ವಿಜಯಪುರ: ಸರಸ್ವತಿ ವಿದ್ಯಾಧಿದೇವತೆ; ನಮಗೆ ಬೇಕಾದ ಎಲ್ಲ ವಿಧದ ವಿದ್ಯೆಗಳನ್ನೂ ದಯಪಾಲಿಸುವವಳು. ವಿದ್ಯೆ ನಮಗೆ ಯಾವ ರೂಪದಲ್ಲಿಯೂ ಒದಗಬಹುದು. ಬರಿ ವಿದ್ಯೆಯನ್ನಷ್ಟೆ ಗಳಿಸಿದರೆ ಪ್ರಯೋಜನವಿಲ್ಲ; ಅದನ್ನು ಸರಿಯಾಗಿ ಬಳಸಲು ಬುದ್ಧಿಯೂ ಬೇಕು. ಇಂಥ ಬುದ್ಧಿಯನ್ನು ಕೊಡುವವಳೂ ಸರಸ್ವತಿಯೇ, ಸರಸ್ವತಿಯು ಲೌಕಿಕ-ಅಲೌಕಿಕ ಎರಡೂ ವಿದ್ಯೆಗಳಿಗೂ ಒಡತಿ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಹೇಳಿದರು.
ಗುರುವಾರದಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಸರಸ್ವತಿ ಪೂಜಾ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ನಾವಿಂದು ಲೌಕಿಕದಲ್ಲಿಯೇ ಮುಳುಗಿ, ನಮ್ಮ ಅಲೌಕಿಕ ಸ್ವರೂಪವನ್ನು ಮರೆಯುತ್ತಿದ್ದೇವೆ. ಹೀಗಾಗಿಯೇ ಪರಸ್ಪರ ಭೇಧ, ವೈರ, ಕ್ರೌರ್ಯ. ಸರಸ್ವತಿಯ ಆರಾಧನೆ ಎಂದರೆ ಅಂತರಂಗ-ಬಹಿರಂಗದ ಸಾಮರಸ್ಯ. ಈ ಸಾಮರಸ್ಯದಿಂದಲೇ ಒಳಗೂ ಹೊರಗೂ ಸೌಹಾರ್ದವನ್ನು ಸಾಧಿಸಲಾದೀತು ಎಂದು ಹೇಳಿದರು.
ಸರಸ್ವತಿ ಮಾತೆ ಪೂಜೆ ನೆರವೇರಿಸಿ ಮಾತನಾಡಿದ ಬೋರಾವತ್ತರವರು. ಇಂದು ನಾವು ಹಲವು ವಿದ್ಯೆಗಳನ್ನು ಸಂಪಾದಿಸುತ್ತಿದ್ದೇವೆ. ಆದರೆ ನೆಮ್ಮದಿಯನ್ನು ಮಾತ್ರ ಕಾಣುತ್ತಿಲ್ಲ. ಇಡೀ ಜಗತ್ತು ರಾಗ-ದ್ವೇಷಗಳಲ್ಲಿ ಮುಳುಗಿದೆ; ಎಲ್ಲೆಲ್ಲೂ ಅಶಾಂತಿ. ಇದಕ್ಕೆ ಕಾರಣವೇ ಅವಿದ್ಯೆ. ನಾವು ವಿದ್ಯೆಯ ದಿಟವಾದ ಅರ್ಥದಿಂದ ದೂರ ಸರಿದಿದ್ದೇವೆ. ಹೀಗಾಗಿ ನಾವು ಸಂಪಾದಿಸುತ್ತಿರುವ ವಿದ್ಯೆಯು ಸತ್ವಗುಣಪ್ರಧಾನವಾಗಿಲ್ಲ ಎಂದು ಹೇಳಿದರು.
ಸರಸ್ವತಿ ಪೂಜೆ ಸಮಾರಂಭವು ವೇದ ಸ್ತೋತ್ರಗಳು ಮತ್ತು ಮಂತ್ರಗಳ ಪಠಣದೊಂದಿಗೆ ಪ್ರಾರಂಭವಾಯಿತು. ಸರಸ್ವತಿ ದೇವಿಯ ಆಶೀರ್ವಾದವನ್ನು ಆಹ್ವಾನಿಸಲಾಯಿತು. ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಮತ್ತು ಶೈಕ್ಷಣಿಕ ಉತ್ಕೃಷ್ಟತೆ ಹಾಗೂ ಬೌದ್ಧಿಕ ಬೆಳವಣಿಗೆಗೆ ದೈವಿಕ ಮಾರ್ಗದರ್ಶನವನ್ನು ಪಡೆಯಲು ಒಟ್ಟುಗೂಡಿದರು. ಒಬ್ಬರ ಜೀವನದಲ್ಲಿ ಜ್ಞಾನ ಮತ್ತು ಬಕಲಿಕೆಯ ಮಹತ್ವವನ್ನು ಸೂಚಿಸುವ ಪೂಜಾ ವಿಧಿಗಳನ್ನು ಅತ್ಯಂತ ಗೌರವ ಮತ್ತು ಭಕ್ತಿಯಿಂದ ನಡೆಸಲಾಯಿತು.
ಈ ವೇಳೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಎಲ್ಲ ಭೋಧಕ ಮತ್ತು ಭೋಧಕೇತರ ಸಿಬ್ಬಂದಿ, ಬಿಎಡ್ ಪ್ರಶಿಕ್ಷಣಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

