ಮೀನುಗಾರರ ಸಂಘದ ರಾಷ್ಟೀಯ ಉಪಾಧ್ಯಕ್ಷ ಡಾ.ಗೌತಮ್ ಆರ್ ಚೌಧರಿ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸುವ ಅವೈಜ್ಞಾನಿಕ ನೀತಿ ಮತ್ತು ಮೀನುಗಾರರ ಹಿತಾಸಕ್ತಿಗೆ ವಿರುದ್ಧವಾದ ಕ್ರಮಗಳಿಂದ ಮೀನುಗಾರರ ಬದುಕು ಅತಂತ್ರವಾಗುವ ಭೀತಿ ಹೆಚ್ಚುತ್ತಿದೆ ಎಂದು ರಾಷ್ಟೀಯ ಮೀನುಗಾರರ ಸಂಘದ ರಾಷ್ಟೀಯ ಉಪಾಧ್ಯಕ್ಷ
ಡಾ.ಗೌತಮ್ ಆರ್ ಚೌಧರಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಹೊನ್ನಾವರದ ಕಾಸರಕೋಡ ಟೊಂಕದ ಸೂಕ್ಷ್ಮ ಮತ್ತು ಸುಂದರ ಕಡಲತೀರದಲ್ಲಿ ಮತ್ತೊಂದು ವಾಣಿಜ್ಯ ಬಂದರು ನಿರ್ಮಾಣದ ವಿವಾದ ಭುಗಿಲೆದ್ದಿದೆ. ಈ ಹಿಂದೆ ಯಾವುದೇ ಅಧಿಕೃತ ಪರವಾನಿಗೆ ಇಲ್ಲದಿದ್ದರೂ, ಕಚ್ಚಾ ರಸ್ತೆ ಸುಧಾರಣೆಯ ನೆಪದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಿ, ಪೊಲೀಸ್ ಬಲ ಪ್ರಯೋಗದ ಮೂಲಕ ಕಾನೂನುಬಾಹಿರವಾಗಿ ಹೊಸ ರಸ್ತೆ ನಿರ್ಮಿಸಲು ಯತ್ನಿಸಲಾಗಿತ್ತು. ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಅಧಿಕಾರಿಗಳು ಮತ್ತು ಪ್ರಭಾವಿಗಳಿಗೆ ಅಲ್ಲ ಎಂಬ ಸತ್ಯ ಸ್ಥಳೀಯರಿಗೆ ಮನವರಿಕೆಯಾಗಿದೆ.
ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯು ಸ್ಥಳೀಯರ ತೀವ್ರ ವಿರೋಧ ಮತ್ತು 12 ವರ್ಷಗಳ ಸುದೀರ್ಘ ಹೋರಾಟದಿಂದಾಗಿ ಇನ್ನೂ ನೆನಗುದಿಯಲ್ಲಿದೆ. ಆಗ ಬಂದರು ವಿರೋಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಮಂಕಾಳವೈದ್ಯರು ಹೋರಾಟದ ಮುಂಚೂಣಿಯಲ್ಲಿದ್ದರು. ಅಂದು ಮೀನುಗಾರರ ಮನವಿಗೆ ಸ್ಪಂದಿಸಿದ್ದ ಅಂದಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಕಾಸರಕೋಡ ಟೊಂಕ ಪ್ರದೇಶಕ್ಕೆ ಭೇಟಿ ನೀಡಿ, ಮೀನುಗಾರರ ಪರವಾಗಿ ತಾವು ಮತ್ತು ತಮ್ಮ ಪಕ್ಷ ಸದಾ ನಿಲ್ಲುವುದಾಗಿ ಭರವಸೆ ನೀಡಿದ್ದರು. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬೇಡಿ ಎಂದು ಅಭಯ ನೀಡಿದ್ದರು. ಇಂದು ಅವರದೇ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು, ಮಂಕಾಳವೈದ್ಯರು ಬಂದರು ಮತ್ತು ಮೀನುಗಾರಿಕೆ ಸಚಿವರಾಗಿದ್ದಾರೆ. ಹೀಗಿರುವಾಗ ಬಂದರು ನಿರ್ಮಾಣ ಆಗಬೇಕೇ ಅಥವಾ ಬೇಡವೇ, ಕೈಬಿಡಬೇಕೇ ಎಂಬ ನಿರ್ಧಾರವನ್ನು ಅವರೇ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.
