ವರ್ಷದಿಂದ ಸ್ಥಗಿತಗೊಂಡ ರಸ್ತೆ ಕಾಮಗಾರಿ | ಪರದಾಡುತ್ತಿರುವ ಸಾರ್ವಜನಿಕರು
ಚಿಮ್ಮಡ: ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆಯ ಜಮಖಂಡಿ ಉಪಕಾಲುವೆಯಿಂದ ಚಿಮ್ಮಡ-ಜಗದಾಳ ಹೊರವಲಯ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಬೇಕೆಂದು ಈ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.
ತಗ್ಗು ದಿನ್ನೆಗಳಿಂದ ಕೂಡಿದ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ ಹಿನ್ನೆಲೆ ಕಳೆದ ವರ್ಷವೇ ಗುಂಪು ಕಾಮಗಾರಿಯೊಂದಿಗೆ ಸೇರಿಸಿ ಟೆಂಡರ್ ಮಾಡಲಾಗಿತ್ತು. ಗುತ್ತಿಗೆದಾರರು ಕೂಡ ೯೦೦ ಮೀ. ಉದ್ದದ ಈ ರಸ್ತೆಗೆ ದಪ್ಪ ಜಲ್ಲಿ ಸುರಿಯುವ ಮೂಲಕ ಕಾಮಗಾರಿಯನ್ನು ಪ್ರಾರಂಭಿಸಿದ್ದರು, ಆದರೆ ಕಳೆದ ಒಂದು ವರ್ಷದಿಂದ ಯಾವುದೇ ಚಟುವಟಿಕೆ ಇಲ್ಲದೇ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಈ ಜಲ್ಲಿ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವುದು ದುಸ್ತರವಾಗಿದೆ. ಈ ಭಾಗದ ರೈತರು ತಮ್ಮ ಹೊಲ ಗದ್ದೆಗಳಿಗೆ ತೆರಳಲು ಏಕೈಕ ಮಾರ್ಗ ಇದಾಗಿದ್ದರಿಂದ ಕೃಷಿಕರ ಗೋಳು ಹೇಳತೀರದು, ಅಲ್ಲದೇ ಸೀಮಿ ಲಕ್ಕವ್ವದೇವಿ ದೇವಸ್ಥಾನಕ್ಕೆ, ಹಾಗೂ ಪ್ರಾಥಮಿಕ ಶಾಲೆಗೆ ಬರಲು ಈ ಮಾರ್ಗವನ್ನೇ ಅವಲಂಭಿಸಿರುವುದರಿಂದ ಈ ಜಲ್ಲಿ ತುಂಬಿದ ಈ ರಸ್ತೆಯಲ್ಲಿ ಹಲವಾರು ವಿದ್ಯಾರ್ಥಿಗಳು ಬಿದ್ದು ಗಾಯ ಮಾಡಿಕೊಂಡಿದ್ದಾರೆ, ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.
” ಈ ಕಾಮಗಾರಿಯ ಟೆಂಡರ್ ಪಡೆದ ಗುತ್ತಿಗೆದಾರ ಇಲಾಖೆಯ ಸಂಪರ್ಕಕ್ಕೆ ಸಿಗುತ್ತಿಲ್ಲ, ಈಗಾಗಲೇ ಅವರಿಗೆ ಕಾಮಗಾರಿ ಪ್ರಾರಂಭಿಸುವಂತೆ ಲಿಖಿತ ನೋಟೀಸ್ ನೀಡಲಾಗಿದ್ದು ಸರಕಾರದ ಮಾರ್ಗಸೂಚಿ ಅನ್ವಯ ಈ ಗುತ್ತಿಗೆಯನ್ನು ರದ್ದು ಗೊಳಿಸಿ ಮರುಟೆಂಡರ್ ನೊಂದಿಗೆ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.”
– ಚೇತನ್ ಅಬ್ಬಿಗೇರ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿಎಲ್ಬಿಸಿ ರಬಕವಿ.
