ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯಿಂದ ೩೦ ಪುಸ್ತಕಗಳ ಲೋಕಾರ್ಪಣೆ | ಬೆರಗು ಪ್ರಶಸ್ತಿ ಪ್ರದಾನ |
ಆಲಮೇಲ: ಬಸವಣ್ಣನವರ ನಾಡು ವಿಜಯಪುರ ಜಿಲ್ಲೆ ನಿರಂತರವಾಗಿ ಬರಗಾಲದಿಂದ ಬಳಲಿದರೂ ಅನ್ನ ದಾಸೋಹ, ಅಕ್ಷರ ಜ್ಞಾನದ ದಾಸೋಹಕ್ಕೆ ಯಾವುದೆ ಬರವಿಲ್ಲ ಎಂದು ಹಿರಿಯ ಸಾಹಿತಿ ಡಾ| ಸಂಗಮನಾಥ ಲೋಕಾಪೂರ ಹೇಳಿದರು.
ಮಂಗಳವಾರ ಕಡಣಿಯ ಪಿ.ಬಿ. ಕಾಲೇಜು ಆವರಣದಲ್ಲಿ ಕಡಣಿಯ ಬೆರಗು ಪ್ರಕಾಶನ ಸಂಸ್ಥೆ ಹಮ್ಮಿಕೊಂಡ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಸ್ಮರಣಾರ್ಥ ಹಮ್ಮಿಕೊಂಡಿದ್ದ ೩೦ ಪುಸ್ತಕಗಳ ಲೋಕಾರ್ಪಣೆ ಹಾಗೂ ಬೆರಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯ ಶರಣರು, ಸಂತರು, ಸಾಹಿತಿಗಳು ವಿವಿದ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿ ನಾಡಿನಾದ್ಯಂತ ಹೆಸರು ಮಾಡಿದ್ದಾರೆ ಇತಿಹಾಸದ ಪುಟದಲ್ಲಿ ಉಳಿದುಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಬರಗಾಲದಿಂದ ಬಳಲಿದರೂ ಇಂದಿರಾಗಾಂಧಿ ಅವರನ್ನು ಬಂಗಾರದಲ್ಲಿ ತೂಗಿದಂತಹ ವಿಶಾಲ ಮನೋಭಾವ ಹೊಂದಿದ ಜನರು ಇಲ್ಲಿದ್ದಾರೆ ಎಂದರು.
ಶಾಸಕ ಅಶೋಕ ಮನಗೂಳಿ ೩೦ ಪುಸ್ತಕಗಳ ಲೋಕಾರ್ಪಣೆ ಮಾಡಿ ಮಾತನಾಡಿ, ಗ್ರಾಮೀಣ ಭಾಗದ ಯುವ ಸಾಹಿತಿಗಳ ಮತ್ತು ಬಡ ಸಾಹಿತಿಗಳಿಗೆ ಪ್ರೋತ್ಸಾಹ ನೀಡಲು ಕಡಣಿಯ ಬೆರಗು ಪ್ರಕಾಶನದವರು ಅವರ ಕೃತಿಗಳನ್ನು ಪ್ರಕಟಣೆ ಮಾಡುವ ಮೂಲಕ ಪುಸ್ತಕದ ಕ್ರಾಂತಿ ಮಾಡುತ್ತಿದ್ದಾರೆ. ಪುಸ್ತಕ ಪ್ರಕಟಣೆ ಕೆಲಸ ಕಷ್ಟದ ಕೆಲಸವಾದರೂ ಗ್ರಾಮೀಣ ಭಾಗದಲ್ಲಿ ಬೆರಗು ಪ್ರಕಾಶನ ಪ್ರಾರಂಭಿಸಿ ಮೂರು ನಾಲ್ಕು ವರ್ಷದಲ್ಲಿ ನೂರಕ್ಕು ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವುದು ಶ್ಲಾಘನಿಯ. ಇಂತಹ ಪ್ರಕಾಶನಗಳಿಗೆ ಪ್ರೋತ್ಸಾಹ ನೀಡಿದರೆ ಲೇಖಕರ ವಿಚಾರಧಾರೆಗಳು ಹೊರಬರಲು ಸಾದ್ಯವಾಗುವುದು ಎಂದರು.
