ಜಗತ್ತಿನ ಪ್ರಭಾವಳಿಯಲ್ಲಿ ಸಿಲುಕಿರುವ ಯುವ ಜನತೆಯಲ್ಲಿ ಒಂದು ರೀತಿಯ ವಿಸ್ಮೃತಿಯ ಭಾವ ತುಂಬಿಕೊಂಡಿದೆ.
ಸದಾ ಜಾಗೃತ ಸ್ಥಿತಿಯಲ್ಲಿ ವಾಹನವನ್ನು ಚಲಾಯಿಸುವ ವ್ಯಕ್ತಿ ಕೇವಲ ಒಂದೆರಡು ಸೆಕೆಂಡುಗಳ ಕಾಲ ವಿಸ್ಮೃತಿಗೆ ಜಾರಿದರೆ ಆಗುವ ಅನಾಹುತದ ಅರಿವು ನಮಗೆಲ್ಲರಿಗೂ ಇದೆ ಅಲ್ಲವೇ? ನಮ್ಮ ಇಂದಿನ ಯುವ ಜನತೆ ಕೂಡ ಅಂತಹದ್ದೇ ವಿಸ್ಮೃತಿಯಲ್ಲಿ ಸಿಲುಕಿದ್ದಾರೆ. ಪ್ರಸ್ತುತ ಬದುಕಿನಲ್ಲಿ ಅವರ ಸ್ಮೃತಿ ತಳದಲ್ಲಿ ತೂತಾದ ದೋಣಿಯಲ್ಲಿ ಸಂಚರಿಸುವಂತೆ ಗೋಚರವಾಗುತ್ತಿದೆ.
ಇಲ್ಲಿ ನನಗೆ ಒಂದು ಪ್ರಯೋಗದ ನೆನಪಾಗುತ್ತಿದೆ.. ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ತುಂಬಿ ಅದನ್ನು ಕಾಯಲು ಇಟ್ಟು ನೀರು ತುಸು ಹೆಚ್ಚು ಬಿಸಿಯಾದಾಗ ಅದಕ್ಕೆ ಜೀವಂತ ಕಪ್ಪೆಯೊಂದನ್ನು ಹಾಕಿದಾಗ ಅದು ಒಮ್ಮಿಂದೊಮ್ಮೆಲೇ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾಗುತ್ತದೆ.
ಆದರೆ ಅದೇ ನೀರು ತುಂಬಿದ ಪಾತ್ರೆಯಲ್ಲಿ ಕಪ್ಪೆಯನ್ನು ಹಾಕಿ ನಿಧಾನವಾಗಿ ಉರಿಯನ್ನು ಹಚ್ಚಿ ಪಾತ್ರೆಯನ್ನು ಕಾಯಿಸುತ್ತಿದ್ದರೆ ಕಪ್ಪೆಯು ನಿಧಾನವಾಗಿ ಬದಲಾಗುತ್ತಿರುವ ನೀರಿನ ಉಷ್ಣತೆಗೆ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತಾ ಹೋಗುತ್ತದೆ. ಅಂತಿಮವಾಗಿ ನೀರು ಸಹಿಸಲಸಾಧ್ಯವಾದಷ್ಟು ಬಿಸಿಯಾದಾಗ ಕಪ್ಪೆಯು ಕೂಡ ಅದರ ಬಿಸಿಯಲ್ಲಿಯೇ ಬೆಂದು ಸತ್ತು ತಳ ಸೇರುತ್ತದೆ.. ನಮ್ಮ ಯುವ ಜನತೆ ಕೂಡ ಈಗ ಇಂಥದ್ದೇ ಸ್ಥಿತಿಯಲ್ಲಿ ಇದ್ದಾರೆ ಎಂಬುದು ಪರಿಸ್ಥಿತಿಯ ವಿಡಂಬನೆಯನ್ನು ತೋರುತ್ತದೆ.

