ಮುದ್ದೇಬಿಹಾಳ: ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಟಾನಗೊಂಡ ಗೋಕಟ್ಟೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋಕಟ್ಟೆ ನಿರ್ಮಾಣದ ಅನುದಾನ ಬಳಕೆ, ಪ್ರಗತಿ ಹಾಗೂ ಸಾರ್ವಜನಿಕ ಉಪಯೋಗ ಕುರಿತು ಮಾಹಿತಿ ಪಡೆದ ಅವರು, ಕೆರೆ ಅಂಗಳದಲ್ಲಿ ಸಂಗ್ರಹವಾಗುವ ಮಳೆ ನೀರಿನಿಂದ ಸುತ್ತಲಿನ ರೈತರಿಗೆ, ಜಾನುವಾರು ಹಾಗೂ ಪಶು-ಪಕ್ಷಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಕಾಮಗಾರಿ ಅನುಷ್ಟಾನ ಮಾಡಲು ಆಯ್ಕೆ ಮಾಡಿದ ಸ್ಥಳ ಹಾಗೂ ಕಾಮಗಾರಿ ಗುಣಮಟ್ಟ ಮತ್ತು ಗೋಕಟ್ಟೆ ಸುತ್ತಲಿನ ಹಸೀಕರಣದ ಕುರಿತು ಸಿಇಒ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಗೋಕಟ್ಟೆಗಳ ನಿರ್ಮಾಣ ಕಾಮಗಾರಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳಬೇಕು. ಜಲಸಂರಕ್ಷಣೆಗೆ ಆದ್ಯತೆ ನೀಡಿ ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಅಳವಡಿಸಿ ಎಂದು ಕೆಲವು ತಾಂತ್ರಿಕ ಸಲಹೆಗಳನ್ನು ನೀಡಿದರು.
ಈ ವೇಳೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯುವರಾಜ ಹನಗಂಡಿ, ತಾ.ಪಂ. ಸಹಾಯಕ ನಿರ್ದೆಶಕರು (ಪಂ.ರಾ.) ಖುಬಾಸಿಂಗ್ ಜಾಧವ್, ಜಿಲ್ಲಾ ಪಂಚಾಯತ ಎಡಿಪಿಸಿ ಪೃಥ್ವಿರಾಜ ಪಾಟೀಲ, ತಾಂತ್ರಿಕ ಸಂಯೋಜಕ ಶಂಕರಗೌಡ ಯಾಳವಾರ, ತಾ.ಪಂ.ನರೇಗಾ ತಾಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ, ತಾಂತ್ರಿಕ ಸಹಾಯಕ ಮಹಮ್ಮದ್ ಸೊಯೆಲ್ ಹಾಗೂ ಗ್ರಾ.ಪಂ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

