ಸರ್ಕಾರಿ ಪ್ರೌಢ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ನೀಡಿದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ
ವಿಜಯಪುರ: ನಾವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ನಿರಂತರ ಓದು ಮತ್ತು ಕಠಿಣ ಪರಿಶ್ರಮ ಅತ್ಯವಶ್ಯಕವಾಗಿದ್ದು ವಿದ್ಯಾರ್ಥಿಗಳು ಅತ್ಯುತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಆಗ ಮಾತ್ರ ನಾವು ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ತಮ್ಮ ಸ್ವಗ್ರಾಮ ಬಬಲೇಶ್ವರ ತಾಲೂಕಿನ ಮಮದಾಪುರದ ತಾವು ಹೈಸ್ಕೂಲ ವಿದ್ಯಾಭ್ಯಾಸ ಮಾಡಿದ್ದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ “ಸಾಧಕರೊಂದಿಗೆ ಸಂವಾದ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಪ್ರೇಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ ಪಾಟೀಲರ ಆಶಯದಂತೆ ಹಾರ ತುರಾಯಿ ಶಾಲು ಸನ್ಮಾನಗಳ ಬದಲಾಗಿ, ಸಂಗಮೇಶ ಬಬಲೇಶ್ವರ ಅವರು ಭೇಟಿ ನೀಡಿರುವ ಸರಕಾರಿ ಕಚೇರಿಗಳು ಹಾಗೂ ಹಾಸ್ಟೆಲ್ ಗಳಲ್ಲಿ, ಸಭೆ ಸಮಾರಂಭಗಳಲ್ಲಿ ತಮಗೆ ಉಡುಗೊರೆಯಾಗಿ ನೀಡಿರುವ ಉತ್ಕೃಷ್ಟ ಪುಸ್ತಕಗಳು ಹಾಗೂ ನೋಟ್ ಪುಸ್ತಕಗಳನ್ನು ತಾವು ಕಲಿತಿರುವ ಮಮದಾಪುರದ ಸರ್ಕಾರಿ ಪ್ರೌಢ ಶಾಲೆಯ ಗ್ರಂಥಾಲಯಕ್ಕೆ ನೀಡಿದರು.
ತಾವು ಓದುತ್ತಿದ್ದ ಅಂದಿನ ದಿನಗಳನ್ನು ನೆನಪಿಸಿಕೊಂಡ ಬಬಲೇಶ್ವರ “ನಾವು ಓದುವಾಗ ಇಷ್ಟೊಂದು ಸೌಲಭ್ಯಗಳಿರಲಿಲ್ಲ, ಈಗ ಓದುತ್ತಿರುವ ನನ್ನ ಸಹೋದರ ಸಹೋದರಿಯರು ತುಂಬಾ ಅದೃಷ್ಟ ಮಾಡಿದ್ದೀರಿ, ಸಚಿವ ಡಾ. ಎಂಬಿ ಪಾಟೀಲರು ಸ್ಮಾರ್ಟ್ ಕ್ಲಾಸ್ ಒಳಗೊಂಡಂತೆ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನ ನಮ್ಮೂರಿಗೆ ಒದಗಿಸಿಕೊಟ್ಟಿದ್ದಾರೆ, ಅವರಿಗೆ ನಾನು ಮಕ್ಕಳ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ ಬಬಲೇಶ್ವರ, ಜನ್ಮ ಕೊಟ್ಟ ತಂದೆ ತಾಯಿಯ ಋಣ, ವಿದ್ಯೆ ಕಲಿಸಿದ ಗುರುವಿನ ಋಣ, ನಮ್ಮೂರ ಕೆರೆಗಳನ್ನು ತುಂಬಿಸುವುದರ ಮೂಲಕ ರೈತರ ಬದುಕಿಗೆ ಬೆಳಕು ನೀಡಿದ ಡಾ. ಎಮ್ ಬಿ ಪಾಟೀಲರ ಋಣವನ್ನು ನಾವು ಎಂದೆಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಲಕ್ಷ್ಮಣ ತೇಲಿ ಅವರ ಮುಖಾಂತರ ತಮಗೆ ಉಡುಗೊರೆಯಾಗಿ ಬಂದಿರುವ ಎಲ್ಲ ಪುಸ್ತಕಗಳು ಹಾಗೂ ನೋಟ್ ಪುಸ್ತಕಗಳನ್ನ ಪ್ರಾಚಾರ್ಯರಿಗೆ ಹಸ್ತಾಂತರಿಸಿದರು.
ಪ್ರಾಚಾರ್ಯ ರಾಘವೇಂದ್ರ ಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲಕ್ಷ್ಮಣ್ ತೇಲಿ, ಮುತ್ತೇಶ್ ಗಡ್ಡದಮಠ, ಶಬ್ಬೀರ್ ಕೇಜಿ, ಶಾಲೆಯ ಎಲ್ಲ ಗುರುಗಳು ಗುರುಮಾತೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