ಚಿಕ್ಕಂದಿನಿಂದಲೂ ಓದು ವಿದ್ಯಾಭ್ಯಾಸಗಳಲ್ಲಿ ತಮ್ಮನ್ನು ಸಾವು ತೊಡಗಿಸಿಕೊಂಡು ಒಂದು ಹಂತದ ಶೈಕ್ಷಣಿಕ ಕಲಿಕೆಯ ನಂತರ ಉದ್ಯೋಗವನ್ನು ಹುಡುಕಿಕೊಂಡು ತಮ್ಮ ಬದುಕನ್ನು ತಾವು ರೂಪಿಸಿಕೊಳ್ಳುವ ಮಾದರಿ ಮಕ್ಕಳು ಒಂದೆಡೆಗೆ ಇದ್ದರೆ ಮತ್ತೆ ಕೆಲವರು ಮೂಲಭೂತ ಶಿಕ್ಷಣದ ನಂತರ ಮನೆಯ ಪರಿಸ್ಥಿತಿಗೆ ಅನುಗುಣವಾಗಿ ಶಿಕ್ಷಣವನ್ನು ಮೊಟಕುಗೊಳಿಸಿದರೂ ವೃತ್ತಿಗೆ ಆದ್ಯತೆಯನ್ನು ನೀಡಿ ಯಾವುದಾದರೂ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಮತ್ತೆ ಕೆಲವರು ಓದನ್ನು ಪೂರೈಸಿ ಉದ್ಯೋಗದ ಬೇಟೆಯಲ್ಲಿ ತೊಡಗಿಕೊಳ್ಳುತ್ತಾರೆ. ಅವರ ನಿರೀಕ್ಷೆಯ ಉದ್ಯೋಗವೇ ಸಿಗಲಿ ಎಂಬ ಆಶಯದಲ್ಲಿ ಯಾವುದೇ ರೀತಿಯ ರಾಜಿಗೂ ಒಳಗಾಗದೆ ಇರುವ ಇವರುಗಳು ತಮಗೆ ಕೆಲಸ ಸಿಕ್ಕದೆ ಇರುವ ನೋವು, ಬೇಸರ, ಅಸಹಾಯಕತೆಗಳಲ್ಲಿ ಮುಳುಗಿ ಏಳುವುದಲ್ಲದೆ ಸಿನಿಕತೆಯನ್ನು ಹೊಂದುತ್ತಾರೆ. ಬದುಕಿನಲ್ಲಿ ಭರವಸೆಯನ್ನು ಕಳೆದುಕೊಳ್ಳುತ್ತಾರೆ. ತಮ್ಮ ಕುಟುಂಬಕ್ಕೂ ಇವರು ಬೇಸರ ಹುಟ್ಟಿಸುತ್ತಾರೆ. ಇದ್ದುದರಲ್ಲಿಯೇ ಮಹಾನಗರಗಳಲ್ಲಿ ವಾಸಿಸುತ್ತಿರುವ ಯುವ ಜನತೆ ದುಡಿಯುವ ಅನಿವಾರ್ಯತೆಯನ್ನು ಹೊಂದಿ ಸಿಗುವ ಸಣ್ಣ ಪುಟ್ಟ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು.
