ಚಡಚಣ: ನಾನು, ನೀನು, ಆನು, ತಾನು ಎಂಬ ನಾಲ್ಕೇ ನಾಲ್ಕು ಅದ್ವೈತ ಸಿದ್ದಾಂತದ ಆಧ್ಯಾತ್ಮಿಕ ಪದಗಳನ್ನೊಳಗೊಂಡತೆ ಸರಳ ಹಾಗೂ ಸರ್ವಕಾಲಕ್ಕೂ ಬಾಳುವಂತಹ ಕವನಗಳನ್ನು ಬರೆದು ಶಬ್ದಗಾರುಡಿಗ ಎಂದು ಪ್ರಖ್ಯಾತಿ ಪಡೆದವರು ನಾಕುತಂತಿ ಖ್ಯಾತಿಯ ವರಕವಿ ದ.ರಾ.ಬೇಂದ್ರೆಯವರು ಬೆಂದು ಕವಿಯಾದರು ಎಂದು ಪಿಡಿಜೆ ಪದವಿ ಪೂರ್ವ ಕಾಲೇಜಿನ ಕನ್ನಡ ಉಪಾನ್ಯಾಸಕ ಸಂತೋಷ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ ವರಕವಿ ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ಅವರು, ಅಂಬಿಕಾತನಯ ದತ್ತ ಎಂಬ ಕಾವ್ಯ ನಾಮದಿಂದ ಕವನಗಳನ್ನು ಬರೆದು ಜನಸಾಮಾನ್ಯರಿಗೂ ತಿಳಿಯುವಂತೆ ಮಾಡಿದರು. ಗರಿ, ನಾದಲೀಲೆ, ನಾಕುತಂತಿ, ಅರಳು ಮರಳು, ಉಯ್ಯಾಲೆ, ಸಖೀಗೀತ ಮುಂತಾದ ಪ್ರಸಿದ್ಧ ಕವನ ಸಂಕಲಗಳನ್ನು ಬರೆದಿದ್ದಾರೆ. ಅವರ ನರಬಲಿ ಕವನ ಬ್ರಿಟಿಷ್ ಆಡಳಿತವನ್ನು ಪ್ರಶ್ನಿಸುವಂತೆ ಇದ್ದುದರಿಂದ ಅವರನ್ನು ಸೆರೆಮನೆಗೆ ಹಾಕಲಾಯಿತು ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ, ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು, ಬಳಸಿಕೊಂಡೆವು ಅದನು ಅದಕು ಇದಕು ಎದಕು’ ಕವನದ ತಿರುಳು ಬೆಂದು ಬೇಂದ್ರೆಯಾದ ಒಲವಿನ ಆಶಯವನ್ನು ಧ್ವನಿಸಿದರೆ ‘ಸಖೀ ಗೀತ’ವಂತೂ ಬದುಕಿನ ಬವಣೆಯ ಮಹಾಕಾವ್ಯವೇ ಸರಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಬಸವರಾಜ ಯಕಂಚಿ ಮಾತನಾಡಿ, ಬೇಂದ್ರೆಯವರು ಹೇಳಿದ ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂಬ ಮಾತು ಕವಿ ಹಾಗೂ ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಯಿತು. ಅವರ ನಾಕುತಂತಿ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಆದ್ದರಿಂದ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಕವನಗಳನ್ನು ಓದುವ ಹಾಗೂ ಬರೆಯುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಆಡಳಿತಾಧಿಕಾರಿ ಡಾ.ಎಸ್.ಎಸ್.ಚೋರಗಿ ಮಾತನಾಡಿ ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಅದರ ಸವಿಯನು ಹನಿಸು ಎನಗೆ’ ಎಂದು ಬೇಂದ್ರೆಯವರ ಕಾವ್ಯದ ಸವಿಯನ್ನು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಸ್.ಬಿ.ರಾಠೋಡ ಮಾತನಾಡಿ, ಶ್ರೇಷ್ಠ ಸಾಹಿತ್ಯ ಸಂಪತ್ತನ್ನು ನಿರ್ಮಾಣ ಮಾಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ಬೇಂದ್ರೆಯವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಎಂ.ಕೆ. ಬಿರಾದಾರ, ಪ್ರೊ. ಬಸವರಾಜ ಯಳ್ಳೂರ, ಪ್ರೊ. ಮಯೂರ್ ಕುದುರಿ, ಪ್ರೊ. ಮುರುಗೇಶ್ ಕೆ. ಎಂ., ಪ್ರೊ. ಎಸ್. ಎಸ್. ವಾಲಿಕಾರ ಪ್ರೊ. ಪೂಜಾ ಬುರುಡ, ಪ್ರೊ.ವಿನೋದ ಘೆವಂಡೆ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕು. ರಾಜಶ್ರೀ ಹೊನಮೋರೆ ಪ್ರಾರ್ಥಿಸಿದರೆ, ಪ್ರೊ.ಮಹಾಂತೇಶ ಜನವಾಡ ಸ್ವಾಗತಿಸಿದರು. ಪ್ರೊ. ಎಸ್. ಎಫ್. ಬಿರಾದಾರ ನಿರೂಪಿಸಿದರೆ, ಡಾ. ಎಸ್. ಎಸ್. ದೇಸಾಯಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

