ಆಲಮೇಲ ತೋಟಗಾರಿಕೆ ವಿವಿ ಮಂಜೂರಿಗೆ ಸಿಎಂ ಭರವಸೆ | ಶಾಸಕ ಅಶೋಕ ಮನಗೂಳಿ ಮಾಹಿತಿ
ಸಿಂದಗಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ನೀಡಿದ ೫ ಗ್ಯಾರಂಟಿಗಳನ್ನು ಈಡೇರಿಸಿ, ಕೊಟ್ಟ ಮಾತನ್ನೂ ಸರಕಾರ ಉಳಿಸಿಕೊಂಡಿದೆ. ಇದರ ಮದ್ಯೆದಲ್ಲಿ ಮತಕ್ಷೇತ್ರಕ್ಕೆ ೧೨೫ ಕೋಟಿ ಅನುದಾನವನ್ನು ಮಂಜೂರು ಮಾಡಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಸಚಿವ ಸಂಪುಟ ಸಹಕಾರ ನೀಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಜನತೆಯ ಪರವಾಗಿ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ೫೦ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಿಂದಗಿ ನಗರಕ್ಕೆ ಯೋಜನಾ ಪ್ರಾಧಿಕಾರವನ್ನು ಸರಕಾರದಿಂದ ಮಂಜೂರಾತಿ ಪಡೆಯಲಾಗಿದೆ. ತಾಲೂಕಿನ ಯರಗಲ್ ಬಿಕೆ, ಬಂದಾಳ, ಚಿಕ್ಕಸಿಂದಗಿ, ರಾಂಪೂರ ಮತ್ತು ಸೋಂಪೂರ ಗ್ರಾಮಗಳನ್ನು ಒಳಗೊಂಡು ಯೋಜನಾ ಪ್ರಾಧಿಕಾರ ರಚಿಸಲಾಗಿದೆ.
ಪ್ರತಿ ಶಾಸಕರಿಗೆ ನೀಡುವ ೨೫ ಕೋಟಿ ರೂ. ಅನುದಾನದಲ್ಲಿ ಸಿಂದಗಿ ಮತಕ್ಷೇತ್ರದ ೪೯ ಹಳ್ಳಿಗಳಲ್ಲಿ ೧೪ಕೋಟಿ ರೂ. ಹಣವನ್ನು ಸಿಸಿ ರಸ್ತೆ, ಚರಂಡಿ ಮತ್ತು ೮.೭೦ ಕೋಟಿ ಹಣವನ್ನು ವಿವಿಧ ಹಳ್ಳಿಗಳಲ್ಲಿನ ಸಮುದಾಯಗಳಿಗೆ ಮೀಸಲು. ೨.೩೦ ಕೋಟಿ ರೂ. ಹಣವನ್ನು ಅಲ್ಪಸಂಖ್ಯಾತರ ಸಮುದಾಯಕ್ಕೆ ಭವನ ಮತ್ತು ಸಿಸಿ ರಸ್ತೆಗೆ ಮೀಸಲಿಡಲಾಗಿದೆ.
ನಗರದ ಮುಖ್ಯ ರಸ್ತೆಗಳ ಬೀದಿ ದೀಪಗಳಿಗೆ ೫ ಕೋಟಿ, ಮುಖ್ಯ ರಸ್ತೆಗಳ ಡಿವೈಡರ್ ನಿರ್ಮಾಣಕ್ಕೆ ೧.೨೫ ಕೋಟಿ, ಸಿಂದಗಿಯಲ್ಲಿನ ಹೊನ್ನಪ್ಪಗೌಡ ಲೇವೌಟನ್ ೩ಎಕರೆ ಸರಕಾರಿ ಜಮೀನಿನಲ್ಲಿ ಅರಣ್ಯ ಇಲಾಖೆಯ ಅನುಮೋದನೆಯೊಂದಿಗೆ ೭೧ಕೋಟಿ ರೂ. ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಾಣ, ವಾಕಿಂಗ್ ಪಾರ್ಕ್ ಮತ್ತು ಸ್ವಿಮ್ಮಿಂಗ್ ಫುಲ್, ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿಗೆ ೧.೫ ಕೋಟಿ, ಕೃಷಿ ಉತನ್ನ ಮಾರುಕಟ್ಟೆಯ ಸಿಸಿ ರಸ್ತೆ ನಿರ್ಮಾಣಕ್ಕೆ ೩ ಕೋಟಿ, ಆಲಮೇಲ ಪ್ರದೇಶಾಭಿವೃದ್ಧಿಗೆ ೫ಕೋಟಿ, ಆಲಮೇಲದಲ್ಲಿರವ ಕೆರೆ ನಿರ್ಮಾಣಕ್ಕೆ ಮತ್ತು ಪ್ರಾವಸಿತಾಣ ಮಾಡುವ ನಿಟ್ಟಿನಲ್ಲಿ ೩.೫೦ ಕೋಟಿ ಯೋಜನೆ ರೂಪಿಸಲಾಗಿದೆ, ಹಂದಿಗನೂರ ಕೆರೆಯ ಅಭಿವೃದ್ಧಿಗೆ ೫೦ಲಕ್ಷ ರೂ. ತಾಲೂಕಿನ ಬ್ಯಾಕೋಡ-ಚಿಕ್ಕಸಿಂದಗಿ ರಸ್ತೆ ಬ್ರಿಡ್ಜ್ ನಿರ್ಮಾಣಕ್ಕೆ ೧.೪೦ ಕೋಟಿ ಮಂಜುರಾಗಿದೆ.
ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ೨೩ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ ತಾಲೂಕಿನ ಯಂಕಂಚಿ ಮತ್ತು ಗೋಲಗೇರಿ ಗ್ರಾಮಗಳ ಅಭಿವೃದ್ಧಿಗೆ ತಲಾ ೫೦ ಲಕ್ಷ ಅನುದಾನ, ಸಿಂದಗಿಯ ಪಜಾ ಮತ್ತು ಪಪಂ ಕಾಲೋನಿಯ ಮೂರು ಹಳ್ಳಿಗಳ ಅಭಿವೃದ್ಧಿಗೆ ತಲಾ ೨೫ಲಕ್ಷ ಅನುದಾನ ನೀಡಲಾಗಿದೆ. ಆದಷ್ಟೂ ಬೇಗ ಆಲಮೇಲ ತೋಟಗಾರಿಕೆ ವಿವಿಗೆ ಮಂಜೂರು ಮಾಡಿ ಕೊಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಆಲಮೇಲ ತಾಲೂಕಿಗೆ ಒಳಪಟ್ಟ ಗುತ್ತರಗಿ, ಭಂಟನೂರ, ಕೆರೂರ ಮತ್ತು ಹಂಚಿನಾಳ ಗ್ರಾಮಗಳನ್ನು ಮತ್ತೇ ಸಿಂದಗಿ ತಾಲೂಕಿಗೆ ಸೇರಿಸಲು ಸಚಿವರು ಭರವಸೆ ನೀಡಿದ್ದಾರೆ. ಸಿಂದಗಿಯಲ್ಲಿ ಜನಸಂಖ್ಯೆ ಹೆಚ್ಚಳದ ಪರಿಣಾಮವಾಗಿ ಒಂದು ಪೊಲೀಸ್ ಠಾಣೆ ಕಾರ್ಯನಿರತವಾಗಿದೆ. ಆದರೆ ಪಟ್ಟಣಕ್ಕೊಂದು ನಗರ ಪೊಲೀಸ್ಠಾಣೆ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಲಾಗಿದೆ.
ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಈ ಬಾರಿ ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ್ ಹಾರಿಸುವ ಇರಾದೆ ಇದೆ. ಸಿಂದಗಿ ತಾಲೂಕಿನಲ್ಲಿ ಒಟ್ಟು ೧೨ ತಾಪಂ, ಆಲಮೇಲ ತಾಲೂಕಿನಲ್ಲಿ ಒಟ್ಟು ೯ತಾಪಂ, ೭ ಜಿಪಂ ಕ್ಷೇತ್ರಗಳಿವೆ. ತಾಪಂ ಮತ್ತು ಜಿಪಂ.ಗಳಲ್ಲಿ ಕಾಂಗ್ರೆಸ್ ಬಹುಮತದ ವಿಚಾರವಾಗಿ ಚುನಾವಣೆಯ ಪೂರ್ವದಲ್ಲಿ ಮುಖಂಡರ ಕಾರ್ಯಕರ್ತರ ಸಭೆಯನ್ನು ಫೆಬ್ರುವರಿಯಲ್ಲಿ ಕಾರ್ಯಾರಂಭ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಪರುಶುರಾಮ ಕಾಂಬಳೆ, ಅರವಿಂದ ಹಂಗರಗಿ, ಡಾ.ಶಿವಾನಂದ ಹೊಸಮನಿ, ಸಿದ್ದಣ್ಣ ಹಿರೇಕುರುಬರ, ಪ್ರವೀಣ ಕಂಟಿಗೊಂಡ, ಮಹಾನಂದಾ ಬಮ್ಮಣ್ಣಿ, ಎಸ್..ಬಿ.ಖಾನಾಪೂರ ಪ್ರಸನ್ನ ಜೇರಟಗಿ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

