– ಡಾ.ಯಂಕನಗೌಡ ಪಾಟೀಲ
ಕೆಂಭಾವಿ: ಪಟ್ಟಣದ ಪುರಸಭೆಗೆ ಜಿದ್ದಾ ಜಿದ್ದಿನ ಚುನಾವಣೆ ನಡೆದು ಎರಡೂವರೆ ವರ್ಷಗಳು ಕಳೆದಿವೆ, ಆಡಳಿತ ಮಂಡಳಿ ರಚನೆಯಾಗದೆ ಚುನಾಯಿತ ಪ್ರತಿನಿಧಿಗಳಿಗೆ ನಿರಾಶೆ ಮೂಡಿಸಿತ್ತು. ಇದೀಗ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಹಾಗೂ ಪಟ್ಟಣ ಪಂಚಾಯಿತಿ, ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸುವ ಮೂಲಕ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಸಲು ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿ, ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ತಮ್ಮ ತಮ್ಮ ನಾಯಕರ ಮೇಲೆ ಒತ್ತಡ ಹಾಕುವ ತೆರೆಮರೆಯ ಪ್ರಯತ್ನ, ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ನಗರಾಭಿವೃದ್ದಿ ಇಲಾಖೆ ಆದೇಶದನ್ವಯ ಪಟ್ಟಣದ ಪುರಸಭೆ ಅಧ್ಯಕ್ಷ, ಸ್ಥಾನ ಬಿಸಿಎ, ಹಾಗೂ ಉಪಾಧ್ಯಕ್ಷ, ಸ್ಥಾನ ಎಸ್ಸಿ ಮಹಿಳೆಗೆ, ಮೀಸಲು ನಿಗದಿಯಾಗಿದೆ. ಒಟ್ಟು 23, ಸದಸ್ಯರನ್ನು ಹೊಂದಿರುವ ಕೆಂಭಾವಿ ಪುರಸಭೆಯ ಪಕ್ಷಗಳ ಬಲಾಬಲ ಇಂತಿದೆ, ಬಿಜೆಪಿ -13, ಕಾಂಗ್ರೆಸ್ – 08, ಪಕ್ಷೇತರರು – 02, ಈಗಾಗಲೇ ಇಬ್ಬರೂ ಪಕ್ಷೇತರ ಸದಸ್ಯರು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಶಹಾಪುರ ವಿಧಾನ ಸಭೆ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಮತ್ತು ರಾಯಚೂರು ಲೋಕಸಭೆಯ ಸದಸ್ಯರಾದ ಜಿ ಕುಮಾರ ನಾಯಕ ಕಾಂಗ್ರೆಸ್ ಪಕ್ಷದವರಾಗಿದ್ದು. ಕಾಂಗ್ರೆಸ್ ಪಕ್ಷದ ಬಲ ಸದ್ಯ 12 ಕ್ಕೆ ಏರಿಕೆಯಾಗಿ, ಅಧಿಕಾರ ಹಿಡಿಯುವ ತವಕದಲ್ಲಿದೆ, ಮೇಲ್ನೋಟಕ್ಕೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಕಂಡು ಬಂದರೂ, ಕೊನೆಯ ಕ್ಷಣದ ರಾಜಕೀಯ ಚದುರಂಗದಾಟದಲ್ಲಿ, ಏನು ಬೇಕಾದರೂ ಆಗಬಹುದು, ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
Subscribe to Updates
Get the latest creative news from FooBar about art, design and business.
Related Posts
Add A Comment

