ಚಡಚಣ: ಜನಪದ ಸಂಸ್ಕೃತಿ ಅರಳುವುದು ಸಂದರ್ಭಾನುಸಾರ, ತರಬೇತಿಯಿಂದಲ್ಲ. ಒಬ್ಬ ವ್ಯಕ್ತಿ ಶಕ್ತಿವಂತನೊ, ಕಲಾವಿದನೋ, ಜಾಣನೋ, ಜನಸೇವಕನೋ ಎಂದು ಗೊತ್ತಾಗುವುದು ಅವನಿಗೆಂದೆ ನಿರ್ದಿಷ್ಟವಾಗಿರುವ ಸಂದರ್ಭದಲ್ಲಿ ಮಾತ್ರ. ಶಿಷ್ಟ ಸಮಾಜದಂತೆ ಜನಪದ ಸಮಾಜದಲ್ಲಿ ಕಲಾವಿದ, ಪೈಲ್ವಾನ್, ಸಮಾಜ ಸುಧಾರಕ ಎಂದು ಪ್ರತ್ಯೇಕ ಇರುವುದಿಲ್ಲ. ದಿನನಿತ್ಯದ ಅವನ ಕೆಲಸದ ಜೊತೆಯಲ್ಲೇ ಅವನ ವಿಶೇಷವೆಂಬ ನೈಪುಣ್ಯ ಇರುತ್ತದೆ. ಕಲಾವಿದನಂತೆಯೆ ಜನಪದ ವೈದ್ಯರೂ ಕೂಡಾ ಸಂದರ್ಭಾನುಸಾರವಾಗಿ ರೋಗಿಯನ್ನು ಉಪಚರಿಸುತ್ತಿದ್ದರು. ಅವರು ಪ್ರತ್ಯೇಕ ಕಾಣಿಸಿಕೊಳ್ಳುವಿಕೆಯಲ್ಲಿ ಸಿಗುವುದಿಲ್ಲ. ಜನಪದ ದೇವತೆಗಳ ಪೂಜಾರಿಗಳನ್ನು ಗಮನಿಸಿ. ಅವರು ಶಿಷ್ಟ ದೇವತೆಗಳ ಪೂಜಾರಿ ಅಥವಾ ಪುರೋಹಿತರ ಥರ ಕಾಣಿಸುವುದಿಲ್ಲ. ಇಂಥವರು ಸಮಾಜದ ಹೊರಗೆ ಇಲ್ಲ, ಹೊರೆಯೂ ಅಲ್ಲ ಎಂದು ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಅಭಿಪ್ರಾಯಪಟ್ಟರು.
ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಸಂಸ್ಕೃತಿಯ ಪ್ರಮುಖ ಅಂಶವೆಂದರೆ ಮಾತನಾಡುವ ಪದ ಅಥವಾ ಭಾಷೆ, ಸಮಾಜದೊಳಗಿನ ಪ್ರಮುಖ ಪರಿಕಲ್ಪನೆಗಳನ್ನು ಸಂವಹನ ಮಾಡುವ ಸಾಧನವಾಗಿ, ಮಾನವ ಸ್ಥಿತಿಯ ಪ್ರಮುಖ ಧಾರ್ಮಿಕ ಮತ್ತು ತಾತ್ವಿಕ ಪ್ರತಿಬಿಂಬಗಳು. ಸಾಂಕೇತಿಕ ಭಾಷೆಯ ರೂಪದ ಮೂಲಕ ಸಾಮಾನ್ಯವಾಗಿ ಸಂಬಂಧಿಸಿರುವ ಸಾಮಾಜಿಕ ಅರಿವು ಮತ್ತು ಅವರ ಅನನ್ಯತೆಯ ವ್ಯಕ್ತಿಗಳ ತಿಳುವಳಿಕೆಯು ಹಂಚಿಕೆಯ ಗುಣಲಕ್ಷಣವಾಗಿದೆ ಹಾಗೂ ಸಾಂಕೇತಿಕ ಭಾಷೆಯು ಜಾನಪದ ಸಂಸ್ಕೃತಿಯ ಕೇಂದ್ರ ಲಕ್ಷಣವಾಗಿದೆ ಎಂದು ಹೇಳಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕ ಎಂ.ಎ.