ವಿಜಯಪುರ: ಮನರೇಗಾ ಯೋಜನೆಗಳ ಮೂಲಕ ಹಮ್ಮಿಕೊಂಡ ಚಟುವಟಿಕೆಗಳು ಬರಪೀಡಿತ ಪ್ರದೇಶವಾದ ವಿಜಯಪುರ ಜಿಲ್ಲೆಯಲ್ಲಿ ಜನ ಜಾನುವಾರಗಳಿಗೆ, ಅಂತರ್ಜಲ ವೃದ್ಧಿಗೆ ನೀರಿನ ಕೊರತೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿವೆ.
ಈ ವರ್ಷ ಜಿಲ್ಲೆ ತೀವ್ರ ಬರಗಾಲಕ್ಕೆ ತುತ್ತಾಗಿರುವುದರಿಂದ ಮನರೇಗಾ ಯೋಜನೆಯಡಿ ಮಳೆ ನೀರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿ ಬೋರವೆಲ್ ಗಳಿಗೆ ರೀಚಾರ್ಜ್ ಪಿಟ್, ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ಹೊಸದಾಗಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳ ಅನುಷ್ಟಾನಕ್ಕೆ ಆದೇಶಿಸಲಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಾದ ಕೆರೆ, ನಾಲಾ, ಹಳ್ಳಗಳಲ್ಲಿ ಮತ್ತು ಕೃಷಿ ಹೊಂಡ, ಬದುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಶಿ ಆನಂದ ತಿಳಿಸಿದ್ದಾರೆ.
ಈ ಬೇಸಿಗೆಯಲ್ಲಿ ಹೆಚ್ಚು ಮಾನವ ದಿನಗಳನ್ನು ಸೃಷ್ಟಿ ಮಾಡಿ ಕೂಲಿಕಾರರ ಸಂಕಷ್ಟ್ಟಕ್ಕೆ ನರೇಗಾ ಯೋಜನೆಯಲ್ಲಿ ಸ್ಪಂದಿಸಲಾಗಿದೆ. ಕೂಲಿಕಾರರಿಗೆ ಕೆಲಸ ನೀಡುವುದರ ಜೊತೆಗೆ ಕೆರೆ, ನಾಲಾ, ಹಳ್ಳ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣಗಳಂತಹ ಜಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಇತ್ತಿಚೇಗೆ ಸುರಿದ ಮಳೆಯಿಂದ ನೀರು ನಿಂತು ಜನ, ಜಾನುವಾರಗಳಿಗೆ ನೀರಿನ ಸಮಸ್ಯೆಯನ್ನು ನೀಗಿಸುವಲ್ಲಿ ಸಹಕಾರಿಯಾಗಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ೨೦೨೪-೨೫ ನೇ ಸಾಲಿಗೆ ವಿಜಯಪುರ ಜಿಲ್ಲೆಗೆ ೪೨ ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಇದೂವರೆಗೂ ೬.೬೪ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ, ಇಲ್ಲಿಯವರೆಗು ೫೯,೬೪೮ ಕೂಲಿಕಾರರು ಕೆಲಸ ನಿರ್ವಹಿಸಿರುತ್ತಾರೆ ಮತ್ತು ದಿನವೊಂದಕ್ಕೆ ರೂ.೩೪೯ ಕೂಲಿ ನೀಡಲಾಗುತ್ತಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ದೇಶಗಳು:
ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ೧೦೦ ದಿನಗಳಿಗೆ ಕಡಿಮೆ ಇಲ್ಲದಂತೆ ಅಕುಶಲ ಉದ್ಯೋಗ ಒದಗಿಸುವುದು. ದೀರ್ಘಕಾಲಿಕ ಬಾಳಿಕೆ ಬರುವ ಆಸ್ತಿಗಳ ಸೃಜನೆಯೊಂದಿಗೆ ಗ್ರಾಮೀಣರ ಜೀವನೋಪಾಯಕ್ಕೆ ಅವಕಾಶಗಳನ್ನು ಕಲ್ಪಿಸುವುದು. ಸ್ವಯಂ ಪ್ರೇರಿತವಾಗಿ ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಚಿತಪಡಿಸುವುದು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸುವುದು.