ನಮ್ಮ ಯುವ ಜನತೆಯನ್ನು ಶಿಕ್ಷಣ, ನಿರುದ್ಯೋಗ, ದುಶ್ಚಟಗಳು, ಮಾದಕ ವ್ಯಸನಗಳು, ಆತಂಕ ಮತ್ತು ಒತ್ತಡಗಳು, ಸ್ನೇಹ ರಾಹಿತ್ಯತೆ, ಹವ್ಯಾಸರಹಿತ ಬದುಕು, ಮಾನಸಿಕ ಸಂತುಲನವನ್ನು ಕಳೆದುಕೊಳ್ಳುತ್ತಿರುವುದು ಮತ್ತು ಮುಖ್ಯವಾಗಿ ಎಲೆಕ್ಟ್ರಿಕ್ ಗ್ಯಾಜೆಟ್ ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ತೊಡಗಿಸಿಕೊಳ್ಳುವುದು, ಈ ಹಿಂದೆ ತಮ್ಮ ಬದುಕಿನಲ್ಲಿ ಎಂದೂ ಕಾಣದ ಜಾತಿ ಧರ್ಮ ಮತ ಪಂಥಗಳ ಕುರಿತಾದ
ಅಂಧಾಭಿಮಾನ ಮುಂತಾದ ಹತ್ತು ಹಲವು ವಿಷಯಗಳು
ಬೃಹದಾಕಾರದ ಸಮಸ್ಯೆಗಳಾಗಿ ತಲೆದೋರಿವೆ.
ಉದ್ಯೋಗದ ಅವಕಾಶಗಳನ್ನು ಕಲ್ಪಿಸಿಕೊಡದ ಶಿಕ್ಷಣ, ಖಾಸಗೀಕರಣದ ನೆಪದಲ್ಲಿ ಅತಿ ಹೆಚ್ಚಿನ ಫೀಸ್ ಅನ್ನು ವಸೂಲಿ ಮಾಡಿ ಕೇವಲ ಸಾಕ್ಷರರನ್ನು ತಯಾರು ಮಾಡುತ್ತಿರುವ ಕಾರ್ಪೊರೇಟ್ ಮಾದರಿಯ ಶಾಲೆಗಳು ಬದುಕಿನ ಬಹಳಷ್ಟು ಅವಕಾಶಗಳನ್ನು ಕಸಿದುಕೊಂಡಿವೆ.
ಉಳ್ಳವರು ಮತ್ತಷ್ಟು ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡರೆ ಬಡವರು ಇರುವಷ್ಟನ್ನು ಕೂಡ ಕಳೆದುಕೊಂಡು ಮತ್ತಷ್ಟು ಬಡತನಕ್ಕೆ ಜಾರುವಂತ ಪರಿಸ್ಥಿತಿ ಉಂಟಾಗಿದ್ದು ನಿರುದ್ಯೋಗ ಸಮಸ್ಯೆ ಕಾಡುತ್ತಿದೆ.
ಜೀವನವನ್ನು ಎಂಜಾಯ್ ಮಾಡಲು ಸೇವಿಸಲೇಬೇಕು, ಅವುಗಳನ್ನು ಸೇವಿಸದೇ ಇದ್ದರೆ ಬದುಕೇ ವ್ಯರ್ಥ ಎಂಬಂತೆ ಮಾಧ್ಯಮಗಳಲ್ಲಿ ಅತಿಯಾಗಿ ಬಿಂಬಿತವಾಗುವ
ಪಾನೀಯಗಳು, ಖಾದ್ಯ ಆಹಾರಗಳು, ಮಾದಕ ಪದಾರ್ಥಗಳು( ಬೇರೆಯದೆ ಹೆಸರಿನಲ್ಲಿ ತಯಾರಾಗುವ )
ಪ್ರಚಾರಗೊಳ್ಳುವ ಮೂಲಕ ಜನಮನ ಸೂರೆಗೊಂಡು ಯುವ ಜನತೆ ಅವುಗಳ ದಾಸರಾಗಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಒಳ್ಳೆಯ ಹವ್ಯಾಸಗಳೇ ಇಲ್ಲದ, ಸ್ನೇಹಿತರನ್ನು ಹೊಂದಿಲ್ಲದ, ಕೌಟುಂಬಿಕ ಮೌಲ್ಯಗಳನ್ನು ಗಾಳಿಗೆ ತೂರಿರುವ ಯುವ ಜನತೆ ಮೊಬೈಲ್ಗಳ ದಾಸರಾಗಿದ್ದಾರೆ.
ತಮ್ಮನ್ನು ತಾವೇ ಮೊಬೈಲ್ಗಳ ಬಂಧನದಲ್ಲಿ ಸಿಲುಕಿಸಿಕೊಂಡಿರುವ ಯುವಜನತೆ ಅದರಿಂದ ಹೊರಬರಲು ಸಾಧ್ಯವಿಲ್ಲದಷ್ಟು ಆಳವಾಗಿ ಹೂತು ಹೋಗಿದ್ದಾರೆ. ಮನರಂಜನೆಯ ಉದ್ಯಮವನ್ನು ಬೆಳೆಸುತ್ತಾ, ಕೊಳ್ಳುಬಾಕ ಸಂಸ್ಕೃತಿಗೆ ಮಕ್ಕಳನ್ನು ಈಡು ಮಾಡುತ್ತಾ ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು, ವಿಚಾರಶೀಲತೆಯನ್ನು ಕಿತ್ತುಕೊಳ್ಳುವ ಸಾಮಾಜಿಕ ಜಾಲತಾಣಗಳ, ಕಾರ್ಪೊರೇಟ್ ಸಂಸ್ಥೆಗಳ ಕಾರ್ಯವೈಖರಿಯ ವಿರುದ್ಧ ಮಕ್ಕಳನ್ನು ಆವಿಚಲಿತರನ್ನಾಗಿಸುವ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ಪಾಲಕರ ಮತ್ತು ಸಮಾಜದ ಮೇಲಿದೆ.
ವಿಪರೀತ ಎಂಬಷ್ಟು ಅಂಧಾನುಕರಣೆಗಳು, ಜಾತಿ ಮತ್ತು ಕುಲದ ಹೆಸರಿನಲ್ಲಿ ಸೆಳೆಯಲ್ಪಟ್ಟು ಯೋಗ್ಯತೆಯನ್ನು ನೋಡದೆ ತಮ್ಮದೇ ಜಾತಿಯ ಅತ್ಯಂತ ಭ್ರಷ್ಟ ವ್ಯಕ್ತಿಗೆ ವೋಟನ್ನು ಹಾಕುವ ಅವರಿಗೆ ಪರಾಕನ್ನು ಹೇಳುವ ಮೂಲಕ ಕೀಳು ರಾಜಕೀಯಕ್ಕೆ ಯುವ ಜನತೆ ಒಡ್ಡಿಕೊಂಡಿದೆ. ಯುವ ಜನತೆಯ ವಿಫಲತೆಯನ್ನು ತಮ್ಮ ವೋಟ್ ಬ್ಯಾಂಕ್ಗಳನ್ನಾಗಿ ಮಾಡಿಕೊಳ್ಳುವ ರಾಜಕಾರಣಿಗಳ ದಾಳಕ್ಕೆ ಸಿಲುಕದಂತೆ ಯುವ ಜನತೆ ಎಚ್ಚತ್ತುಕೊಳ್ಳಬೇಕಾಗಿದೆ.
ಖಂಡಿತವಾಗಿಯೂ ಯುವ ಜನತೆ ಸಾಗಬೇಕಾದ ಹಾದಿ ಇದಲ್ಲ.. ಈ ನಿಟ್ಟಿನಲ್ಲಿ ಯುವ ಜನತೆ, ಶಿಕ್ಷಕರು ಮತ್ತು
ಸಮಾಜ ಒಂದಾಗಬೇಕು. ಮಕ್ಕಳಿಗೆ ಮೌಲ್ಯಗಳ ಪಾಠ ಮನೆಯಿಂದಲೇ ಆರಂಭವಾಗಬೇಕು. ಸ್ವತಂತ್ರ ಭಾರತದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪುನರುತ್ಥಾನಕ್ಕೆ ಒಗ್ಗೂಡಬೇಕು.
