ಕನಮಡಿಯಲ್ಲಿ 110ಕೆ.ವಿ. ವಿದ್ಯುತ್ ವಿತರಣೆ ಕೇಂದ್ರಕ್ಕೆ ಭೂಮಿಪೂಜೆ ಸಲ್ಲಿಸಿದ ಸಚಿವ ಎಂ.ಬಿ.ಪಾಟೀಲ ಮಾಹಿತಿ
ವಿಜಯಪುರ: ಜಿಲ್ಲೆಯಲ್ಲಿ ನೀರಾವರಿ ಜೊತೆಗೆ ವಿದ್ಯುತ್ ಕ್ಷೇತ್ರದಲ್ಲಿಯೂ ಕ್ರಾಂತಿಕಾರಿ ಕೆಲಸಗಳಾಗಿದ್ದು ವಿಜಯಪುರವನ್ನು ದೇಶದಲ್ಲಿಯೇ ಅತ್ಯಂತ ಶ್ರೀಮಂತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ಮಿಸಲಾಗುತ್ತಿರುವ 110 ಕೆ.ವಿ. ವಿದ್ಯುತ್ ವಿತರಣೆ ಕೇಂದ್ರಕ್ಕೆ ಭೂಮಿಪೂಜೆ ರವಿವಾರ ಸಂಜೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯುತ್ ಕ್ಷೇತ್ರದಲ್ಲಿ ಕಳೆದ 65 ವರ್ಷಗಳಲ್ಲಿ ಎಷ್ಟು ಕೆಲಸ ನಡೆದಿವೆಯೋ ಅಷ್ಟೇ ಪ್ರಮಾಣದ ಕೆಲಸಗಳು ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಆಗಿವೆ. ರೈತರಿಗೆ ನೀರಿನ ಜೊತೆ ವಿದ್ಯುತ್ ಕೂಡ ಅಷ್ಟೇ ಅಗತ್ಯವಾಗಿದೆ. ಈಗ ಕನಮಡಿಯಲ್ಲಿ ಸುಮಾರು ರೂ. 20 ಕೋ. ವೆಚ್ಚದಲ್ಲಿ ವಿದ್ಯುತ್ ಕೇಂದ್ರ ನಿರ್ಮಿಸಲಾಗುತ್ತಿದ್ದು, ಸಪ್ಟೆಂಬರ್ ವೇಳೆಗೆ ಪೂರ್ಣವಾಗಲಿದೆ. ಆಗ ಈ ಭಾಗಕ್ಕೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ಜಿಲ್ಲೆಯಲ್ಲಿ 2013ರಲ್ಲಿ 110 ಕೆವಿ ಮತ್ತು 220 ಕೆವಿಯ ಒಟ್ಟು 33 ಸ್ಟೇಷನ್ ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಈಗ ಅವುಗಳ ಸಂಖ್ಯೆ 54ಕ್ಕೇರಿದ್ದು, 2025ರ ಡಿಸೆಂಬರ್ ವರೆಗೆ ಇವುಗಳ ಸಂಖ್ಯೆ 75ಕ್ಕೇರಲಿದೆ ಎಂದು ಅವರು ತಿಳಿಸಿದರು.
ತಿಕೋಟಾ ಮತ್ತು ಬಬಲೇಶ್ವರ ತಾಲೂಕುಗಳಲ್ಲಿ ಈಗ 18 ವಿದ್ಯುತ್ ಸ್ಟೇಷನ್ ಗಳಿದ್ದು, ಈಗ ತಿಕೋಟಾ ಮತ್ತು ಬಬಲೇಶ್ವರಗಳಿಗೆ ತಲಾ ಒಂದು 220 ಕೆವಿಯ ಎರಡು ವಿದ್ಯುತ್ ವಿತರಣೆ ಕೇಂದ್ರಗಳು ಮಂಜೂರಾಗಿವೆ. ಜಿಲ್ಲೆಯಲ್ಲಿ ಬಬಲೇಶ್ವರ ವಿದ್ಯುತ್ ಕೇಂದ್ರದಲ್ಲಿ ಅತೀ ಹೆಚ್ಚಿನ ವಿದ್ಯುತ್ ಒತ್ತಡವಿದೆ. ಈಗ ಜಿಲ್ಲೆಯಲ್ಲಿ ಹೊಸದಾಗಿ ಎಂಟು 220 ಕೆವಿ ವಿದ್ಯುತ್ ಸ್ಚೇಷನ್ ಗಳನ್ನು ಸ್ಥಾಪಿಸಲಾಗುತ್ತಿದ್ದು, ಹಡಗಲಿ ಬಳಿ 400 ಕೆವಿ ವಿದ್ಯುತ್ ಸ್ಟೇಷನ್ ಮಂಜೂರಾಗಿದೆ ಎಂದು ಅವರು ತಿಳಿಸಿದರು.
ಈ ಭಾಗಕ್ಕೆ ನೀರು ಕೊಡುವುದು ಅಸಾದ್ಯ ಎಂದು ಹಲವರು ಹೇಳಿದ್ದರು. ಆದರೆ, 2013 ರಿಂದ 2018 ಅವಧಿಯಲ್ಲಿ ರಾಜ್ಯದ ಕಟ್ಟಕಡೆಯ ಗ್ರಾಮ ಕನಮಡಿಗೆ ನೀರು ಕೊಡುವ ಮೂಲಕ ಯಾವುದು ಅಸಾಧ್ಯವಾಗಿತ್ತೋ ಅದನ್ನು ಸಾಧ್ಯ ಮಾಡಿ ತೋರಿಸಿದ್ದೇನೆ. ತಿಕೋಟಾ ಮತ್ತು ಬಬಲೇಶ್ವರಗಳಲ್ಲಿ ತಲಾ ಒಂದು 220 ಕೆವಿ ಸ್ಟೇಷನ್ ಮಂಜೂರಾಗಿವೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಕೆಪಿಟಿಸಿಎಲ್ ಸುಪರಿಂಟೆಂಡೆಂಟ್ ಎಂಜಿನಿಯರ್ ಜಿ. ಕೆ. ಗೋಟ್ಯಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಕನಮಡಿಯ ವಿಜಯಕುಮಾರ ಮಹಾಸ್ವಾಮಿಗಳು, ಕೆಪಿಟಿಸಿಎಲ್ ಚೀಫ್ ಎಂಜಿನಿಯರ್ ಕೆ. ಜಿ. ಹಿರೇಮಠ, ಕನಮಡಿ ಗ್ರಾ. ಪಂ. ಅಧ್ಯಕ್ಷ ಮಹಾನಿಂಗ ಜವನರ, ಹೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿದ್ದಪ್ಪ ಬಿಂಜಗೇರಿ, ತಿಕೋಟಾ ತಹಸೀಲ್ದಾರ ಪ್ರಶಾಂತ ಚನಗೊಂಡ, ಹೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ. ಎಂ. ಚನಗೊಂಡ ಮತ್ತು ಜಗದೀಶ ಜಾಧವ, ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನ್ನವರ, ಲೋಕಯ್ಯ, ಆರ್. ಎಂ. ಮಸಳಿ, ಬಾಬುಗೌಡ ಬಿರಾದಾರ, ಶಿವಪುತ್ರ ಅವಟಿ, ಕಾಶೀನಾಥ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಎಕ್ಸಿಕ್ಯೂಟಿವ್ ಎಂಜಿನಿಯರ್ ಸುನಂದಾ ಜಂಬಗಿ ಸ್ವಾಗತಿಸಿದರು.