ಮಹಿಳಾ ಭಾಗವಹಿಸುವಿಕೆ ಗುರಿ:
ಈ ವರ್ಷ ಮಹಿಳಾ ಭಾಗವಹಿಸುವಿಕೆ ೫೬.೫೧%ರಷ್ಟು ಆಗಿದೆ. ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಬರಗಾಲ ಘೋಷಣೆ ಆಗಿರುವುದರಿಂದ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಯಾವುದೇ ಉದ್ಯೋಗ ದೊರೆಯದೇ ಇರುವ ಕಾರಣ ಗ್ರಾಮೀಣ ಜನರಿಗೆ ಮುಖ್ಯವಾಗಿ ಮಹಿಳೆಯರಿಗೆ ಮನವರಿಕೆ ಮಾಡುವ ಮೂಲಕ ನರೇಗಾ ಯೋಜನೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸಲಾಗುತ್ತಿದೆ. ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಕಾಮಗಾರಿ ಸ್ಥಳದಲ್ಲಿ ಸಿಗುವ ಸೌಲಭ್ಯಗಳು:
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ. ನೆರಳಿನ ವ್ಯವಸ್ಥೆ. ಪ್ರಥಮ ಚಿಕಿತ್ಸಾ ವ್ಯವಸ್ಥೆ. ಶಿಶುಪಾಲನಾ ವ್ಯವಸ್ಥೆ.
“ಕೂಸಿನ ಮನೆ” ಎಂಬ ಶೀರ್ಷಿಕೆಯಡಿ ಶಿಶುಪಾಲನಾ ಕೇಂದ್ರ:
ವಿಜಯಪುರ ಜಿಲ್ಲೆಯಲ್ಲಿ ೧೬೩ ಕೂಸಿನ ಮನೆಗಳನ್ನು ಪ್ರಾರಂಭಿಸಲು ಗುರಿ ನಿಗದಿಪಡಿಸಲಾಗಿದೆ. ನರೇಗಾ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರ ಕಂದಮ್ಮಗಳ ಆರೈಕೆಗಾಗಿ ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಆರಂಭಿಸಿರುವ “ಕೂಸಿನ ಮನೆ”ಯೋಜನೆಗೆ ಎಲ್ಲಿಲ್ಲದ ಬೇಡಿಕೆ ಬಂದಿರುತ್ತದೆ.
ಈ ಕೂಸಿನ ಮನೆಗಳಲ್ಲಿ ೩ ವರ್ಷದೊಳಗಿನ ಮಕ್ಕಳನ್ನು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೂಲಿ ಕಾರ್ಮಿಕ ತಾಯಂದಿರ ಜೊತೆಗೆ ಬರುವ ಮಕ್ಕಳನ್ನು ಕೂಸಿನ ಮನೆಗಳಲ್ಲಿ ಬಿಟ್ಟು ಹೋಗಬಹುದು. ಮಕ್ಕಳನ್ನು ನೋಡಿಕೊಳ್ಳಲು ಸುಶಿಕ್ಷಿತ ನರೇಗಾ ಕಾರ್ಮಿಕರನ್ನು ಆರೈಕೆದಾರರಾಗಿ(ಕೇರ್ ಟೇಕರ್ಸ) ನೇಮಿಸಲಾಗಿದೆ.