ಇಲ್ಲಿನ ಪ್ರಮುಖ ಸಮಸ್ಯೆ ಎಂದರೆ ಬಂದರು ಯೋಜನೆಗಾಗಿ ಕರಾವಳಿ ತೀರದ ಮೀನುಗಾರರ ವಸತಿ ಪ್ರದೇಶಗಳಲ್ಲಿ ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಮಾಡಲು ಹೊರಟಿರುವುದು. ಈ ಅವೈಜ್ಞಾನಿಕ ಮತ್ತು ಬಂದರು ನಿರ್ಮಾಣ ಕಂಪನಿಯ ಅತಿರೇಕದ ಕ್ರಮದ ವಿರುದ್ಧ ಮೀನುಗಾರರು ಸಿಡಿದೆದ್ದಿದ್ದಾರೆ. 300 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಮೀನುಗಾರರ ಪರಂಪರಾಗತ ವಸತಿ ಪ್ರದೇಶದ 4 ಕಿ.ಮೀ. ಉದ್ದಕ್ಕೂ ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಮಾಡುವುದು ಎಷ್ಟು ಸರಿ? ಮಾನವ ಹಕ್ಕುಗಳು ಸೇರಿದಂತೆ ನೈಸರ್ಗಿಕ ನ್ಯಾಯ ಮತ್ತು ಮಾನವೀಯ ನೆಲೆಯಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ. ಒಂದು ವೇಳೆ ಸ್ಥಳೀಯ ಪರಿಸರ ಮತ್ತು ಮೀನುಗಾರರ ಹಿತದೃಷ್ಟಿಯಿಂದ ಬಂದರು ಯೋಜನೆಯನ್ನು ಕೈಬಿಟ್ಟರೆ, ಸರ್ಕಾರ ಮತ್ತು ಖಾಸಗಿ ಕಂಪನಿಯ ನಡುವಿನ ಒಪ್ಪಂದದ ಗತಿಯೇನು? ಯೋಜನೆ ಕೈಬಿಟ್ಟರೆ ಕಂಪನಿಗೆ ಆಗುವ ನಷ್ಟವನ್ನು ಸರ್ಕಾರ ಭರಿಸಬೇಕಾಗುತ್ತದೆ. ಆದರೆ, ಮೀನುಗಾರರ ಹಿತದ ಮುಂದೆ ಇದೆಲ್ಲವೂ ನಗಣ್ಯ ಎಂಬುದನ್ನು ಸರ್ಕಾರ ಮನಗಾಣಬೇಕು ಎಂದಿದ್ದಾರೆ.
ಈ ಹಿಂದೆ ಹಲವು ಬಾರಿ ಪೊಲೀಸ್ ಬಲಪ್ರಯೋಗದ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲು ಯತ್ನಿಸಲಾಗಿತ್ತು. ಆದರೆ ಸ್ಥಳೀಯರ ಹೋರಾಟದಿಂದಾಗಿ ಅಂತಹ ಪ್ರಯತ್ನಗಳು ವಿಫಲಗೊಂಡಿವೆ. ಈಗ ಜಿಲ್ಲಾಡಳಿತವು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದೆ. ಸ್ಥಳೀಯರ ಮೇಲೆ ಪೊಲೀಸ್ ಇಲಾಖೆಯ ಮೂಲಕ ಒತ್ತಡ ಹೇರಲಾಗುತ್ತಿದೆ. ಬೆದರಿಕೆ ಹಾಕಲಾಗುತ್ತಿದೆ. ಸ್ಥಳೀಯ ಮೀನುಗಾರರು ಮತ್ತು ವಿವಿಧ ಸಂಘಟನೆಗಳು ನೆರವಿಗೆ ಬರುವಂತೆ ಮನವಿ ಮಾಡಿಕೊಂಡಿವೆ. ಈ ನಡುವೆ ಜಿಲ್ಲಾಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಭೆಗಳನ್ನು ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ಮಾಧ್ಯಮಗಳ ಮೂಲಕ ಹೋರಾಟಗಾರರಿಗೆ ಕಾನೂನಿನ ಪಾಠ ಮಾಡುತ್ತಿದ್ದಾರೆ. ಸ್ಥಳೀಯರು ಹಸಿರು ಪೀಠದ ಮೊರೆ ಹೋಗಿದ್ದು, ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಪೊಲೀಸರ ಉಸ್ತುವಾರಿಯಲ್ಲಿ ನಡೆದ ಗ್ರಾಮಸಭೆಯನ್ನು ಸ್ಥಳೀಯರು ಬಹಿಷ್ಕರಿಸಿ ಜಿಲ್ಲಾಡಳಿತಕ್ಕೆ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿದ್ದಾರೆ.