ಬೆರಗು ಪ್ರಕಾಶನ ಸಂಸ್ಥೆಯವರು ನೀಡುವ ಪ್ರಶಸ್ತಿಗೆ ನಮ್ಮ ತಂದೆ ದಿ. ಎಂ.ಸಿ. ಮನಗೂಳಿ ಅವರ ಹೆಸರಿನಲ್ಲಿ ಪ್ರತಿ ವರ್ಷ ರೂ.೨೫ ಸಾವಿರ ಪ್ರಶಸ್ತಿಗೆ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ ಶಾಸಕ ಮನಗೂಳಿ,
ಆಲಮೇಲ ತಾಲೂಕಿನ ಬೆರಗು ಮತ್ತು ಸಿಂದಗಿಯ ನೆಲೆ ಈ ಎರಡೂ ಪ್ರಕಾಶನ ಸಂಸ್ಥೆಗಳು ನಾಡಿನಾದ್ಯಂತ ಅಕ್ಷರದ ಕ್ರಾಂತಿ ಮಾಡುತ್ತಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಗುಲಬರ್ಗಾ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಎಚ್.ಟಿ. ಪೋತೆ ಮಾತನಾಡಿ, ಅಕ್ಷರದಂತ ಜ್ಞಾನದ ಕ್ರಾಂತಿ ಎಲ್ಲಿ ಇರುತ್ತದೆಯೋ ಅಲ್ಲಿ ಸಮಾನತೆ ಇರುತ್ತದೆ. ಅದಕ್ಕೆ ಅಕ್ಷರದ ಕ್ರಾಂತಿ ನಿರಂತರವಾಗಿರಬೇಕು ಎಂದು ಹೇಳಿದರು.
೨೦೨೩ನೇ ಸಾಲಿನ ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಸಾಹಿತಿ ದಾರವಾಡದ ಡಾ| ಸಂಗಮನಾಥ ಲೋಕಾಪೂರ ಅವರಿಗೆ ಪ್ರಶಸ್ತಿ ಫಲಕ ಸ್ಮರಣಿಕೆ ಹಾಗೂ ರೂ.೧೦ ಸಾವಿರ ನಗದು ನೀಡಿ ಶಾಸಕ ಮನಗೂಳಿ ಗೌರವಿಸಿದರು.
ಬೆರಗು ಪುಸ್ತಕ ಪ್ರಶಸ್ತಿಯನ್ನು ದಿ. ಯಮನಾಬಾಯಿ ಭೋವಿ ಅವರ ಸ್ಮರಣಾರ್ಥ ಧರೆಗೆ ದೊಡ್ಡವರು ಕಾದಂಬರಿ ಲೇಖಕ ಡಾ| ಲಕ್ಷ್ಮಣ ಕೌಂಟೆ ಅವರಿಗೆ ಸ್ಮರಣಿಕೆ ಮತ್ತು ರೂ.೫ ಸಾವಿರ ನಗದಿನೊಂದಿಗೆ ಪ್ರದಾನ ಮಾಡಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ| ಲಕ್ಷ್ಮಣ ಕೌಂಟೆ ಮಾತನಾಡಿದರು.
ಕಡಣಿ ಗ್ರಾ.ಪಂ ಅಧ್ಯಕ್ಷ ಬಸಲಿಂಗಪ್ಪ ಕತ್ತಿ, ಭೋಗಣ್ಣ ಲಾಳಸಂಗಿ, ಬಸವರಾಜ ತಾವರಗೇರಿ, ಬೆರಗು ಪ್ರಕಾಶನ ಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮೀ ಕತ್ತಿ, ಪ್ರಾಚಾರ್ಯ ಆರ್.ಎಸ್. ಗಂಗನಳ್ಳಿ ಉಪಸ್ಥಿತರಿದ್ದರು.
ಹಿರಿಯ ಸಾಹಿತಿಗಳಾದ ಡಾ| ಚನ್ನಪ್ಪ ಕಟ್ಟಿ, ಡಾ| ಎಂ.ಎಂ. ಪಡಶೆಟ್ಟಿ, ಸಿದ್ದರಾಮ ಉಪ್ಪಿನ, ಕಸಾಪ ತಾಲೂಕ ಅಧ್ಯಕ್ಷ ಶಿವಶರಣ ಗುಂದಗಿ, ರಾಜಣ್ಣ ಭೋವಿ, ಅವಧೂತ ಬಂಡಗಾರ, ಉಮೇಶ ಕ್ಷತ್ರಿ ಹಾಗೂ ೩೦ ಪುಸ್ತಕಗಳ ಲೇಖಕರು, ದಾನಿಗಳು ಇದ್ದರು.

