ಆರೋಪ ಸತ್ಯಕ್ಕೆ ದೂರ: ಕೆ.ಎಸ್.ಆರ್.ಟಿ.ಸಿ. ಸ್ಟಾಪ್ & ವರ್ಕರ್ಸ್ ಪದಾಧಿಕಾರಿಗಳ ಸ್ಪಷ್ಠನೆ
ವಿಜಯಪುರ: ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ವಿಜಯಪುರ ವಿಭಾಗದ ಪದಾಧಿಕಾರಿಗಳು ಆ.೦೨ ರಂದು ವಿಜಯಪುರ ವಿಭಾಗಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಗಳಾಗಿ ವರ್ಗಾವಣೆಗೊಂಡು ಬಂದಿರುವ ನಾರಾಯಣಪ್ಪ ಕುರಬರ ಇವರ ಮೇಲೆ ಗುರುತರ ಆರೋಪವನ್ನು ಮಾಡಿ ಇವರ ಬಗ್ಗೆ ಇಲ್ಲ ಸಲ್ಲದ ಅನೇಕ ಸುಳ್ಳು ಸಂಗತಿಗಳನ್ನು ನೈಜ ಸಂಗತಿಗಳೆಂದು ಬಿಂಬಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಚಿವರಿಗೆ ನಾರಾಯಣಪ್ಪ ಕುರುಬರ ಇವರ ವಿರುದ್ಧ ಸತ್ಯಕ್ಕೆ ದೂರವಾದ ಗುರುತರ ಆರೋಪವನ್ನು ಮಾಡಿರುತ್ತಾರೆ. ಸದರಿಯವರು ಮಾಡಿದ ಆರೋಪದಲ್ಲಿ ಯಾವುದೇ ತರಹದ ಸತ್ಯಾಂಶ ಇರುವುದಿಲ್ಲ. ವೈಯಕ್ತಿಕ ಲಾಭದ ಆಸೆಗಾಗಿ ತಮಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅನುಕೂಲಕರವಾಗಿಲ್ಲವೆಂಬ ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಅವರ ತೇಜೋವಧೆಗಾಗಿ ಪ್ರಯತ್ನಿಸಿ, ಆ.೦೪ ರಂದು ವಿಜಯಪಥ ದಲ್ಲಿ ಗಂಭೀರವಾದ ಸುಳ್ಳು ಆರೋಪವನ್ನು ಮಾಡಿರುತ್ತಾರೆ.
ನಾರಾಯಣಪ್ಪ ಕುರುಬರ ರವರು ಬೆಳಗಾವಿಯ ೨೦೨೧ರ ಲೋಕಸಭಾ ಉಪಚುನಾವಣೆಯಲ್ಲಿ ದೇಶದಾದ್ಯಂತ ಗಂಭೀರವಾದ ಮಹಾಮಾರಿ ಕೋರೋನಾ-೧೯ ರೋಗ ಆವರಿಸಿರುವಾಗ ರಸ್ತೆ ಸಾರಿಗೆ ಸಂಸ್ಥೆಯ ಯಾವ ಚಾಲಕ-ನಿರ್ವಾಹಕರು ಕರ್ತವ್ಯ ನಿರ್ವಹಿಸಲು ಒಪ್ಪದಿರುವ ಸಂದರ್ಭದಲ್ಲಿ ಹಾಗೂ ಆವಾಗ ಕಾರ್ಮಿಕರ ಬೇಡಿಕೆಗಳಿಗಾಗಿ ಮುಷ್ಕರ ಚಾಲ್ತಿಯಲ್ಲಿದ್ದರೂ ಸಹಿತ ಅವರ ಸತತ ಪ್ರಯತ್ನದಿಂದ ಸುಮಾರು ೨೮೭ ವಾಹನಗಳನ್ನು ವಿಜಯಪುರ ವಿಭಾಗದಿಂದ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಒದಗಿಸಿಕೊಟ್ಟು, ಕರ್ನಾಟಕ ಸರಕಾರಕ್ಕೂ ಹಾಗೂ ರಸ್ತೆ ಸಾರಿಗೆ ಸಂಸ್ಥೆಗೂ ಒಳ್ಳೆಯ ಹೆಸರು ತರುವಲ್ಲಿ ಶ್ರಮಿಸಿರುತ್ತಾರೆ. ಅಲ್ಲದೆ ಕೋರೋನಾ ಮಹಾಮಾರಿಯ ಸಮಯದಲ್ಲಿ ನಡೆದ ಶ್ರೀಶೈಲಂ ಜಾತ್ರೆಯಲ್ಲಿ ಪ್ರಯಾಣಿಕರ ಹಿತವನ್ನು ಗಮನದಲ್ಲಿರಿಸಿಕೊಂಡು ವಿಜಯಪುರ ವಿಭಾಗದ ಕಾರ್ಮಿಕರ ಮನವೊಲಿಸಿ ಶ್ರೀಶೈಲಂ ಜಾತ್ರೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಶ್ರೀ ನಾರಾಯಣಪ್ಪ ಕುರುಬರ ರವರಿಗೆ ಸಲ್ಲುತ್ತದೆ ಹಾಗೂ ಕೋರೋನಾ ಸಮಯದಲ್ಲಿ ವಿಜಯಪುರ ನಗರದಲ್ಲಿ ಕೆಲಸಕ್ಕಾಗಿ ವಲಸೆ ಬಂದಿರುವ ವಿವಿಧ ರಾಜ್ಯದ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸುವ ಗುರುತರ ಕೆಲಸವನ್ನು ನಿರ್ವಹಿಸಿರುತ್ತಾರೆ.
ಸದರಿಯವರು ಸಾರಿಗೆ ಸಂಸ್ಥೆ ಹಾಗೂ ಕಾರ್ಮಿಕರ ಹಿತಚಿಂತನೆಯನ್ನು ಗಮನದಲ್ಲಿರಿಸಿಕೊಂಡು ಒಳ್ಳೆಯ ಕಾರ್ಯಗಳನ್ನು ಮಾಡುವಲ್ಲಿ ನಿರತರಾಗಿದ್ದರೂ ಸಹಿತ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಹಾಮಂಡಳ ವಿಜಯಪುರ ವಿಭಾಗದವರು ಇವರ ಮೇಲೆ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸದೇ ನಾರಾಯಣಪ್ಪ ಕುರುಬರ ಇವರನ್ನು ವಿಜಯಪುರ ವಿಭಾಗದ ನಿಯಂತ್ರಣಾಧಿಕಾರಿಗಳಾಗಿ ಮುಂದುವರೆಸಬೇಕೆಂದು ಕೆ.ಎಸ್.ಆರ್.ಟಿ.ಸಿ. ಸ್ಟಾಪ್ & ವರ್ಕರ್ಸ ಪದಾಧಿಕಾರಿಗಳಾದ ಎಂ.ಎನ್.ನದಾಫ, ಎಂ.ಎಚ್. ಮಾರನಬಸರಿ, ಶರಣಪ್ಪ ಅಥಣಿ, ಬಿ.ಎಂ.ತೇರದಾಳ, ಆರ್.ಆರ್.ನದಾಫ, ಎಸ್.ಡಿ.ಪಟ್ಟಣಶೆಟ್ಟಿ, ಅಧ್ಯಕ್ಷ ಅರುಣಕುಮಾರ ಹಿರೇಮಠ, ಮುಸ್ತಾಕ ಹುಂಡೇಕಾರ, ಯಮನಪ್ಪ. ಚಲವಾದಿ, ಜಿ.ಜಿ.ಬಿರಾದಾರ, ಭೀಮಪ್ಪ ಗುಳೇದ, ರಾಚಪ್ಪ ಹೂಗಾರ, ಶ್ರೀಮತಿ ಜಯಶ್ರೀ ಹೂಗಾರ, ಶ್ರೀಮತಿ ಸುಜ್ಞಾನಿ ಹಳ್ಳಿ, ಶ್ರೀ ಚಂದು ಬರಮನಗೋಳ, ಮುಂತಾದವರು ತಿಳಿಸಿರುತ್ತಾರೆಂದು ಆಯ್.ಆಯ್.ಮುಶ್ರಿಫ್, ಪ್ರಧಾನ ಕಾರ್ಯದರ್ಶಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

