ಸಿಂದಗಿಯ ಕಲಬುರ್ಗಿ ಫೌಂಡೇಶನ್ನಿಂದ ‘ವಚನ ಹಾಗೂ ‘ಸಾಹಿತ್ಯಶ್ರೀ’ ಪ್ರಶಸ್ತಿ ಘೋಷಣೆ
ಸಿಂದಗಿ: ಕಲಬುರ್ಗಿ ಫೌಂಡೇಶನ್ ಸಮಾಜೋಧ್ದಾರ್ಮಿಕ, ಶೈಕ್ಷಣಿಕ, ವೈಚಾರಿಕ ಚಟುವಟಿಕೆಗಳನ್ನು ಮಾಡುತ್ತಾ, ಶರಣರ ತತ್ವಸಿದ್ಧಾಂತಗಳನ್ನು ಜನಸಾಮಾನ್ಯರಲ್ಲಿ ಪ್ರಸಾರ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಗ್ರಾಮೀಣ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಪೂರಕವಾದ ಗ್ರಂಥ, ನಿರ್ಗತಿಕರ ಕಷ್ಟಗಳಿಗೆ ಸ್ಪಂದಿಸುತ್ತ ತನ್ನ ಮಿತಿಯಲ್ಲಿ ಕೆಲಸ ಮಾಡುತ್ತಾ ಬಂದಿದೆ. ಇದರ ಜೊತೆಗೆ ಫೌಂಡೇಶನ್ ಕಳೆದ ವರ್ಷದಿಂದ ಮಹಿಳಾ ಸಾಧಕರಿಗೆ ‘ವಚನ ಹಾಗೂ ಪುರುಷ ಸಾಧಕರಿಗೆ ‘ಸಾಹಿತ್ಯಶ್ರೀ ಎನ್ನುವ ಪುರಸ್ಕಾರವನ್ನು ನೀಡಲು ಪ್ರಾರಂಭಿಸಿದೆ ಎಂದು ಕಲಬುರಗಿ ಫೌಂಡೇಶನ್ ಅಧ್ಯಕ್ಷ ಶಿವಾನಂದ ಕಲಬುರಗಿ ಹೇಳಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸಕ್ತ ಸಾಲಿಗೆ ವಿಜಯಪುರದ ಡಾ.ಎಂ.ಎಸ್.ಮದಭಾವಿ ‘ಸಾಹಿತ್ಯಶ್ರೀ ಹಾಗೂ ಕಲಬುರ್ಗಿಯ ಡಾ.ಮೀನಾಕ್ಷಿ ಬಾಳಿ ಮತ್ತು ಬಾಗಲಕೋಟೆಯ ಶರಣೆ ಗೌರಮ್ಮ ನಾಶಿ ಅವರಿಗೆ ‘ವಚನ ಪ್ರಶಸ್ತಿಗೆ ಭಾಜನಾಗಿದ್ದಾರೆ. ಪುರಸ್ಕೃತರಿಗೆ ತಲಾ ೧೦ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಫಲಪುಷ್ಪ ನೀಡಿ ಮಾ.೩ ರಂದು ವಿಜಯಪುರದಲ್ಲಿ ಹಮ್ಮಿಕೊಂಡು ಗೌರವಿಸಲಾಗುವುದು ಎಂದು ಕಲಬುರಗಿ ಫೌಂಡೇಶನ್ ಅಧ್ಯಕ್ಷ ಶಿವಾನಂದ ಕಲಬುರಗಿ ತಿಳಿಸಿದ್ದಾರೆ.