ಜನವಾಡ, ಆಗಸ್ಟ್ ೨೨ ಜಗತ್ತಿನ ಜನಪದ ಸಮುದಾಯಗಳಿಗೂ, ವಿದ್ವಾಂಸರಿಗೂ ಒಂದು ಅವಿಸ್ಮರಣೀಯ ದಿನ. ಕಾರಣ, ವಿಲಿಯಂ ಜಾನ್ ಥಾಮ್ಸ್ ಎಂಬ ಬ್ರಿಟಿಷ್ ಪ್ರಾಚೀನ ಅನ್ವೇಷಕ ಅಂಬೋಸ್ ಮೆರ್ತಾನ್ ಎನ್ನುವ ಗುಪ್ತನಾಮದಲ್ಲಿ ೧೮೪೬ರ ಆಗಸ್ಟ್ ೧೨ರಂದು `ದಿ ಅಥೇ ನಿಯಂ’ ಎನ್ನುವ ಪತ್ರಿಕೆಗೆ ಒಂದು ಪತ್ರ ಬರೆಯುತ್ತಾನೆ. ಈ ಪತ್ರ ಅದೇ ತಿಂಗಳ ೨೨ರಂದು ಪ್ರಕಟವಾಗುತ್ತದೆ. ಪತ್ರದಲ್ಲಿ ‘ದಾಸ್ ವೋಕ್’ ಮತ್ತು ‘ಜನಪ್ರಿಯ ಪಳೆಯುಳಿಕೆ’ ಎಂದು ಕರೆಯುತ್ತಿದ್ದ ಜನರ ಪರಂಪರೆಯ ಸಂಗತಿಗಳ ಅಧ್ಯಯನಕ್ಕೆ ‘ಫೋಕ್ಲೋರ್’ ಎಂದು ಕರೆಯಬಹುದೆಂದು ಸೂಚಿಸಿದ. ‘ಫೋಕ್’ ಎಂದರೆ ಜನ, ‘ಲೋರ್’ ಎಂದರೆ ಆ ಜನರ ಜ್ಞಾನ ಅಥವಾ ತಿಳಿವಳಿಕೆ ಎಂದು ವಿವರಿಸುತ್ತಾನೆ. ಆಗ ಮೊದಲ ಬಾರಿಗೆ ‘ಫೋಕ್ಲೋರ್’ ಎನ್ನುವ ಪದವು ಮುದ್ರಿತ ರೂಪದಲ್ಲಿ ಅಕಡೆಮಿಕ್ ವಲಯದ ಬಳಕೆಗೆ ಬರುತ್ತದೆ. ಈ ಚಾರಿತ್ರಿಕ ದಿನದ ನೆನಪಿಗಾಗಿ ಆ ದಿನವನ್ನು ವಿಶ್ವ ಜಾನಪದ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್. ಬಿ. ರಾಠೋಡ ಮಾತನಾಡಿ, ಜಾನಪದ ಎಂದರೆ ಎಲ್ಲೋ ಹೊರಗಿರುವ ಜನಪದ ಕತೆ, ಗೀತೆ, ಕಲಾ ಪ್ರಕಾರಗಳು ಮಾತ್ರವಲ್ಲ, ಕ್ಷಣ ಕ್ಷಣವೂ ಲೋಕವನ್ನು ನೋಡುವ ನೋಟಕ್ರಮವನ್ನು ನಿರ್ದೇಶಿಸುತ್ತಲೇ ಬಹುಸಂಖ್ಯಾತ ಜನರಲ್ಲಿ ಅಡಗಿ ಕೂತ ಪರಂಪರೆಯ ಬೇರುಗಳ ಮೊತ್ತ ಎಂದು ಕರೆಯಬಹುದು. ಹಾಗಾಗಿ ಸಾಂಕೇತಿಕವಾಗಿ ಜಾನಪದಕ್ಕೆ ಒಂದು ದಿನ ಇರಬಹುದು. ಆದರೆ ಜಾನಪದದ ಬೇರುಗಳು ಕ್ಷಣಕ್ಷಣವೂ ಬಹುಜನರಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ. ಮುರುಗೇಶ್ ಕೆ. ಎಂ., ಪ್ರೊ. ಎಸ್. ಬಿ. ಶಿರೋಳ, ಪ್ರೊ. ರಾಮಣ್ಣ ನಡಗೇರಿ, ಪ್ರೊ. ಶಂಕರ, ಪ್ರೊ. ಬಿ.ಎಚ್. ಪವಾರ ಪ್ರೊ. ಪೂಜಾ ಬುರುಡ, ಪ್ರೊ. ದೈವಾಡಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುಮಾರ ಸಾಗರ ರಾಜನ್ನವರ ಸ್ವಾಗತಿಸಿದರು. ಕುಮಾರ ಚನಬಸ್ಸು ಫರೀಟ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

