ಮುದ್ದೇಬಿಹಾಳದಲ್ಲಿ ವಿಳಂಬವಾದ ತಾಲೂಕಾಡಳಿತದ ಧ್ವಜಾರೋಹಣ!
ಮುದ್ದೇಬಿಹಾಳ: ಪಟ್ಟಣದಲ್ಲಿ ವಿವಿಧೆಡೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನ್ಯಾಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ ಧ್ವಜಾರೋಹಣವನ್ನು ನೆರವೇರಿಸಿದರು. ನ್ಯಾಯವಾದಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದಲ್ಲಿ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.
ಪೊಲೀಸ್ ಠಾಣೆಯ ಸಿಪಿಐ ಕಾರ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದಲ್ಲಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಕಾರ್ಯಾಲಯದ ವತಿಯಿಂದ ಪಿಎಸ್ಐ ಸಂಜೀವ ತಿಪರೆಡ್ಡಿ, ತಾಲೂಕು ಪಂಚಾಯತ ಕಾರ್ಯಾಲಯದ ವತಿಯಿಂದ ಪ್ರಭಾರ ಸಹಾಯಕ ನಿರ್ದೇಶಕ(ಪಂ.ರಾ) ಖೂಬಾಸಿಂಗ್ ಜಾಧವ, ತಾಲೂಕು ಸರ್ಕಾರಿ ಆಸ್ಪತ್ರೆಯ ವತಿಯಿಂದ ಡಾ.ಅನೀಲಕುಮಾರ ಶೇಗುಣಶಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ಡಾ.ಸತೀಶ ತಿವಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಬಿಇಓ ಬಸವರಾಜ ಸಾವಳಗಿ, ಪುರಸಭೆ ಕಾರ್ಯಾಲಯದ ವತಿಯಿಂದ ಮಲ್ಲನಗೌಡ ಬಿರಾದಾರ, ವ್ಹಿಬಿಸಿ ಹೈಸ್ಕೂಲ್ ವತಿಯಿಂದ ಮುಖ್ಯ ಗುರು ಆಯ್.ಆರ್.ಗೌಡರ, ಜ್ಞಾನಭಾರತಿ ವಿದ್ಯಾಮಂದಿರದ ವತಿಯಿಂದ ಸಂಘದ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಮಾರುತಿ ನಗರದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಯುವ ಮುಖಂಡ ಅಫ್ತಾಬ್ ಮನಿಯಾರ್ ಧ್ವಜಾರೋಹಣವನ್ನು ನೆರವೇರಿಸಿದರು.
ಪ್ರತಿಯೊಂದು ಕಚೇರಿಯ ಅಧಿಕಾರಿಗಳು, ನೌಕರರು ಶುಭ್ರ ಬಟ್ಟೆ ಧರಿಸಿ ಬೆಳಿಗ್ಗೆ ತಮ್ಮ ತಮ್ಮ ಕಚೇರಿಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
*ತಡವಾದ ತಾಲೂಕಾಡಳಿತದ ಧ್ವಜಾರೋಹಣ*
ತಾಲೂಕು ಆಡಳಿತದ ವತಿಯಿಂದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಭ್ರಮ ಮನೆ ಮಾಡಿತ್ತು. ತಾಲೂಕು ಮಟ್ಟದ ಅಧಿಕಾರಿಗಳು, ಪುರಸಭೆ ಸದಸ್ಯರು, ನಗರದ ಹಿರಿಯ ಗಣ್ಯ ವ್ಯಕ್ತಿಗಳು ಆಗಮಿಸಿದ್ದರು. ಪ್ರತೀ ವರ್ಷದಂತೆ ವಿದ್ಯಾರ್ಥಿಗಳು ತಮ್ಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಲು ಅತ್ಯಂತ ಉಸ್ತುಕರಾಗಿ ಕಾಯುತ್ತಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಧ್ವಜಾರೋಹಣದ ಸಮಯವನ್ನು ಬೆಳಿಗ್ಗೆ ೯ಗಂಟೆಗೆ ಎಂದು ನಿಗದಿಪಡಿಸಿದ್ದ ತಾಲೂಕು ಆಡಳಿತ ೧೦ಗಂಟೆ ೦೯ನಿಮಿಷಕ್ಕೆ ಧ್ವಜಾರೋಹಣವನ್ನು ನೆರವೇರಿಸಿ ದೇಶಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ಧ್ವಜಾರೋಹಣ ತಡವಾಗಿದ್ದಕ್ಕೆ ವಿದ್ಯಾರ್ಥಿಗಳು, ಪಾಲಕರು ಕೆಲ ಶಿಕ್ಷಕರು ಗೊಣಗಲಾರಂಭಿಸಿದ್ದರು. ಸೇರಿದ್ದ ಜನತೆಯನ್ನು ಸಮಾಧಾನ ಪಡಿಸಲು ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತಿದ್ದ ಶಿಕ್ಷಕ ಟಿ.ಡಿ.ಲಮಾಣಿ ದೇಶಭಕ್ತಿ ಗೀತೆ ಹಾಡಿ ವಿದ್ಯಾರ್ಥಿಗಳ ಬಳಿ ದೇಶ ಭಕ್ತಿ ಗೀತೆಗಳನ್ನು ಹಾಡಿಸಿದರು.
ತಹಶೀಲ್ದಾರ ಬಲರಾಮ ಕಟ್ಟಿಮನಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಾಸಕ ಸಿ.ಎಸ್.ನಾಡಗೌಡರು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿದರು.
ಪಿಎಸ್ಐ ಸಂಜೀವ ತಿಪರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ, ಎನ್ಸಿಸಿ, ಸ್ಕೌಟ್ ಮತ್ತು ಗೈಡ್ಸ್, ರೇವಣ ಸಿದ್ದೇಶ್ವರ, ಸರ್ಕಾರಿ ಉರ್ದು, ಸಂತ ಕನಕದಾಸ, ಸರ್ಕಾರಿ, ಟಿಎಸ್ಎಸ್, ಎಸ್ಎಸ್ಎಂ ಮತ್ತು ಜ್ಞಾನ ಭಾರತಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು.
ಪ್ರೌಢ ಶಾಲೆಗಳ ಪಥಸಂಚನದ ಸ್ಪರ್ದೆಯಲ್ಲಿ ಜ್ಞಾನ ಭಾರತಿ ಪ್ರಥಮ, ಎಸ್.ಎಸ್.ಎಂ ದ್ವಿತೀಯ, ಟಿ.ಎಸ್.ಎಸ್ ಮತ್ತು ಯು.ಜಿ.ಎಚ್.ಎಸ್ ಶಾಲೆಗಳು ತೃತೀಯ ಸ್ಥಾನ ಪಡೆದುಕೊಂಡವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂತ ಕನಕದಾಸ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಯು.ಜಿ.ಎಚ್.ಪಿ.ಎಸ್ ದ್ವಿತೀಯ, ಆಕ್ಸ್ಫರ್ಡ ಎಚ್.ಪಿ.ಎಸ್ ತೃತಿಯ ಸ್ಥಾನವನ್ನು ಪಡೆದು ಸಂಭ್ರಮಿಸಿದವು.

