ದೇವರಹಿಪ್ಪರಗಿ: ಪಟ್ಟಣದ ಎರೆಜಮೀನುಗಳಿಗೆ ಹಾಗೂ ಕನ್ನೋಳ್ಳಿ, ಯರನಾಳ, ಇಂಗಳಗಿ, ಹರನಾಳ ಬಮ್ಮನಳ್ಳಿ, ಮುಳಸಾವಳಗಿ, ಮಾರ್ಕಬ್ಬಿನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎತ್ತಿನಗಾಡಿ(ಚಕ್ಕಡಿ) ರಸ್ತೆಗಳನ್ನು ಜಾಲಿಗಿಡಗಂಟಿಗಳಿಂದ ಮುಕ್ತಗೊಳಿಸುವುದು ಹಾಗೂ ಮಳೆಯಿಂದ ಬಿದ್ದ ಕೊರೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ರೈತರು ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ ಎಸ್.ಎಚ್. ರಾಠೋಡ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ರೈತರು ರಸ್ತೆಯಲ್ಲಿನ ಕೊರೆಗಳು ಹಾಗೂ ಮುಳ್ಳಿನ ಗಿಡಗಂಟಿಗಳ ತೆರವುಗೊಳಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತಪ್ರತಿನಿಧಿ ಅಜೀಜ್ ಯಲಗಾರ ಮಾತನಾಡಿ, ಎರೆ ಜಮೀನುಗಳು ಹಾಗೂ ವಿವಿಧ ಗ್ರಾಮಗಳಿಗೆ ತೆರಳುವ ಎತ್ತಿನಗಾಡಿ (ಚಕ್ಕಡಿ)ರಸ್ತೆ ಉತ್ತಮವಾಗಿದ್ದು, ಆದರೆ ರಸ್ತೆಯ ಎಡ ಬಲಗಳಲ್ಲಿ ಜಾಲಿಗಿಡಗಳು ಬೃಹದಾಕಾರವಾಗಿ ಬೆಳೆದ ರಸ್ತೆಯನ್ನು ಕಿರಿದಾಗಿಸಿವೆ.
ರಸ್ತೆಯ ಮೂಲಕ ಚಕ್ಕಡಿ ಹಾಗೂ ಬೈಕ್ಗಳಲ್ಲಿ ತೆರಳಬೇಕೆಂದರು ಪ್ರಯಾಣದಲ್ಲಿ ಮುಳ್ಳು ಚುಚ್ಚಿ ಗಾಯಗಳಾಗುತ್ತಿವೆ. ಇನ್ನೂ ಜಾಲಿಗಿಡಗಳ ಟೊಂಗೆಗಳು ಉದ್ದಾಗಿ ಬೆಳೆದು ರಸ್ತೆಯನ್ನು ಅತೀಕ್ರಮಿಸಿ ಅಪಘಾತಗಳಿಗೆ ಕಾರಣವಾಗುತ್ತಿವೆ. ಜೊತೆಗೆ ಮಳೆಯಿಂದ ರಸ್ತೆಗಳಲ್ಲಿ ಕೊರೆಗಳು ಬಿದ್ದಿದ್ದು ಎತ್ತಿನಗಾಡಿ ಬೀಳುವ ಸಂಭವ ಇರುತ್ತದೆ. ಈ ನಿಟ್ಟಿನಲ್ಲಿ ತಹಶೀಲ್ದಾರ, ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕೂಡಲೇ ಕ್ರಮ ಕೈಗೊಂಡು ರೈತರಿಗೆ ಸ್ಪಂದಿಸುವಂತೆ ಆಗ್ರಹಿಸಿದರು.
ಯುವರೈತ ವಿರೇಶ ಕುದರಿ ಹಾಗೂ ರೈತಸಂಘದ ಮಹಿಳಾ ಪ್ರತಿನಿಧಿ ಸುನಂದಾ ಸೊನ್ನಹಳ್ಳಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ ಪರವಾಗಿ ಶಿರಸ್ತೇದಾರ ಡಿ.ಎಸ್.ಭೋವಿ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರೈತಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ, ತಾಲ್ಲೂಕು ಅಧ್ಯಕ್ಷ ರಾಮು ದೇಸಾಯಿ, ಮಡಿವಾಳಪ್ಪ ಮಣೂರ, ಶಾಂತಗೌಡ ಬಿರಾದಾರ, ನಿಂಗಪ್ಪ ಕೋಟಿನ್, ಮಲ್ಲು ವಿಜಾಪೂರ, ವೀರೇಶ ಮಿಂಚನಾಳ, ಚಂದ್ರಕಾಂತ ಭಾಸುತ್ಕರ್, ಬಸಲಿಂಗಪ್ಪ ಮಸಬಿನಾಳ, ರಾವುತಪ್ಪ ವಗ್ಗರ, ಸುರೇಶ ಅಸ್ಕಿ, ಅಶೋಕ ವಾಲೀಕಾರ, ನಿಂಗು ದಾನಗೊಂಡ, ಸುನೀಲ ದೇಸಾಯಿ, ಕಾಸು ಮಡಗೊಂಡ, ಬಸವರಾಜ ಇಂಡಿ, ಗೌಡು ದಾನಗೊಂಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

