ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಮಾಹಿತಿ
ವಿಜಯಪುರ: ಮುಳವಾಡ ಏತನೀರಾವರಿ ಯೋಜನೆ 3ನೇ ಹಂತದ 15ನೇ ವಿತರಣೆ ಕಾಲುವೆ, 5ಎ ಮತ್ತು 5ಬಿ ಹೆಡ್ ವರ್ಕ್ ಕಾಮಗಾರಿಗಳಿಗೆ ಕೆಬಿಜೆಎನ್ಎಲ್ ಬೋರ್ಡ್ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿಯಲ್ಲಿ ಶುಕ್ರವಾರ ಮೌನೇಶ್ವರ ಮನುಕ ಕಲರ ಶಾರ್ಟಿಂಗ್ ಮಶೀನ್ ಉದ್ಘಾಟಿಸಿ ಅವರು ಮಾತನಾಡಿದರು.
ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿ ಯೋಜನೆಗಳಿಗಾಗಿ ಒಂಬತ್ತು ಸ್ಥಾವರ ಮತ್ತು 1000 ಕಿ. ಮೀ. ಮುಖ್ಯ ಕಾಲುವೆ ನಿರ್ಮಾಣ ಮಾಡಿದ್ದೇನೆ. ರೂ. 14000 ಕೋ. ಖರ್ಚು ಮಾಡಿ ಕಾಲುವೆಗಳ ಮೂಲಕ ರೈತರ ಹೊಲಗಳಿಗೆ, ಕೆರೆಗಳಿಗೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಕೂಡ ಗಣನೀಯವಾಗಿ ಹೆಚ್ಚಿದೆ. ಇದರ ಪರಿಣಾಮ ಈ ಬಾರಿ ಜಿಲ್ಲೆಯಲ್ಲಿ ತೀವ್ರ ಬರವಿದ್ದರೂ ಅದು ಅಷ್ಟೊಂದು ಪರಿಣಾಮ ಬೀರಿಲ್ಲ. ಮಹಿಳೆಯರು ಮತ್ತು ಮಕ್ಕಳು ಕುಡಿಯುವ ನೀರಿಗಾಗಿ ಅಲೆದಾಡುವುದು ತಪ್ಪಿದೆ ಎಂದು ಅವರು ತಿಳಿಸಿದರು.
ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳದ ನಂತರ ನೀರು ಬಿಡುಗಡೆಗೆ ಬೇಕಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಮಾಡಲಾಗಿದೆ. ಈಗ ಬಾಕಿ ಇರುವ 14000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಮುಳವಾಡ ಏತ ನೀರಾವರಿ ಯೋಜನೆ 3ನೇ ಹಂತದ ಕಾಮಗಾರಿಗಳಿಗೆ ಬೋರ್ಡ್ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಟೆಂಡರ್ ಕರೆದು ಭೂಸ್ವಾಧೀನ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು ರೈತರ ಜಮೀನುಗಳಿಗೆ ಶಾಶ್ವತವಾಗಿ ನೀರು ಒದಗಿಸಲಾಗುವುದು. ಇದೇ ವೇಳೆ ಕಾತ್ರಾಳ ಮತ್ತು ಜಾಲಗೇರಿ ಕೆರೆಗಳಿಗೆ ಬೇರೆ ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ನೀರಾವರಿಯಿಂದಾಗಿ ಕೃಷಿ ಚಟುವಟಿಕೆಗಳಿಗೂ ಉತ್ತೇಜನ ಸಿಕ್ಕಿದ್ದು, ರೈತರು ಸ್ವಾವಲಂಬಿಯಾಗುತ್ತಿದ್ದಾರೆ. ಅಲ್ಲದೇ, ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತಾಗಲು ಹಾಗೂ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಈಗ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ದಾವೊಸ್ ಪ್ರವಾಸದಲ್ಲಿ ಲುಲು ಮಾಲ್ ಮುಖ್ಯಸ್ಥ ಯುಸೂಫ್ ಅಲಿ ಅವರನ್ನು ಭೇಟಿ ಮಾಡಿ ವಿಜಯಪುರದಲ್ಲಿ ಆಹಾರ ಸಂಸ್ಕರಣೆ ಘಟಕ ಸ್ಥಾಪಿಸಲು ಆಹ್ವಾನ ನೀಡಿದ್ದು, ಅವರು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೇ ಬಿಎಲ್ ಆಗ್ರೋ ಕಂಪನಿಯ ಜೊತೆಗೂ ಬೃಹತ್ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ರೂಪುರೇಷೆ ಹಾಕಿಕೊಂಡು ಕೆಲಸ ಮಾಡುತ್ತಿದ್ದೇನೆ. ಮಹಾತ್ಮಾ ಗಾಂಧಿಜೀಯವರ ಕನಸಿನಂತೆ ಜಿಲ್ಲೆಯಲ್ಲಿ ಹಳ್ಳಿಗಳ ಅಭಿವೃದ್ಧಿ ಮಾಡುವ ಮೂಲಕ ಸ್ವರಾಜ್ಯ ಕನಸನ್ನು ನನಸು ಮಾಡಲಾಗುತ್ತಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಪಡಸಲಗಿ ಬಬಲಾದಿ ಮಠಾಧೀಶ ಶಿವರುದ್ರಯ್ಯ ಮಹಾಸ್ವಾಮಿಗಳು, ಚಿಕ್ಕಪಡಸಲಗಿ ಅಕ್ಕಮಹಾದೇವಿ ಆಶ್ರಮದ ಮಾತೆ ಅಕ್ಕಮಹಾದೇವಿ, ಮನುಕ ಗ್ರೇಡಿಂಗ್ ಘಟಕದ ಮಾಲಿಕ ಮತ್ತು ಪ್ರಗತಿಪರ ರೈತ ಗುರಪ್ಪ ಬಡಿಗೇರ, ಮುಖಂಡರಾದ ಬಸವರಾಜ ದೇಸಾಯಿ, ಚನ್ನಪ್ಪ ಕೊಪ್ಪದ, ಮಲ್ಲಪ್ಪ ಕೆಂಪವಾಡ, ವೈ. ಎನ್. ಪಾಟೀಲ, ರಫೀಕ ಸೋನಾರ, ನಿರ್ಮಲ ರುಣವಾಲ, ಅಶೋಕ ಕಾಖಂಡಕಿ, ಅರ್ಜುಣಗಿ, ಹೆಬ್ಬಾಳಟ್ಟಿ, ಹೊಕ್ಕುಂಡಿ, ಯಕ್ಕುಂಡಿ, ಕವಟಗಿ, ಚಿಕ್ಕಪಡಸಲಗಿ, ಕಾತ್ರಾಳ, ಚಿಕ್ಕಲಕಿ ಕ್ರಾಸ್, ಬೋಳಚಿಕ್ಕಲಕಿ ಗ್ರಾಮಗಳ ರೈತರು ಉಪಸ್ಥಿತರಿದ್ದರು.

