ಸಿಂದಗಿ: ಕೃಷಿ ಅಧಿಕಾರಿಗಳು ಪ್ರತಿ ಹೋಬಳಿ ಮಟ್ಟದಲ್ಲಿ ವರ್ಷಕ್ಕೆ ಎರಡು ಮೂರು ಬಾರಿ ವಿವಿಧ ಬೆಳೆಗಳು ಹಾಗೂ ಅವುಗಳ ಸಂವರ್ಧನೆ ಕುರಿತು ಕೃಷಿ ವಿಚಾರ ಸಂಕೀರ್ಣಗಳನ್ನು ಏರ್ಪಡಿಸುವುದು ಹಾಗೂ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ರಾಂಪುರ ಆರೂಢ ಮಠದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್ ಹಾಗೂ ಸಿಂದಗಿ ಕೃಷಿ ಇಲಾಖೆ ವತಿಯಿಂದ ಕಬ್ಬು, ತೊಗರಿ ಹಾಗೂ ಹತ್ತಿ ಬೆಳೆಗಳಲ್ಲಿ ನೂತನ ತಾಂತ್ರಿಕತೆಗಳ ಬಗ್ಗೆ ಹಮ್ಮಿಕೊಂಡ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತ ದೇಶ ಕೃಷಿ ಪ್ರಧಾನ ದೇಶ. ರೈತ ದೇಶದ ಜೀವನಾಡಿ. ಅನ್ನ ನೀಡುವ ರೈತ ಸಮೃದ್ಧವಾಗಿ ಫಸಲು ಪಡೆದರೆ ಮಾತ್ರ ನಾವು ನೀವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ. ದೇಶದ ನಸೀಬನ್ನು ಬದಲಾಯಿಸುವ ಶಕ್ತಿ ಕೃಷಿಕನಿಗೆ ಮಾತ್ರ ಇದೆ ಆದ್ದರಿಂದ ಕೃಷಿ ತಾಂತ್ರಿಕರು ಆತನಿಗೆ ಕಡಿಮೆ ಖರ್ಚಿನಲ್ಲಿ ಭೂಮಿಯ ಆರೋಗ್ಯವನ್ನು ಕಾಪಾಡಿಕೊಂಡು ಅತಿ ಹೆಚ್ಚು ಇಳುವರಿ ಪಡೆಯುವ ತಾಂತ್ರಿಕತೆಯನ್ನು ತಿಳಿಸಿಕೊಟ್ಟು ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡುಬೇಕೆಂದು. ಆಲಮೇಲ ಮತ್ತು ಸಿಂದಗಿ ತಾಲೂಕಿನಲ್ಲಿ ಪ್ರತಿ ವರ್ಷ ನಮ್ಮ ಭಾಗದ ರೈತರಿಗೆ ಅನುಕೂಲವಾಗುವಂತಹ ಎರಡು ವಿಚಾರ ಸಂಕೀರಣ ಕಾರ್ಯಕ್ರಮಗಳು ಜರುಗಲಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ರೋಹಿಣಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ಎಂ.ವಾಯ್.ಕಟ್ಟಿ, ಕಬ್ಬು ಕೃಷಿಯ ಕುರಿತು ಉಪನ್ಯಾಸ ನೀಡಿ, ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡುವ ಮೂಲಕ ಭೂಮಿಯಲ್ಲಿ ಕೊರತೆ ಇರುವ ಘಟಕಗಳನ್ನು ಗುರುತಿಸಿ ಪೋಷಕಾಂಶಗಳ ಕೊರತೆ ನೀಗಿಸಬಹುದು. ಮಣ್ಣಿನ ಬಾಹ್ಯ ಸ್ಥಿತಿಯ ಪರಿಚಯವಿಲ್ಲದೆ ಉತ್ತಮ ಇಳುವರಿ ಪಡೆಯಲು ಸಾಧ್ಯವಿಲ್ಲ. ಬೆಳೆಗಳ ನಾಲ್ಕು ಹಂತಗಳಾದ ಹುಟ್ಟು, ಬೆಳವಣಿಗೆ, ಉತ್ಪತ್ತಿ ಹಾಗೂ ಮಾಗುವಿಗೆಯ ಹಂತದಲ್ಲಿ ಅವಶ್ಯವಿರುವಷ್ಟೇ ಪ್ರಮಾಣದ ಗೊಬ್ಬರಗಳನ್ನು ಹಾಕುವ ಮೂಲಕ ಗೊಬ್ಬರಗಳ ಉಳಿತಾಯವಷ್ಟೇ ಅಲ್ಲದೆ ಭೂಮಿಯು ವಿಷಯುಕ್ತವಾಗುವುದನ್ನು ತಡೆಗಟ್ಟಬಹುದು. ಸಂಪೂರ್ಣವಾಗಿ ಸಕ್ಕರೆ ಪ್ರಮಾಣ ತುಂಬಿ ಮಾಗಿದ ಕಬ್ಬನ್ನು ಕಳಿಸುವುದರಿಂದ ಕಾರ್ಖಾನೆಗಳೂ ಲಾಭದಾಯಕವಾಗಿ ಸಾಗಲು ಸಾಧ್ಯ. ಕಾರ್ಖಾನೆಗಳು ಬದುಕಿದಾಗ ಮಾತ್ರ ಕಬ್ಬಿಗೆ ಬೆಲೆ ಬರಲು ಸಾಧ್ಯ. ಕಬ್ಬಿನಿಂದಲೇ ಇಥೆನಾಲ್ ತಯಾರಾಗುತ್ತಿರುವುದರಿಂದ ಮುಂದೊಂದು ದಿನ ಕಬ್ಬು ಕೃಷಿ ದೊಡ್ಡ ಉದ್ಯಮವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ. ಕಾರಣ ರೈತರು ಶಕ್ತಿಗಿಂತ ಯುಕ್ತಿ ಮತ್ತು ತಾಂತ್ರಿಕತೆ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಸಹ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ, ಇಂಡಿ ಕೃಷಿ ವಿಜ್ಞಾನ ಕೇಂದ್ರದ ಡಾ.ಶಿವಶಂಕರಮೂರ್ತಿ, ನಿಪ್ಪಾಣಿ ಎಆರ್ಎಸ್ ಮುಖ್ಯಸ್ಥ ಡಾ.ಸಂಜಯ್ ಪಾಟೀಲ್ ತೊಗರಿ ಮತ್ತು ಹತ್ತಿಯ ಬೆಳೆಗಳ ಅಧಿಕ ಇರುವವರಿಗೆ ತಾಂತ್ರಿಕ ಮಾಹಿತಿ ನೀಡಿದರು.
ಈ ವೇಳೆ ರಾಂಪುರ ಆರೂಢಮಠದ ಸಮರ್ಥ ಸದ್ಗುರು ನಿತ್ಯಾನಂದ ಮಹಾರಾಜರು ಸಾನಿಧ್ಯ ವಹಿಸಿದ್ದರು. ಕೃಷಿ ಜಂಟಿ ನಿರ್ದೇಶಕ ಡಾ.ರಾಜಶೇಖರ್ ವಿಲಿಯಂ, ತಾಲೂಕ ಕೃಷಿ ಅಧಿಕಾರಿ ಹೆಚ್.ವಾಯ್. ಸಿಂಗೇಗೋಳ, ಅಬ್ದುಲರಜಾಕ್ ಮೋಮಿನ, ದತ್ತು ಯಡಗಿ, ಪ್ರಗತಿಪರ ರೈತ ಅಶೋಕ ಅಲ್ಲಾಪುರ, ಭಾಗಪ್ಪಗೌಡ ಪಾಟೀಲ್, ಸುನಂದಾ ಯಂಪೂರೆ ಸೇರಿದಂತೆ ಸಿಂದಗಿ ಹಾಗೂ ಆಲಮೇಲ್ ತಾಲೂಕಿನ ನೂರಾರು ರೈತರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
ದೇಶದ ನಸೀಬು ಬದಲಾಯಿಸುವ ಶಕ್ತಿ ಕೃಷಿಕನಿಗಿದೆ :ಶಾಸಕ ಮನಗೂಳಿ
Related Posts
Add A Comment

