ವಿಜಯಪುರದಲ್ಲಿ ಕನೆಕ್ಟ್-೨೦೨೪ ಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅಭಿಮತ
ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಐತಿಹಾಸಿಕ ಪ್ರವಾಸಿ ಸ್ಥಳಗಳ ಅಭಿವೃದ್ಧಿಯಿಂದ ಪ್ರವಾಸೋಧ್ಯಮಕ್ಕೆ ಉತ್ತೇಜನ ದೊರೆತು ಆದಾಯ ವೃದ್ದಿಯೊಂದಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ.ಪಾಟೀಲ ಅವರು ಹೇಳಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಇವರ ಸಹಯೋಗದಲ್ಲಿ ಬುಧವಾರ ನಡೆದ ಕನೆಕ್ಟ್-೨೦೨೪ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಗೊಲಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ, ತಾಜಬಾವಡಿ ಬಾಗಲಕೋಟೆ ಜಿಲ್ಲೆಯ ಬದಾಮಿ-ಐಹೊಳೆಯ ಗುಹಾಂತರ ದೇವಾಲಯ, ಪಟ್ಟದಕಲ್ಲು, ಕೂಡಲ ಸಂಗಮ, ಜಮಖಂಡಿಯ ಅರಮನೆ, ಸೇರಿದಂತೆ ಅನೇಕ ಸ್ಮಾರಕಗಳು, ಐತಿಹಾಸಿಕ ವಾಸ್ತುಶಿಲ್ಪಗಳು, ಪ್ರವಾಸಿ ತಾಣಗಳಲ್ಲಿ ಹೊರ ರಾಜ್ಯ ಮತ್ತು ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಸ್ಥಳಗಳಿಗೆ ಆಕರ್ಷಿಸಲು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿಗರಿಗೆ ಅನೂಕೂಲ ಮಾಡಿ ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ರಾಜ್ಯ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹಲವು ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಶೀಘ್ರದಲ್ಲಿಯೇ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭವಾಗಲಿರುವುದರಿಂದ ರಾಜ್ಯದ ಪ್ರಮುಖ ಸ್ಥಳಗಳಿಗೆ ಹಾಗೂ ಹೊರ ರಾಜ್ಯಗಳೊಂದಿಗೆ ಅತ್ಯುತ್ತಮ ಸಾರಿಗೆ ಸಂಪರ್ಕ ರಸ್ತೆ, ರೈಲು ಸಾರಿಗೆ ವ್ಯವಸ್ಥೆ ದೊರೆತು, ಹೊರ ರಾಜ್ಯ ಹಾಗೂ ದೇಶ ವಿದೇಶದ ಪ್ರವಾಸಿಗರ ಆಗಮನ ಹೆಚ್ಚಾಗಿ ಪ್ರವಾಸೋದ್ಯಮಕ್ಕೆ ಪ್ರೊತ್ಸಾಹ ದೊರೆಯಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಕುರಿತು ಪ್ರವಾಸಿಗರ ಗಮನ ಸೆಳೆಯಲು ಜಿಲ್ಲೆಯ ತಾಣಗಳ ಕುರಿತು ಸೂಕ್ತ ಪ್ರಚಾರ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರವಾಸೋಧ್ಯಮ ಇಲಾಖೆಯ ನಿರ್ದೇಶಕ ಡಾ. ಕೆ.ವಿ.ರಾಜೇಂದ್ರ ಅವರು ಮಾತನಾಡಿ, ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಸೋಧ್ಯಮಕ್ಕೆ ಹಲವು ಅವಕಾಶಗಳಿದ್ದು, ಮಹಿಳೆಯರು ಕೂಡಾ ಯಾವುದೇ ಭಯವಿಲ್ಲದೇ ಪ್ರವಾಸ ಕೈಗೊಳ್ಳುವಂತೆ ಮಾಡುವಲ್ಲಿ ಸುರಕ್ಷಿತ ಹಾಗೂ ಭಯಮುಕ್ತ ವಾತಾವರಣ ಕಲ್ಪಿಸಲು ಆಧ್ಯತೆ ನೀಡಲಾಗಿದೆ. ಸ್ಥಳಿಯವಾಗಿ ದೊರೆಯುವ ಆಹಾರ, ಕರಕುಶಲ ಕಲೆ, ಉಡುಗೆ ತೊಡುಗೆಗಳ, ಸಂಸ್ಕೃತಿಗಳ ಪರಿಚಯನ್ನು ಪ್ರವಾಸಿಗರಿಗೆ ಪರಿಚಯಿಸಬೇಕು ಎಂದು ಹೇಳಿದರು.
ಕರ್ನಾಟಕ ಟೂರಿಸಂ ಸೊಸೈಟಿಯ ಕಾರ್ಯದರ್ಶಿ ಮನು ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೊಟೇಲ್ ಉದ್ಯಮದಾರರು ಟ್ರಾವೆಲ್ ಎಜೆನ್ಸಿಯ ಸದಸ್ಯರ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು.
ಈ ಸಂದರ್ಭಧಲ್ಲಿ ಧಾರವಾಡ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ಹಣಾಧಿಕಾರಿ ರಿಷಿ ಆನಂದ, ವಿಜಯಪುರ ಪ್ರವಾಸೊಧ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಬಾಗಲಕೊಟೆ ಪ್ರವಾಸೋಧ್ಯಮ ಇಲಾಖೆಯ ಉಪ ನಿರ್ದೇಶಕ ಗೋಪಾಲ ಹಿತ್ತಿಲಮನಿ, ಕೆಎಸ್ಆರ್ಟಿಸಿ ಡಿಸಿ ನಾರಾಯಣ ಕುರುಬರ ಸೇರಿದಂತೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಹೊಟೇಕ್ ಮಾಲಿಕರು, ಉದ್ದಿಮೆದಾರರು, ಟೂರಿಂಗ್ ಏಜೆನ್ಸಿಗಳು ಉಪಸ್ಥಿತರಿದ್ದರು.

“ವಿದೇಶಿ ಪ್ರವಾಸಿಗರನ್ನು ಸೆಳೆಯಲು ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಪ್ರವಾಸಿ ತಾಣ, ಸ್ಮಾರಕಗಳ ಐತಿಹಾಸಿಕ ಮಹತ್ವ ಸಾರಲು, ಸ್ಮಾರಕಗಳಲ್ಲಿ ಮೂಲಭೂತ ಸೌಕರ್ಯಗಳನ್ನು
ಕಲ್ಪಿಸಿ ಸ್ವಚ್ಚತೆಗೆ ಆಧ್ಯತೆ ನೀಡಿ ಅವುಗಳ ನಿರ್ವಹಣೆ ಮಾಡುವತ್ತ ಕ್ರಮವಹಿಸಲಾಗುತ್ತಿದೆ ಎಂದರು.
ನಗರದ ಇಬ್ರಾಹಿಂ ರೋಜಾ ಹಾಗೂ ತಾಜಬಾವಡಿಯ ಒತ್ತುವರಿಯನ್ನು ಈಗಾಗಲೇ ತೆರವುಗೊಳಿಸಲಾಗಿದ್ದು, ಯಾವುದೇ ಸಂರಕ್ಷಿತ ಸ್ಮಾರಕಗಳು, ಕಟ್ಟಡಗಳ ಅತಿಕ್ರಮಣವಾಗದಂತೆ ಮುಂಜಾಗೃತ ಕ್ರಮಗಳನ್ನು ವಹಿಸಬೇಕು.”
– ಟಿ.ಭೂಬಾಲನ್,
ಜಿಲ್ಲಾಧಿಕಾರಿ, ವಿಜಯಪುರ

