ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಗೆ ಹೊನ್ನುಟಗಿಯಲ್ಲಿ ಸಚಿವ ಡಾ.ಎಂ.ಬಿ.ಪಾಟೀಲ ಚಾಲನೆ
ವಿಜಯಪುರ: ಬರಗಾಲ ನಿವಾರಣೆಗೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೃಷಿಯ ಸುಸ್ಥಿರತೆಗಾಗಿ ನವೀನ ಅಭಿವೃದ್ದಿಯ ಮೂಲಕ ಒಟ್ಟು ೬೧೬೬.೦೮ ಹೆಕ್ಟೇರ್ ಜಲಾನಯನ ಪ್ರದೇಶವನ್ನು ವಿಶ್ವ ಬ್ಯಾಂಕ್ ನೆರವಿನಿಂದ ಪುನಶ್ಚೇತನಗೊಳಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಜಿಲ್ಲೆಯ ಹೊನ್ನುಟಗಿಯಲ್ಲಿ ಕೃಷಿ ಇಲಾಖೆ, ಜಲಾನಯನ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವಿಜಯಪುರ ಇವರ ಸಹಯೋಗದಲ್ಲಿ ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೊನ್ನುಟಗಿ ಉಪಜಲಾನಯನ ಪ್ರದೇಶದಲ್ಲಿ ವಿಶ್ವ ಬ್ಯಾಂಕ್ನ ಆರ್ಥಿಕ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿರುವ ಪುನಶ್ಚೇತನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಹೊನ್ನುಟಗಿ, ಹಡಗಲಿ, ಕುಮಟಗಿ, ಮದಭಾವಿ ಹಾಗೂ ಆಹೇರಿ ಗ್ರಾಮ ಪಂಚಾಯತಿಗಳು ಒಳಪಡಲಿದ್ದು, ಜಿಲ್ಲೆಯ ರೈತರ ಕಾಪಾಡುವಲ್ಲಿ ಜಿಲ್ಲೆಯ ರೈತರಿಗೆ ನೀರು ಒದಗಿಸುವದೇ ಆದ್ಯತೆಯಾಗಿದು, ಇಂತಹ ಕಾರ್ಯಕ್ರಮಗಳು ಪೂರ್ವತಯಾರಿ ಕೆಲಸ ಭಾಗವೇ ಆಗಿದೆ ಎಂದು ಹೇಳಿದರು.
೨೦೧೩-೧೮ರ ಅವಧಿಯಲ್ಲಿ ನೀರಾವರಿ ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಕೈಗೊಂಡ ನೀರಾವರಿ ಕಾಮಗಾರಿಗಳ ಹಿನ್ನಲೆಯಲ್ಲಿ ಇಂತಹ ಬರಗಾಲದಲ್ಲಿ ಸಂದರ್ಭದಲ್ಲಿಯೂ ಸಹ ಕುಡಿಯುವ ನೀರಿನ ೮ ಟ್ಯಾಂಕರ್ ಮಾತ್ರ ಸಮಸ್ಯೆ ಇದ್ದಲ್ಲಿ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಕೆರೆ ತುಂಬುವ ಯೋಜನೆಗಳಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ೧೫೯ ಹಳ್ಳ ತುಂಬುವ ಯೋಜನೆೆ ಸಿದ್ಧಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಹಳ್ಳ ತುಂಬುವ ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಳದಿಂದ ರೈತರಿಗೆ ಅನುಕೂಲ ಒದಗಿಸುವ ಮೂಲಕ ವಿಜಯಪುರ ಕಡೆ ಇಡೀ ದೇಶವೆ ತಿರುಗಿ ನೋಡಲಿದೆ ಎಂದು ಹೇಳಿದರು.
ಕೆನಾಲ್ ನೆಟವರ್ಕ್ ಮೇಲೆ ಸುಮಾರು ೧೫೯ ಹಳ್ಳಗಳ ಜಿಲ್ಲೆಯ ಸುಮಾರು ೪೦೦ ಹಳ್ಳಿಗಳಿಗೆ ಅನುಕೂಲವಾಗಲಿದೆ. ಆ ಹಳ್ಳಗಳಿಗೆ ೫೦೦ ಮೀಟರ್ಗೊಂದು ಚೆಕ್ಡ್ಯಾಂ ನಿರ್ಮಿಸಿ, ಅಲ್ಲಿ ನೀರೆಲ್ಲ ಇಂಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಈ ಯೋಜನೆಗೆ ಸುಮಾರು ೧೨೦ ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಇಡೀ ದೇಶವೆ ವಿಜಯಪುರ ಜಿಲ್ಲೆಯನ್ನು ಮಾದರಿಯಾಗಿಸಿಕೊಳ್ಳಲಿದೆ ಎಂದು ಹೇಳಿದರು.
ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ನೀರಾವರಿಗೆ ಒತ್ತು ನೀಡಿದಂತೆ ರೈತರ ಅನುಕೂಲಕ್ಕಾಗಿ ವಿದ್ಯುಚ್ಛಕ್ತಿಗೂ ಆದ್ಯತೆ ನೀಡಿ ಸರಾಗವಾಗಿ ವಿದ್ಯುತ್ ವ್ಯವಸ್ಥೆಗೆ ವಿವಿಧ ವಿದ್ಯುತ್ ಸರಬರಾಜು ಸ್ಟೇಶನ್ಗಳ ನಿರ್ಮಾಣ, ನೀರಾವರಿ ಯೋಜನೆಗಳಿಗಾಗಿ ೯ ಸ್ಥಾವರ ಮತ್ತು ಒಂದು ಸಾವಿರ ಕಿ.ಮೀ. ಮುಖ್ಯ ಕಾಲುವೆ ನಿರ್ಮಾಣ ಮಾಡಲಾಗಿದೆ. ೧೪ ಸಾವಿರ ಕೋಟಿ ವೆಚ್ಚದಲ್ಲಿ ರೈತರ ಜಮೀನುಗಳಿಗೆ ನೀರು ಹರಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ನಾಗಠಾಣ ಶಾಸಕರಾದ ವಿಠ್ಠಲ ಕಟದಕೊಂಡ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಸಂಬಂಧಿಸಿದ ವಿವಿಧ ಗ್ರಾಮ ಪಂಚಾಯತಿಯ ಅಧ್ಯಕ್ಷರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.

