ಇಂಡಿಯಲ್ಲಿ ರಾಜಕೀಯ ಚದುರಂಗದಾಟ | ಗದ್ದುಗೆ ಏರಲು ಕೈ-ಕಮಲ ಪೈಪೋಟಿ
– ಶಂಕರ ಜೆ ಎಮ್, ಇಂಡಿ
ಇಂಡಿ: ಹಲವಾರು ರಾಜಕೀಯ ಮೇಲಾಟ, ಪರಸ್ಪರ ಆರೋಪ, ಪ್ರತ್ಯಾರೋಪ ಜಿದ್ದಾಜಿದ್ದಿನ ಹೋರಾಟ ಹಾಗೂ ರಾಜಕಾರಣದಲ್ಲಿ ಹೊಂದಾಣಿಕೆ ಎಂಬ ಮಾತು ಇತ್ತೀಚಿಗೆ ಸಾಮಾನ್ಯ ಎಂಬಂತಾಗಿದೆ. ಆದರೆ ಅದೆಲ್ಲಕ್ಕೂ ಮೀರಿದ ಭೀಮಾತೀರದ ಖ್ಯಾತಿಯ ಇಂಡಿ ಪುರಸಭೆಯಲ್ಲಿ ಇದೀಗ ರಾಜಕೀಯ ಚದುರಂಗದ ಆಟ ಜೋರಾಗಿದೆ. ಚೆಕ್ ಮೆಟ್ ಹೇಳವರಾರು..? ಎಂಬುದು ಬಾರಿ ಕೂತುಹಲ ಮೂಡಿದೆ.
ಹೌದು, ಭವಿಷ್ಯದ ಜಿಲ್ಲಾ ಕೇಂದ್ರದ ಘೋಷಣೆ ಹಾಗೂ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ನಿಗದಿ ಬಗ್ಗೆ ಜನರು ಅತಿಯಾದ ನಿರೀಕ್ಷೆಯಲ್ಲಿದ್ದರು. ಅದಕ್ಕೆ ರಾಜ್ಯ ಸರಕಾರ ಹಸಿರು ನಿಶಾನೆ ತೋರಿದೆ. ಆದರೆ ಇಂಡಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಇಲ್ಲದಿರುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಆ.೫ ರಂದು ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಪಟ್ಟಣದ ಪುರಸಭೆ ಚುಕ್ಕಾಣಿ ಹಿಡಿಯುವುದು ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೀಗ ಪ್ರತಿ಼ಷ್ಠೆಯಾಗಿ ಪರಿಣಮಿಸಿದೆ.
ಪಟ್ಟಣದ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಠ ಜಾತಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಮೀಸಲಾತಿ ಪ್ರಕಟಗೊಂಡಿದ್ದು, ಗದ್ದುಗೆ ಏರಲು ಸದಸ್ಯರು ತಯಾರಿ ನಡೆಸುತ್ತಿದ್ದು ದಿನಾಂಕ ನಿಗದಿಗಾಗಿ ಕಾಯುತ್ತಿದ್ದಾರೆ.
ಇಂಡಿ ಪುರಸಭೆಗೆ ಒಟ್ಟು ೨೩ ಸದಸ್ಯರ ಸಂಖ್ಯಾಬಲ ಹೊಂದಿದ ಪುರಸಭೆಗೆ ಬಿಜೆಪಿ ೧೧, ಕಾಂಗ್ರೇಸ್ ೮, ಜೆಡಿಎಸ್ ೨, ಪಕ್ಷೇತರ ೨ ಸದಸ್ಯರಿದ್ದಾರೆ. ಹೀಗಾಗಿ ಯಾರು-ಯಾರ ಕಡೆ ವಾಲುತ್ತಾರೆ ಎಂಬುದು ತಿಳಿಯದಂತಾಗಿದ್ದು ಈ ಚುನಾವಣೆ ಅತೀ ಕುತೂಹಲ ಮೂಡಿಸಿದೆ.
ಆದರೆ ಬಿಜೆಪಿಯಲ್ಲಿ ಈ ಮೊದಲು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಭಾಗೀರಥಿ ಕುಂಬಾರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಸಧ್ಯ ಬಿಜೆಪಿಯಲ್ಲಿ ೧೦ ಸದಸ್ಯರಿದ್ದು, ಕಾಂಗ್ರೆಸ್ ಪಕ್ಷಕ್ಕೆ ೯ ಸದಸ್ಯರ ಬಲವಿದೆ.
ಅಧ್ಯಕ್ಷ ಹುದ್ದೆಗೆ ೭ ಜನ ಅರ್ಹರು..!
ಬಿಜೆಪಿಯಿಂದ ಸಾಯಬಣ್ಣ ಮೂರಮನ್, ಜ್ಯೋತಿ ರಾಠೋಡ, ಕವಿತಾ ರಾಠೋಡ ಒಟ್ಟು ೩ ಸದಸ್ಯರಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಲಿಂಬಾಜಿ ರಾಠೋಡ, ಉಮೇಶ ದೇಗಿನಾಳ, ಅನಸೂಯಾ ಕಾಲೇಬಾಗ, ರೇಖಾ ಮೂರಮನ್ ೪ ಸದಸ್ಯರಿದ್ದಾರೆ.
ಇಂಡಿ ಪುರಸಭೆಯಲ್ಲಿ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದವರು ಶತ ಪ್ರಯತ್ನ ನಡೆಸುವುದು ನಿಶ್ಚಿತ. ಮತ್ತೊಂದೆಡೆ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು ಇಲ್ಲಿ ಆ ಪ್ರಯತ್ನ ನಡೆಯುವುದೇ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇರುವುದರಿಂದ ಪಕ್ಕೇತರರನ್ನು ಸೆಳೆಯಬಹುದು. ಒಟ್ಟಿನಲ್ಲಿ ಪುರಸಭೆ ಅಧಿಕಾರ ಯಾರ ಪಕ್ಷದ ಪಾಲಾಗಲಿದೆ ಎಂಬುವುದು ಕುತೂಹಲ ಮೂಡಿಸಿದೆ. ಆದರೆ ಎರಡೂ ಪಕ್ಷದಲ್ಲಿ ಇಲ್ಲಿಯವರೆಗೂ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದು ಜೆಡಿಎಸ್ ಹಾಗೂ ಪಕ್ಷೇತರರು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಜೋರಾಗಿವೆ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆಯಾದರೂ ಇಂಡಿ ಕ್ಷೇತ್ರದಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲ ಜೆಡಿಎಸ್ ಪಕ್ಷದ ಈರ್ವರೂ ಸದಸ್ಯರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು ಈಗಾಗಲೆ ಕಳೆದ ಬಾರಿ ಜೆಡಿಎಸ್ ಸದಸ್ಯರ ಬೆಂಬಲ ಪಡೆದು ಜೆಡಿಎಸ್ ಶೈಲಜಾ ಪೂಜಾರಿ ಅವರಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ಮರೆಯುವಂತಿಲ್ಲ. ಹೀಗಾಗಿ ಈಗ ಜೆಡಿಎಸ್ ಸದಸ್ಯರು ಯಾವ ಕಡೆ ವಾಲುತ್ತಾರೆ ಎಂಬುದೇ ಕುತೂಹಲದ ಪ್ರಶ್ನೆಯಾಗಿದೆ.
ಇನ್ನು ಬಿಜೆಪಿ ಪಕ್ಷವೂ ಯಾವುದಕ್ಕೂ ಕಮ್ಮಿ ಇಲ್ಲದಂತೆ ಬನ್ನೆಮ್ಮ ಯಲ್ಲಪ್ಪ ಹದರಿ ಅವರನ್ನು ಸಹ ಅಧ್ಯಕ್ಷ ಮಾಡಿದ್ದು ಮರೆಯುವಂತಿಲ್ಲ. ಆದರೆ ಬಿಜೆಪಿಯಲ್ಲಿ ನಾಯಕರ ಆನೆ ಬಲವಿದೆ. ಅದಲ್ಲದೇ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿದ್ದು, ಇತ್ತೀಚಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಆದರೆ ಇದೀಗ ಅದೇ ವಾತಾವರಣ ಮುಂದುವರೆಸುತ್ತೋ..ಅಥವಾ ಕೈ ಬಿಡುತ್ತೋ..! ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಶಾಸಕ ಯಶವಂತರಾಯಗೌಡ ಪಾಟೀಲ ಸಾಮಾಜಿಕ ನ್ಯಾಯದ ಅಡಿಯಲ್ಲಿ ರಾಜಕಾರಣ ಮಾಡುವುದು ಕಟು ಸತ್ಯ. ಅದಲ್ಲದೇ ರಾಜಕಾರಣದಲ್ಲಿ ಚಾಣಾಕ್ಷರು ಎಂಬ ಮಾತು ಪಕ್ಷದ ನಾಯಕರಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರ ಮೇಲೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಗೆಲುವು ನಿಂತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮುಂದೆ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಗಾದಿ ಯಾರು ಏರುತ್ತಾರೋ ಕಾದು ನೋಡಬೇಕಿದೆ.

“ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಇದೆ. ಹೀಗಾಗಿ ಪಕ್ಷೇತರರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಬಿಜೆಪಿ ತೆಕ್ಕೆಯಲ್ಲಿಟ್ಟುಕೊಳ್ಳುತ್ತೇವೆ.”
– ಮಲ್ಲಿಕಾರ್ಜುನ ಕಿವುಡೆ
ಅಧ್ಯಕ್ಷರು, ಬಿಜಿಪಿ ಮಂಡಲ ಇಂಡಿ

“ಸ್ಥಳೀಯ ಶಾಸಕರ ಸಹಕಾರದೊಂದಿಗೆ ಈ ಬಾರಿಯೂ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳುತ್ತೇವೆ. ರಾಜ್ಯ ರಾಜಕಾರಣವೇ ಬೇರೆ ಇಲ್ಲಿಯ ನಮ್ಮ ರಾಜಕಾರಣವೇ ಒಂದು ರೀತಿಯಿದೆ.”
ಜಾವೀದ್ ಮೋಮಿನ್
ಅಧ್ಯಕ್ಷರು, ಕಾಂಗ್ರೆಸ್ ಬ್ಲಾಕ್ ಇಂಡಿ

“ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ನಾವೂ ಸಹ ಅದನ್ನೇ ಪಾಲಿಸಬೇಕಾಗುತ್ತದೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ ನಮ್ಮ ಬೆಂಬಲ ಸೂಚಿಸುತ್ತೇವೆ.”
– ಬಿ.ಡಿ. ಪಾಟೀಲ
ಜೆಡಿಎಸ್ ತಾಲೂಕು ಅಧ್ಯಕ್ಷರು

