ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಪುನಃಸ್ಥಾಪಿಸಲು ಪ್ರಯತ್ನ | ಆತಂಕ ಬೇಡ | ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ
ಬೆಂಗಳೂರು: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ಗಳ ಪೈಕಿ ಒಂದು ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಅಣೆಕಟ್ಟುಗಳ ಸ್ಥಿತಿಗತಿಯನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ.
ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವರು ಕೂಡ ಆಗಿರುವ ಡಿ ಕೆ ಶಿವಕುಮಾರ್ ಹೇಳಿದರು.
ಕೊಪ್ಪಳ ಜಿಲ್ಲಾ ಕೇಂದ್ರ ಪಟ್ಟಣದ ಸಮೀಪವಿರುವ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ಗಳಲ್ಲಿ ಒಂದು (19 ನೇ ಗೇಟ್) ಮೊನ್ನೆ ಶುಕ್ರವಾರ ಮಧ್ಯರಾತ್ರಿ ಅದರ ಸರಪಳಿ ಸಂಪರ್ಕ ಕಡಿತಗೊಂಡ ನಂತರ ಕೊಚ್ಚಿಕೊಂಡು ಹೋಗಿದ್ದು, ಭಾರಿ ಪ್ರಮಾಣದಲ್ಲಿ ನೀರು ಬರುತ್ತಿದ್ದರಿಂದ ಸುತ್ತಲಿನ ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 70 ವರ್ಷಗಳಲ್ಲಿ ಮೊದಲ ಬಾರಿಗೆ ಇಂತಹ ಘಟನೆ ಸಂಭವಿಸಿದೆ, ಆದರೆ ರೈತರು ಸೇರಿದಂತೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಒಂದೆರಡು ದಿನಗಳಲ್ಲಿ ತಜ್ಞರ ಸಮಿತಿ ರಚಿಸಿ ಎಲ್ಲ ಅಣೆಕಟ್ಟುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ತರಿಸಿಕೊಳ್ಳಲಾಗುವುದು ಎಂದರು.
ಅಣೆಕಟ್ಟಿನ ರಚನೆಗೆ ಹಾನಿಯಾಗುವ ಸಾಧ್ಯತೆಯಿರುವುದರಿಂದ, ಎಲ್ಲಾ ಗೇಟ್ಗಳನ್ನು ತೆರೆಯಲಾಗಿದ್ದು, ಅಲ್ಲಿಂದ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ 38,000 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಒಳಹರಿವು 28,000 ಕ್ಯೂಸೆಕ್ ಇದೆ. 38,000 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, 35,000 ಕ್ಯೂಸೆಕ್ ನೀರು 19ನೇ ಗೇಟ್ನಿಂದಲೇ ಹರಿಯುತ್ತಿದೆ ಎಂದರು.
ಇತರ ಅಣೆಕಟ್ಟುಗಳಲ್ಲಿ ಡಬಲ್ ಚೈನ್ ಲಿಂಕ್ಗಳಿದ್ದವು, ಆದರೆ ತುಂಗಭದ್ರಾ ಅಣೆಕಟ್ಟಿನ ಒಂದು ಚೈನ್ ಲಿಂಕ್ ಕಡಿತಗೊಂಡಿದೆ. ನೀರಿನ ಒತ್ತಡ ಹೆಚ್ಚಾಗಿದೆ. ಸುಮಾರು 55-60 ಟಿಎಂಸಿ ಅಡಿ ನೀರು ಇದೆ. ನಾವು ಅದಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಕ್ರೆಸ್ಟ್ ಗೇಟ್ಗಾಗಿ ಬಲವಾದ ಕಬ್ಬಿಣ ಹಾಕಲು ಜೆಎಸ್ಡಬ್ಲ್ಯೂ ಜೊತೆ ಮಾತನಾಡಿದ್ದೇನೆ. ಗೇಟ್ ಮೊದಲ ಬಾರಿಗೆ ಮಾಡಿದವರಿಗೆ ವಿನ್ಯಾಸ ಕಳುಹಿಸಿದ್ದೇವೆ. ಕೆಲಸ ನಡೆಯುತ್ತಿದೆ ಮತ್ತು ನಾಲ್ಕೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
ಕೆಆರ್ಎಸ್ ಅಣೆಕಟ್ಟೆಗೂ ಸಮಸ್ಯೆ ಎದುರಾಗಿದೆ ಎಂಬ ಜೆಡಿಎಸ್ ಮುಖಂಡ ಹಾಗೂ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ತಳ್ಳಿಹಾಕಿದ ಶಿವಕುಮಾರ್, ಕುಮಾರಸ್ವಾಮಿಗೆ ಏನು ಗೊತ್ತು, ಅವರಿಗೆ ರಾಜಕೀಯ ಮಾಡುವುದು ಮಾತ್ರ ಗೊತ್ತು ಎಂದು ಟೀಕಿಸಿದರು.
ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಆರ್ ಎಸ್ ಅಣೆಕಟ್ಟಿನ ವಿಚಾರದಲ್ಲಿ ತುಂಗಭದ್ರಾ ಅಣೆಕಟ್ಟಿಗೆ ನೀಡಲಾದ ಆದ್ಯತೆಯನ್ನು ಇತರರಿಗೆ ನೀಡಿಲ್ಲ ಎಂಬ ಆರೋಪದ ಕುರಿತು ಶಿವಕುಮಾರ್, ರಾಜಕೀಯ ಅಥವಾ ಆರೋಪ ಮಾಡುವವರು ಅದನ್ನು ಮಾಡಲಿ. ಅಣೆಕಟ್ಟು ಕರ್ನಾಟಕದಿಂದ ನಿಯಂತ್ರಿಸಲ್ಪಡುವುದಿಲ್ಲ, ಅದಕ್ಕೆ ಪ್ರತ್ಯೇಕ ಮಂಡಳಿ ಇದೆ, ಅದಕ್ಕೆ ನಾವು ಸದಸ್ಯರು. ಅಣೆಕಟ್ಟು ನಮ್ಮೊಂದಿಗಿದೆ, ಆದರೆ ಕೀಲಿಗಳು ಅವರ ಬಳಿ ಇವೆ, ಅಣೆಕಟ್ಟು ನಮ್ಮದಾಗಿರುವುದರಿಂದ ನಮಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಡಿ.ಕೆ.ಶಿವಕುಮಾರ ನುಡಿದರು.

