ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಮುಂದುವರೆಸಲು ಕೆಎಸ್ಸಾರ್ಟಿಸಿ ಸ್ಟಾಪ್ & ವರ್ಕರ್ಸ್ ಯೂನಿಯನ್ ಆಗ್ರಹ
ವಿಜಯಪುರ: ಇಲ್ಲಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾಗಿ ವರ್ಗಾವಣೆಗೊಂಡು ಬಂದಿರುವ ನಾರಾಯಣಪ್ಪ ಕುರಬರ ಅವರ ಮೇಲೆ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಪದಾಧಿಕಾರಿಗಳು ಈಚೆಗೆ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲವೆಂದು ಕೆ.ಎಸ್.ಆರ್.ಟಿ.ಸಿ. ಸ್ಟಾಪ್ & ವರ್ಕರ್ಸ್ ಯೂನಿಯನ್ ಅಧ್ಯಕ್ಷ ಅರುಣಕುಮಾರ ಹಿರೇಮಠ ಹೇಳಿದ್ದಾರೆ.
ಬುಧವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ದಕ್ಷ, ಪ್ರಾಮಾಣಿಕ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರ ಬಗ್ಗೆ ಹಲವರು ಇಲ್ಲ ಸಲ್ಲದ ಅನೇಕ ಸುಳ್ಳು ಸಂಗತಿಗಳನ್ನು ನೈಜ ಸಂಗತಿಗಳೆಂದು ಬಿಂಬಿಸಿ ಸಾರಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಸುಳ್ಳು ಆರೋಪವನ್ನು ಮಾಡಿರುತ್ತಾರೆ. ಅವರು ಮಾಡಿದ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿದ್ದು, ವಿಭಾಗೀಯ ನಿಯಂತ್ರಣಾಧಿಕಾರಿಗಳಿಂದ ವೈಯಕ್ತಿಕ ಲಾಭದ ಆಸೆಗಾಗಿ ಇವರೆಲ್ಲ ಅವರ ತೇಜೋವಧೆಗೆ ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಹಿರೇಮಠ ಹೇಳಿದ್ದಾರೆ.
ಸಾರಿಗೆ ಸಂಸ್ಥೆ ಹಾಗೂ ಕಾರ್ಮಿಕರ ಹಿತಚಿಂತನೆಯನ್ನು ಗಮನದಲ್ಲಿರಿಸಿಕೊಂಡು ಒಳ್ಳೆಯ ಕಾರ್ಯಗಳನ್ನು ಮಾಡುವಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಕುರುಬರ ಅವರು ನಿರತರಾಗಿದ್ದರೂ ಸಹಿತ ರಾಜ್ಯ ರಸ್ತೆ ಸಾರಿಗೆ ಮಹಾಮಂಡಳದ ವಿಜಯಪುರ ವಿಭಾಗದವರು ಇವರ ಮೇಲೆ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸದೇ ಅವರನ್ನು ವಿಜಯಪುರ ವಿಭಾಗದ ನಿಯಂತ್ರಣಾಧಿಕಾರಿಗಳಾಗಿ ಮುಂದುವರೆಸಬೇಕೆಂಬುದು ಕೆ.ಎಸ್.ಆರ್.ಟಿ.ಸಿ. ಸ್ಟಾಪ್ & ವರ್ಕರ್ಸ ಪ್ರಧಾನ ಕಾರ್ಯದರ್ಶಿ ಆಯ್.ಆಯ್.ಮುಶ್ರಿಫ್, ಪದಾಧಿಕಾರಿಗಳಾದ ಎಂ.ಎನ್.ನದಾಫ, ಎಂ.ಎಚ್. ಮಾರನಬಸರಿ, ಶರಣಪ್ಪ ಅಥಣಿ, ಬಿ.ಎಂ.ತೇರದಾಳ, ಆರ್.ಆರ್.ನದಾಫ, ಎಸ್.ಡಿ.ಪಟ್ಟಣಶೆಟ್ಟಿ, ಮುಸ್ತಾಕ ಹುಂಡೇಕಾರ, ಯಮನಪ್ಪ. ಚಲವಾದಿ, ಜಿ.ಜಿ.ಬಿರಾದಾರ, ಭೀಮಪ್ಪ ಗುಳೇದ, ರಾಚಪ್ಪ ಹೂಗಾರ, ಶ್ರೀಮತಿ ಜಯಶ್ರೀ ಹೂಗಾರ, ಶ್ರೀಮತಿ ಸುಜ್ಞಾನಿ ಹಳ್ಳಿ, ಚಂದು ಬರಮನಗೋಳ ಮೊದಲಾದವರೆಲ್ಲರ ಆಗ್ರಹವಾಗಿದೆ ಎಂದು ಅಧ್ಯಕ್ಷ ಅರುಣಕುಮಾರ ಹಿರೇಮಠ ತಿಳಿಸಿದ್ದಾರೆ.