ನಮ್ಮ ಯುವ ಜನತೆ ಸೋತಿಲ್ಲ, ಸತ್ತಿಲ್ಲ ಕೂಡ.. ಭ್ರಾಮಕ ಪ್ರಪಂಚದ ಏಕಮುಖ ಪ್ರವಾಹದಲ್ಲಿ ತೇಲುತ್ತಿದ್ದಾರೆ. ತುಕ್ಕು ಹಿಡಿದ ತಾಮ್ರದ ನಾಣ್ಯಗಳಂತೆ ತಮ್ಮ ಹೊಳಪನ್ನು ಕಳೆದುಕೊಂಡಿದ್ದಾರೆ. ಈಗ ಅವರಿಗೆ
ನಮ್ಮ ದೇಶದ ಐತಿಹಾಸಿಕ,ಸಾಂಸ್ಕೃತಿಕ ಸಾಮಾಜಿಕ ಮತ್ತು ಸೌಹಾರ್ದಯುತ ಸಂಸ್ಕೃತಿಯ ಅರಿವನ್ನು ಮೂಡಿಸಿ ಮತ್ತೆ ಒಗ್ಗೂಡಿಸುವ ಮೂಲಕ ನಮ್ಮ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸೋಣ ಉಳಿಸೋಣ ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಪಾಲಕರಾದ ನಮ್ಮ ಮೇಲೆ ಇದೆ.
ತಪ್ಪು ಸರಿಗಳ ನಡುವಿನ ವ್ಯತ್ಯಾಸವನ್ನು ಅರಿಯುವ , ಸಾಂಸ್ಕೃತಿಕ ಅಧಃಪತನದಿಂದ ಮೇಲೇಳುವ ನಿಟ್ಟಿನಲ್ಲಿ ನಮ್ಮ ಯುವಕರು ಕಾರ್ಯಪ್ರವೃತ್ತರಾಗಬೇಕು. ಒಳ್ಳೆಯ ಸಾಮಾಜಿಕ ಬದುಕಿಗೆ ಮುಖ ಮಾಡಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮನಗಾಣಬೇಕು ಆರ್ಥಿಕ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡದೆ ಮಾನವೀಯ ಮೌಲ್ಯಗಳ ದೃಷ್ಟಿಯಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸಬೇಕು. ನಿರ್ವೀರ್ಯವಾಗಿರುವ ಯುವ ಶಕ್ತಿಯಲ್ಲಿ ಕೌಟುಂಬಿಕ ಜೀವನದ ಮೌಲ್ಯಗಳ ಜೊತೆ ಜೊತೆಗೆ ಸಾಮಾಜಿಕ ಮೌಲ್ಯಗಳ ಪುನರುತ್ಥಾನ ವಾಗಬೇಕು.
ಜಾತಿ ಮತ ಪಂಥಗಳ ಭೇದಗಳು ಬದುಕನ್ನು ಶತ್ರುಗೊಳಿಸಲಾರದ ಮನಸ್ಥಿತಿಯನ್ನು ಯುವ ಜನತೆ ಹೊಂದಬೇಕು.
ಬಾಳು ಬಾಳಗೊಡು.. ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಭರತ ಭೂಮಿ ಆಗಿರುವಂತಹ ನಿಟ್ಟಿನಲ್ಲಿ ನಮ್ಮ ಯುವಶಕ್ತಿ ಮಾರ್ದನಿಸಬೇಕು. ಅಂದಾಗಲೇ ನಮ್ಮ ಬದುಕಿಗೊಂದು ನೆಲೆ, ಬಾಳಿಗೊಂದು ಬೆಲೆ ಸಿಗುತ್ತದೆ.
ಅಂತಹ ಯುವ ಶಕ್ತಿಯನ್ನು ಬೆಳೆಸುವಲ್ಲಿ ಇಡೀ ಸಮಾಜ ಒಂದಾಗಬೇಕು ಎಂಬ ಆಶಯದೊಂದಿಗೆ..
