ಬಸವನಬಾಗೇವಾಡಿ: ಇಂದು ಮರಗಳ ಸಂಖ್ಯೆ ಕಡಿಮೆಯಾಗಿರುವದರಿಂದ ಉಷ್ಣತೆ ಪ್ರಮಾಣ ಹೆಚ್ಚಳವಾಗಿದೆ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡುವದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಿವ್ಹಿಲ್ ನ್ಯಾಯಾಧೀಶೆ ತೇಜಶ್ವಿನಿ ಸೊಗಲದ ಹೇಳಿದರು.
ತಾಲೂಕಿನ ಇವಣಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ, ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮರ-ಗಿಡಗಳನ್ನು ನಾಶ ಮಾಡುತ್ತಿರುವದರಿಂದ ಬಿಸಿಲಿನ ತೀವ್ರತೆ ಹೆಚ್ಚಳವಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಜಮೀನಿನ ಬದುಗಳಲ್ಲಿ ಮರ-ಗಿಡಗಳನ್ನು ಬೆಳೆಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಮುಂದೆಯೂ ಮರ-ಗಿಡಗಳನ್ನು ಬೆಳೆಸುವಂತಾಗಬೇಕು. ಮರಗಳನ್ನು ಬೆಳೆಸುವದರಿಂದ ಎಲ್ಲರಿಗೂ ಆಮ್ಲಜನಕ ಸಿಗುವ ಮೂಲಕ ಎಲ್ಲರೂ ಆರೋಗ್ಯವಂತರಾಗಿ ಇರಲು ಸಾಧ್ಯ.ದೇವರ ಸೇವೆಯ ಜೊತೆಗೆ ಸಮಾಜದಲ್ಲಿ ತೊಡಗಿ ಗಿಡಮರಗಳನ್ನು ಬೆಳೆಸಿದಾಗ ದೇವರಿಗೆ ಸಂತೋಷವಾಗುತ್ತದೆ. ಪ್ರತಿಯೊಬ್ಬರೂ ಆರೋಗ್ಯವಂತರಾಗಿ ನೆಮ್ಮದಿ ಜೀವನ ಮಾಡಲು ಸಾಧ್ಯ ಎಂದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಗಿಡ-ಮರಗಳನ್ನು ಕಾಪಾಡಿಕೊಳ್ಳಬೇಕು. ಜಲಮಾಲಿನ್ಯವಾಗದಂತೆ ನೋಡಿಕೊಳ್ಳುವ ಮೂಲಕ ಜಲಸಂಪನ್ಮೂಲಗಳನ್ನು ರಕ್ಷಿಸಬೇಕು.ಸೌರ ವಿದ್ಯುತ್ ಬಳಕೆ ಹೆಚ್ಚು ಮಾಡಬೇಕಿದೆ. ಪರಿಸರ ಸಂರಕ್ಷಣೆಯಲ್ಲಿ ಸರ್ಕಾರದೊಂದಿಗೆ ಜನರ ಪಾತ್ರವೂ ತುಂಬಾ ಅಗತ್ಯವಿದೆ ಎಂದರು.