ಕೆಲಸದಲ್ಲಿ ಶೇ.೫೦ರಷ್ಟು ರಿಯಾಯತಿ ಮತ್ತು ಪೂರ್ಣ ಕೂಲಿ:
ಬಾಣಂತಿ ಮಹಿಳೆಯರಿಗೆ, ಗರ್ಭಿಣಿಯರಿಗೆ, ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ನರೇಗಾ ಕೂಲಿಯಲ್ಲಿ ಅರ್ಧದಷ್ಟು ಕೆಲಸ ಪೂರ್ತಿ ಕೂಲಿ ನೀಡಲಾಗುತ್ತದೆ. ಬೇಸಿಗೆ ಅವಧಿಯಲ್ಲಿ ಏಪ್ರಿಲ್ ಮಾಹೆಯಲ್ಲಿ ನಲ್ಲಿ ಶೇ.೩೦ರಷ್ಟು ಮೇ ಮಾಹೆಯಲ್ಲಿ ಶೇ.೩೦ರಷ್ಟು ಮತ್ತು ಜೂನ್ ಮಾಹೆಯಲ್ಲಿ ಶೇ.೨೦ರಷ್ಟು ಕೆಲಸದಲ್ಲಿ ರಿಯಾಯತಿ ಸಹ ಇರುತ್ತದೆ.
ಮಹಿಳೆಯವರ ಆರ್ಥಿಕ ಸ್ವಾವಲಂಬನೆಗೆ ಆಸರೆ:
ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಕುಟುಂಬದಲ್ಲಿ ಸಣ್ಣ-ಪುಟ್ಟ ಅವಶ್ಯಕತೆಗಳಿಗೂ ಬೇರೆಯವರ ಮೇಲೆ ಅವಲಂಬನೆಯಾಗುವ ಪರಿಸ್ಥಿತಿ ಇದೆ. ಆದರೆ, ನರೇಗಾ ಯೋಜನೆಯು ಜಿಲ್ಲೆಯ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಭಿಯಾಗಲು ದಾರಿ ಒದಗಿಸಿದೆ. ತಮ್ಮ ಸ್ವಂತ ಖರ್ಚಿಗಷ್ಟೆ ಅಲ್ಲದೇ ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚು ವೆಚ್ಚಗಳಿಗೂ ಸಹ ಗ್ರಾಮೀಣ ಮಹಿಳೆಯರು ಮುಂದಾಗಿದ್ದಾರೆ ಮತ್ತು ವಿಶ್ವಾಸದಿಂದ ದುಡಿಮೆ ಮಾಡುತ್ತಿದ್ದಾರೆ.
೨೦೨೩-೨೪ ನೇ ಸಾಲಿನ ಸಾಧನೆ:
ಗುರಿ: ೪೪ ಲಕ್ಷ ಮಾನವ ದಿನ ಸಾಧನೆ: ೪೩.೮೭ ಲಕ್ಷ ಮಾನವ ದಿನ /ಶೇಕಡಾವಾರು: ೯೯.೭೨%
೨೦೨೪-೨೫ನೇ ಸಾಲಿನ ಸಾಧನೆ: (ದಿನಾಂಕ ೩೦.೫.೨೦೨೪)
ವಾರ್ಷಿಕೆ ಗುರಿ: ೪೨ ಲಕ್ಷ ಮಾನವ ದಿನ ಗುರಿ: ೭.೦೮ ಲಕ್ಷ ಮಾನವ ದಿನ (ಮೇ ೨೦೨೪ ಅಂತ್ಯಕ್ಕೆ)
ಸಾಧನೆ: ೬.೬೪ ಲಕ್ಷ ಮಾನವ ದಿನ/ಶೇಕಡಾವಾರು: ೯೩.೭೯
ಮಹಿಳಾ ಭಾಗವಹಿಸುವಿಕೆ: ೫೬.೫೧% ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಎಲ್ಲ ಯೋಜನೆಗಳ ಮಾಹಿತಿಗಾಗಿ, ಏಕೀಕೃತ ಸಹಾಯವಾಣಿ ಸಂಖ್ಯೆ: ೮೨೭೭೫೦೬೦೦೦ ಹಾಗೂ ಜಿಲ್ಲಾ ಪಂಚಾಯತಿಯ ನರೇಗಾ ಸಹಾಯವಾಣಿ ಸಂಖ್ಯೆ: +೯೧ ೯೪೮೦೮ ೩೧೬೯೯ ಗೆ ಸಂಪರ್ಕಿಸಬಹುದು ಮತ್ತು ತಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

