ಬಸವನಬಾಗೇವಾಡಿ: ನಂದಿಹಾಳ ಗ್ರಾಮದ ಸರ್ಕಾರಿ ಶಾಲೆಗೆ ಎರಡು ಎಕರೆ ಜಮೀನು ಇರುವದರಿಂದ ಈ ಜಾಗೆಯಲ್ಲಿ ಮುಂಬರುವ ದಿನಗಳಲ್ಲಿ ಗ್ರಾಮದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಪ್ರೌಢಶಾಲೆಯನ್ನು ಮಂಜೂರ ಮಾಡಿಸಲಾಗುವುದು ಎಂದು ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ತಾಲೂಕಿನ ನಂದಿಹಾಳ ಪಿಯು ಗ್ರಾಮದಲ್ಲಿ ೨೦೨೨-೨೩ ನೇ ಸಾಲಿನ ರಾಜ್ಯ ಮುಂದುವರಿದ ವಿವೇಕ ಯೋಜನೆಯಡಿಯಲ್ಲಿ ರೂ. ೨೭.೮೦ ಲಕ್ಷ ಅನುದಾನದಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಯ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಈ ಶಾಲೆಗೆ ಎರಡು ಸುಸಜ್ಜಿತ ಕೊಠಡಿಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯಾಗುವಂತೆ ಗಮನ ಹರಿಸಬೇಕು. ಈ ಗ್ರಾಮದಲ್ಲಿರುವ ಸಿದ್ದೇಶ್ವರ ಸ್ವಾಮೀಜಿಯವರು ಜನಿಸಿದ ಮನೆಯನ್ನು ಮಾದರಿ ಗ್ರಂಥಾಲಯವನ್ನಾಗಿ ಮಾಡಬೇಕಾದರೆ ಕಡಿಮೆ ಜಾಗೆಯನ್ನು ಹೊಂದಿದೆ. ಇದರ ಸುತ್ತಮುತ್ತವಿರುವ ನಿವಾಸಿಗಳು ಸಹಕಾರ ನೀಡಿದರೆ ಮುಂಬರುವ ದಿನಗಳಲ್ಲಿ ಈ ಜಾಗೆಯಲ್ಲಿ ಜಿಲ್ಲೆಯಲ್ಲಿಯೇ ಮಾದರಿ ಗ್ರಂಥಾಲಯ ನಿರ್ಮಿಸಿಕೊಡುವ ಭರವಸೆ ನೀಡಿದರು.
ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಹಲವಾರು ಮಹಾಪುರುಷರು ಈ ನಾಡಿನಲ್ಲಿ ಜನಿಸಿದ್ದು. ಇವರು ತಮ್ಮ ಆಧ್ಯಾತ್ಮಿಕ ವಿಚಾರಗಳಿಂದ ಸಮಾಜದ ಪರಿವರ್ತನೆಗೆ ಕಾರಣರಾಗಿದ್ದಾರೆ. ಸಿದ್ದೇಶ್ವರ ಸ್ವಾಮೀಜಿಯವರು ನಂದಿಹಾಳ ಗ್ರಾಮದಲ್ಲಿ ಜನಿಸಿದ್ದು ನಮ್ಮೆಲ್ಲರ ಭಾಗ್ಯ. ಈ ನೆಲವು ಶ್ರದ್ಧೆ, ಭಕ್ತಿಗೆ ಹೆಸರಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳವಾದರೆ ಅಂದಾಜು ೭ ಲಕ್ಷ ಎಕರೆ ನೀರಾವರಿಯಾಗಲಿದೆ. ರೈತ ಬಾಂಧವರು ವೈಜ್ಞಾನಿಕ ಕೃಷಿ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ರಾಜ್ಯದಲ್ಲಿ ಹೆಚ್ಚು ಕಬ್ಬ ಬೆಳೆಯಲಾಗುತ್ತಿದೆ. ರೈತರು ಕಬ್ಬು, ಮೆಕ್ಕೆಜೋಳ ಬೆಳೆಯಲು ಹೆಚ್ಚು ಆದ್ಯತೆ ನೀಡುವಂತಾಗಬೇಕು. ಇದರಲ್ಲಿ ಇಥೆನಾಲ್ ಅಂಶ ಇರುವದರಿಂದಾಗಿ ಪೆಟ್ರೋಲ್ ತಯಾರಿಸಲು ಇದು ಪೂರಕವಾಗುತ್ತದೆ ಎಂದರು.
ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ. ಪಿಡಿಓ ಇದರ ಕಡೆಗೆ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ ಎಂದು ಯರನಾಳ ಗ್ರಾಮ ಪಂಚಾಯಿತಿ ಪಿಡಿಓ ರವಿ ಗುಂಡಳ್ಳಿಗೆ ಪ್ರಶ್ನಿಸಿದ ಸಚಿವರು ಪಿಡಿಓ ಆಗಿ ಎಷ್ಟು ವರ್ಷ ಕಾರ್ಯನಿರ್ವಹಿಸುತ್ತಿರುವೆ. ನಿಮ್ಮ ಮೇಲೆ ಈ ರೀತಿಯಾದ ಆರೋಪ ಕೇಳಿ ಬಂದರೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