ಈ ಯೋಜನೆಗಾಗಿ ಪರಿಸರ ಸೂಕ್ಷ್ಮ ಕಡಲತೀರದಲ್ಲಿ ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಮಾಡಿದರೆ, 3.5 ಕಿ.ಮೀ. ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯಿಂದ ಬದುಕು ನಡೆಸುತ್ತಿರುವ ಸಾವಿರಾರು ಮೀನುಗಾರರು ಉದ್ಯೋಗ ಕಳೆದುಕೊಳ್ಳುತ್ತಾರೆ. 200 ಕ್ಕೂ ಹೆಚ್ಚು ಮನೆಗಳು ನೆಲಸಮವಾಗುತ್ತವೆ. ಮೀನುಗಾರರು ತಮ್ಮ ಪರಂಪರಾಗತ ನೆಲೆಯನ್ನು ಕಳೆದುಕೊಳ್ಳುತ್ತಾರೆ. ಒಣಮೀನುಗಾರಿಕೆ ಮತ್ತು ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಸಾವಿರಾರು ಮೀನುಗಾರರು ಅತಂತ್ರರಾಗುತ್ತಾರೆ. ಸ್ಥಳೀಯ ಪರಿಸರ, ನದಿ ನೀರು ಕಲುಷಿತಗೊಂಡು ನದಿ ಮೀನುಗಾರಿಕೆ ನಾಶವಾಗುತ್ತದೆ. ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಸ್ಥಳೀಯರು ಈ ಯೋಜನೆಯ ವಿರುದ್ಧ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಆದರೆ ಪೊಲೀಸ್ ಬಲಪ್ರಯೋಗದ ಮೂಲಕ ಹೋರಾಟವನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ. ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಹೋರಾಟಗಾರರ ಮೇಲೆ 20 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಕೆಲವರಿಗೆ ರೌಡಿ ಪಟ್ಟ ಕಟ್ಟಲಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸುವ ಈ ಅವೈಜ್ಞಾನಿಕ ನೀತಿಯಿಂದ ಮೀನುಗಾರರ ಬದುಕು ಮತ್ತು ಅವರ ಪರಂಪರಾಗತ ಮೀನುಗಾರಿಕಾ ನೆಲೆಗಳು ಅಪಾಯದಲ್ಲಿವೆ. ಮಂಗಳೂರು, ಕಾರವಾರ ಮತ್ತು ಬೇಲೇಕೇರಿಯಲ್ಲಿ ಹಲವು ದಶಕಗಳಿಂದ ವಾಣಿಜ್ಯ ಬಂದರುಗಳು ಕಾರ್ಯನಿರ್ವಹಿಸುತ್ತಿದ್ದರೂ ಅವು ತಮ್ಮ ಗುರಿಯ ಶೇ.50 ರಷ್ಟನ್ನೂ ತಲುಪಿಲ್ಲ. ಆದರೂ, ಅಭಿವೃದ್ಧಿಯ ನೆಪದಲ್ಲಿ ಮೀನುಗಾರರ ಬದುಕಿಗೆ ಕೊಳ್ಳಿ ಇಡುವಂತೆ ಜಿಲ್ಲೆಯ ಸುಂದರ ಕಡಲತೀರಗಳನ್ನು ಧೂಳಿನ ಸಂಗ್ರಹಾಗಾರವನ್ನಾಗಿ ಮಾಡಲು ಸರ್ಕಾರ ಹೊರಟಿದೆ. ವಸ್ತುಸ್ಥಿತಿಯ ಅಧ್ಯಯನ ನಡೆಸಿ, ಮೀನುಗಾರರ ಅಹವಾಲುಗಳನ್ನು ಆಲಿಸಬೇಕಾದ ಸರ್ಕಾರ ತನ್ನ ಕಿವಿ ಮುಚ್ಚಿಕೊಂಡಿದೆ. ಜನರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸರ್ಕಾರಿ ಆದೇಶದ ನೆಪದಲ್ಲಿ ಖಾಸಗಿ ಕಂಪನಿಯ ಲಾಭಕ್ಕಾಗಿ ಜನರ ಹಿತವನ್ನು ಕಡೆಗಣಿಸುತ್ತಿದ್ದಾರೆ ಎಂಬ ಆತಂಕ ಮತ್ತು ಅಭಿಪ್ರಾಯ ಸ್ಥಳೀಯರಲ್ಲಿದೆ. ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಮೀನುಗಾರರ ಸಂಘಟನೆಯು ಸ್ಥಳೀಯರ ಪರ ನಿಲ್ಲಲಿದೆ ಎಂದು ರಾಷ್ಟೀಯ ಮೀನುಗಾರರ ಸಂಘದ ರಾಷ್ಟೀಯ ಉಪಾಧ್ಯಕ್ಷರಾದ ಡಾ.ಗೌತಮ್ ಆರ್ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