ಹಿರಿಯ ವಕೀಲ ಜಿ.ಬಿ.ಬಾಗೇವಾಡಿ ಮಾತನಾಡಿ, ಜಿಲ್ಲೆಯಲ್ಲಿ ಪರಿಸರ ದಿನಾಚರಣೆಯಂದು ಪ್ರತಿವರ್ಷ ಸಸಿಗಳನ್ನು ನೆಡಲಾಗುತ್ತದೆ. ಇದರಲ್ಲಿ ಕೆಲವು ಸಸಿಗಳು ಮಾತ್ರ ಬೆಳೆಯುತ್ತವೆ. ಜನರ ನಿರ್ಲಕ್ಷ್ಯ, ಕಾಳಜಿ ವಹಿಸದೇ ಇರುವದರಿಂದಾಗಿ ಉಳಿದ ಉಳಿದ ಸಸಿಗಳು ಬೆಳೆಯುವುದಿಲ್ಲ. ಜನರು ಪರಿಸರ ಕಾಳಜಿ ವಹಿಸಬೇಕು. ಅದೇ ಮಂಗಳೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ನಾವು ಎಲ್ಲಿ ನೋಡಿದರೂ ಮರ-ಗಿಡಗಳನ್ನು ನೋಡುತ್ತೇವೆ. ಅಲ್ಲಿನ ಜನರಿಗೆ ಪರಿಸರದ ಪ್ರಜ್ಞೆ ಇರುವದರಿಂದಾಗಿ ಮರ-ಗಿಡಗಳನ್ನು ಸಂರಕ್ಷಿಸಿ ಹೆಚ್ಚು ಬೆಳೆಯುವಂತೆ ಮಾಡುತ್ತಾರೆ. ಅವರು ಸುಖಕರ, ಆರೋಗ್ಯವಾದ ಬದುಕನ್ನು ನಡೆಸುತ್ತಾರೆ. ಇಂದಿನ ಯುವಜನಾಂಗ ಪರಿಸರದ ಮಹತ್ವ ಅರಿತುಕೊಂಡು ಪರಿಸರ ಸಂರಕ್ಷಣೆ ಮಾಡಬೇಕು. ಹೆಚ್ಚು ಮರ-ಗಿಡಗಳು ಬೆಳೆಯುವಂತೆ ನೋಡಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಆರ್.ಎ.ಇನಾಮದಾರ ಮಾತನಾಡಿ, ನಮ್ಮ ಶಾಲೆಯಲ್ಲಿ ಪರಿಸರ ದಿನಾಚರಣೆ ಹಮ್ಮಿಕೊಂಡಿರುವದು ನಮ್ಮೆಲ್ಲರಿಗೂ ಸಂತಸ ತಂದಿದೆ. ಶಾಲೆಯ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಒಂದೊಂದು ಸಸಿಗಳನ್ನು ದತ್ತು ಪಡೆದುಕೊಂಡು ಶಾಲಾ ಆವರಣದಲ್ಲಿ ಬೆಳೆಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಇರ್ಶಾದಅಹ್ಮದ ನೇವಾರ, ಉಪವಲಯ ಅರಣಾಧಿಕಾರಿ ಎಸ್.ವ್ಹಿ. ಘೋರ್ಪಡೆ, ಸಹಾಯಕಿ ಸರ್ಕಾರಿ ಅಭಿಯೋಜಕಿ ಬಿ.ಎಸ್.ಬೆಳ್ಳೂಳ್ಳಿ, ವಕೀಲರಾದ ಜಿ.ಆರ್.ಬೀಳಗಿ, ಎಸ್.ಎಲ್.ಕಳ್ಳಿಗುಡ್ಡ, ನರಲಸಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗನಗೌಡ ಬಿರಾದಾರ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಪೂಜಾರಿ, ಗ್ರಾಪಂ ಸದಸ್ಯರಾದ ಶ್ರೀಕಾಂತಪ್ಪ ಹಿರೇಕುರಬರ, ರೇಣುಕಾ ಚವನಬಾವಿ, ಗಸ್ತು ವನಪಾಲಕರಾದ ಎಸ್.ಕೆ.ಹಚ್ಯಾಳ, ಎಂ.ಎಸ್.ಖಾನಾಪುರ ಇತರರು ಇದ್ದರು. ಎಚ್.ಸಿ.ಹಳ್ಳಿ ಸ್ವಾಗತಿಸಿದರು. ಶ್ರೀಕಾಂತ ಡಿ.ಎಂ.ನಿರೂಪಿಸಿದರು. ಪಿ.ಐ. ಹಿರೇಮಠ ವಂದಿಸಿದರು.
Subscribe to Updates
Get the latest creative news from FooBar about art, design and business.
ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ
Related Posts
Add A Comment

