ಸುಂದರಂ ಹೋಮ್ ಫೈನಾನ್ಸಿಂದ ಮಕ್ಕಳಿಗೆ ‘ನಿಮ್ಮ ಕನಸಿನ ಮನೆ’ ಚಿತ್ರ ಬಿಡಿಸುವ ಸ್ಪರ್ಧೆ

ವಿಜಯಪುರ: ಮಕ್ಕಳ ಕಲಿಕೆಯ ಜೀವಸೆಲೆಯೇ ಚಿತ್ರಕಲೆ. ಮನಸ್ಸನ್ನು ಉಲ್ಲಾಸಗೊಳಿಸುವ ಚಿತ್ರಗಳ ಜತೆ ಮಕ್ಕಳು ಅನುಸಂಧಿಸುತ್ತ ಅಂತರ್ಮುಖಿಯಾಗಿ ಓದು-ಬರಹದತ್ತ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳಲ್ಲಿನ ಕಲೆಯನ್ನು ಪ್ರೋತ್ಸಾಹಿಸುವದು ಬಹುಮುಖ್ಯ ಎಂದು ಕಾನಿಪ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹೇಳಿದರು.
ಅವರು ರವಿವಾರದಂದು ನಗರದ ಲಿಂಗದ ಗುಡಿ ರಸ್ತೆಯಲ್ಲಿರುವ ಸುಂದರಂ ಹೋಮ್ ಶಾಖಾ ಕಚೇರಿಯಲ್ಲಿ ಸ್ವಾತಂತ್ರೋತ್ಸವದ ನಿಮಿತ್ತ 12 ವರ್ಷದೊಳಗಿನ ಮಕ್ಕಳಿಗೆ ಹಮ್ಮಿಕೊಂಡ ‘ನಿಮ್ಮ ಕನಸಿನ ಮನೆ’-ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸಿ, ಭವಿಷ್ಯದಲ್ಲಿ ಮಕ್ಕಳನ್ನು ಕಲಾವಿದರನ್ನಾಗಿ ರೂಪಿಸುವ ಕೆಲಸ ಸುಂದರಂ ಹೋಮ್ ಸಂಸ್ಥೆಯಿಂದ ನಡೆಯುತ್ತಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಚಿತ್ರಕಲೆಯು ಮಕ್ಕಳ ರಚನಾ ಸಾಮರ್ಥ್ಯದ ಬೆಳವಣಿಗೆ, ಭಾವಾಭಿವ್ಯಕ್ತಿ, ಕಲ್ಪನಾಶಕ್ತಿ ವರ್ಧಿಸುವುದಕ್ಕೆ ಸಹಕಾರಿ. ಮಗು ಮಾತಿನಲ್ಲಿ ವ್ಯಕ್ತಪಡಿಸಲಾಗದ ತನ್ನ ಸಂವೇದನೆಯನ್ನು ಚಿತ್ರಕಲೆಯಂತಹ ಮೌನ ಭಾಷೆಯ ಮೂಲಕ ತಿಳಿಸುತ್ತದೆ. ಚಿತ್ರಕಲೆಯೆಂಬ ಈ ವರ್ಣಮಯ ಕ್ರಿಯೆ ಮಗುವಿನ ಆಪ್ತಮಿತ್ರನಂತೆ ಎಂದು ಹೇಳಿದರು.
ಸುಂದರಂ ಹೋಮ್ ವಿಜಯಪುರ ಶಾಖೆಯ ಮುಖ್ಯ ವ್ಯವಸ್ಥಾಪಕ ಗುರುಮೂರ್ತಿ ಬರಗಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿತ್ರಕಲೆಯು ಮಗುವಿನ ಮಾನಸಿಕ ಬೆಳವಣೆಗೆಗೆ ಸ್ವಾಭಾವಿಕ ಸಾಧನ. ಸಂವೇದನಾಶೀಲ ಮಕ್ಕಳು ಚಿತ್ರಕಲೆಯ ಮೂಲಕ ಹೊರಜಗತ್ತಿನೊಂದಿಗೆ ಸಂವಾದಿಸುವರು. ಪ್ರತಿ ಮಗುವಿನಲ್ಲೂ ಕಲಾಜ್ಞಾನ ಇದ್ದೇ ಇರುತ್ತದೆ. ಆ ಕಲಾಜ್ಞಾನ ಅರಿತು ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಬಸವರಾಜ ತೋಟದ, ಶ್ರೀಶೈಲ ಕುಂಬಾರ, ಯಶೋಧಾ ದಿವಾಕರ, ಅನಿಲ ಕುಂದರಗಿ, ರವಿ ಶಿವಣಗಿ, ರಾಘವೇಂದ್ರ ಪೂಜಾರಿ, ಶಶಿಕಾಂತ ಬೀಳಗಿ, ಪ್ರತೀಕ ಪಾರೇಖ, ಹಿದ್ದು ಅಡ್ಡೆವಾಲೆ, ಬಸವರಾಜ ಕುಂಬಾರ, ಕರಣಿ ಇಂಜಿನಿಯರ್, ಧರ್ಮೇಂದ್ರ ಪಾಟೀಲ, ಪ್ರೇಮಕುಮಾರ, ಚನ್ನಪ್ಪ ಹುಣಶ್ಯಾಳ, ರೂಪಾ ಗೌಂಡಿ, ಭಾರತಿ ಗೌಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ 70ಕ್ಕೂ ಅಧಿಕ ಮಕ್ಕಳಿಗೆ ಪ್ರಶಸ್ತಿ ಪತ್ರ, ಡಿಜಿಟಲ್ ಸ್ಲೇಟ್, ಚಿತ್ರಕಲಾ ಸಾಮಗ್ರಿಗಳನ್ನು ನೀಡಿ ಅಭಿನಂದಿಸಲಾಯಿತು.