” ನಾರಾಯಣಪ್ಪ ಕುರುಬರ ರವರು ಬೆಳಗಾವಿಯ ೨೦೨೧ರ ಲೋಕಸಭಾ ಉಪಚುನಾವಣೆಯಲ್ಲಿ ದೇಶದಾದ್ಯಂತ ಗಂಭೀರವಾದ ಮಹಾಮಾರಿ ಕೋರೋನಾ-೧೯ ರೋಗ ಆವರಿಸಿರುವಾಗ ರಸ್ತೆ ಸಾರಿಗೆ ಸಂಸ್ಥೆಯ ಯಾವ ಚಾಲಕ-ನಿರ್ವಾಹಕರು ಕರ್ತವ್ಯ ನಿರ್ವಹಿಸಲು ಒಪ್ಪದಿರುವ ಸಂದರ್ಭದಲ್ಲಿ ಹಾಗೂ ಆವಾಗ ಕಾರ್ಮಿಕರ ಬೇಡಿಕೆಗಳಿಗಾಗಿ ಮುಷ್ಕರ ಚಾಲ್ತಿಯಲ್ಲಿದ್ದರೂ ಸಹಿತ ಅವರ ಸತತ ಪ್ರಯತ್ನದಿಂದ ಸುಮಾರು ೨೮೭ ವಾಹನಗಳನ್ನು ವಿಜಯಪುರ ವಿಭಾಗದಿಂದ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಒದಗಿಸಿಕೊಟ್ಟು, ಕರ್ನಾಟಕ ಸರಕಾರಕ್ಕೂ ಹಾಗೂ ರಸ್ತೆ ಸಾರಿಗೆ ಸಂಸ್ಥೆಗೂ ಒಳ್ಳೆಯ ಹೆಸರು ತರುವಲ್ಲಿ ಶ್ರಮಿಸಿರುತ್ತಾರೆ. ಅಲ್ಲದೆ ಕೋರೋನಾ ಮಹಾಮಾರಿಯ ಸಮಯದಲ್ಲಿ ನಡೆದ ಶ್ರೀಶೈಲಂ ಜಾತ್ರೆಯಲ್ಲಿ ಪ್ರಯಾಣಿಕರ ಹಿತವನ್ನು ಗಮನದಲ್ಲಿರಿಸಿಕೊಂಡು ವಿಜಯಪುರ ವಿಭಾಗದ ಕಾರ್ಮಿಕರ ಮನವೊಲಿಸಿ ಶ್ರೀಶೈಲಂ ಜಾತ್ರೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಅವರದು. ಕೋರೋನಾ ಸಮಯದಲ್ಲಿ ವಿಜಯಪುರ ನಗರದಲ್ಲಿ ಕೆಲಸಕ್ಕಾಗಿ ವಲಸೆ ಬಂದಿರುವ ವಿವಿಧ ರಾಜ್ಯದ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸುವ ಗುರುತರ ಕೆಲಸವನ್ನು ನಿರ್ವಹಿಸಿದ ಕೀರ್ತಿ ನಾರಾಯಣಪ್ಪ ಕುರುಬರ ಅವರಿಗೆ ಸಲ್ಲುತ್ತದೆ. ಇಂಥಹ ದಕ್ಷ ಅಧಿಕಾರಿಯನ್ನು ವಿಜಯಪುರ ವಿಭಾಗದ ನಿಯಂತ್ರಣಾಧಿಕಾರಿಗಳಾಗಿ ಮುಂದುವರೆಸಬೇಕೆಂಬುದು ನಮ್ಮ ಒತ್ತಾಯವಾಗಿದೆ.”
– ಅರುಣಕುಮಾರ ಹಿರೇಮಠ
ಅಧ್ಯಕ್ಷರು, ಕೆಎಸ್ಸಾರ್ಟಿಸಿ ಸ್ಟಾಪ್ & ವರ್ಕರ್ಸ್ ಯೂನಿಯನ್, ವಿಜಯಪುರ