ಪುರಸ್ಕಾರಕ್ಕೆ ಆಯ್ಕೆಯಾದವರ ವಿವರ:
ಡಾ.ಎಂ.ಎಸ್.ಮದಭಾವಿ ಅವರು ಬಿ.ಎಲ್.ಡಿ.ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸದ್ಯ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಹಾಗು ಕೃತಿ ಸಮೀಕ್ಷೆ ಅವರ ಸಂಶೋಧನ ಮಹಾಪ್ರಬಂಧ, ಡಾ.ಎಂ.ಎಂ.ಕಲಬುರ್ಗಿ ಅವರ ಕುರಿತು ‘ಸಾಂಸ್ಥಿಕಪ್ರಜ್ಞೆ ಎನ್ನುವ ಕೃತಿಯನ್ನು ಅವರು ರಚಿಸಿದ್ದಾರೆ. ಇದಲ್ಲದೆ ಅನೇಕ ಗ್ರಂಥಗಳ ಸಂಪಾದನೆಯನ್ನು ಮಾಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ‘ಶ್ರೀ ಸಿದ್ಧೇಶ್ವರ ರತ್ನ, ಕಾಯಕಯೋಗಿ’, ‘ಬಸವಭೂಷಣ’ ಮುಂತಾದ ಪ್ರಶಸ್ತಿಗಳನ್ನು ನೀಡಿದ್ದಾರೆ.
ಡಾ.ಮೀನಾಕ್ಷಿ ಬಾಳಿ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಸಮ ಸಮಾಜದ ಕನಸನ್ನು ನನಸಾಗಿಸಲು ತಮ್ಮನ್ನು ಸದಾ ಕ್ರಿಯಾಶೀಲವಾಗಿಸಿಕೊಂಡವರು. ತತ್ವಪದಕಾರ ಕಡಕೋಳ ಮಡಿವಾಳಪ್ಪನವರ ಬಗೆಗೆ ಸಂಶೋಧನ ಕೃತಿಯನ್ನು ರಚಿಸಿದ್ದಲ್ಲದೆ ತತ್ವಪದಗಳ ಸಂಪಾದನೆ, ವಿಶ್ಲೇಷಣೆಯನ್ನು ನಿರಂತರವಾಗಿ ಮಾಡುತ್ತ ಬಂದವರು. ಮಹಿಳೆಯರ ಹಕ್ಕುಗಳಿಗಾಗಿ ಸದಾ ಹೋರಾಟ ಮಾಡುತ್ತ ಬಂದವರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ರಾಜ್ಯ ಸಮಿತಿಯ ಅಧ್ಯಕ್ಷರಾಗಿ, ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಅಧ್ಯಕ್ಷರಾಗಿ, ಅಗ್ನಿ ಕನ್ನಡ ವಾರ ಪತ್ರಿಕೆಯ ಅಂಕಣ ಬರಹಗಾರ್ತಿಯಾಗಿ ನಿರಂತರ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ದಾಸೋಹ ಪ್ರಶಸ್ತಿ, ಕದಳಿ ಮಹಿಳಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಶರಣೆ ಗೌರಮ್ಮ ನಾಶಿ ಅವರು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು. ಸದ್ಯ ಬಾಗಲಕೋಟೆಯ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಅನುಭವ ಕಳಸ, ಅಮೃತವರ್ಷ ಮತ್ತು ‘ಅನುಭವಸಿರಿ’ ಅಭಿನಂದನಾ ಗ್ರಂಥಗಳ ಗೌರವ ಸಂಪಾದಕರಾಗಿದ್ದಾರೆ. ಶರಣ ಸಿದ್ಧಾಂತಗಳ ಅಪ್ಪಟ ಅಭಿಮಾನಿಗಳಾದ ಅವರು ಶರಣ ಸಿದ್ದಾಂತಗಳ ಪ್ರಚಾರ ಮತ್ತು ಪ್ರಸಾರದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಅಕ್ಕನ ಅರಿವು ವಚನ ಅಧ್ಯಯನವೇದಿಕೆಯ ಕ್ರಿಯಾಶೀಲ ಸದಸ್ಯರು. ಎಲೆ ಮರೆಯ ಕಾಯಿಯಂತಿದ್ದು ಸಂಘಟನೆಗಳಿಗೆ ಬೆಂಬಲಿಸುವವರಾಗಿದ್ದಾರೆ.

